Raichur | ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ: ಇನ್ಸ್ಟಾಗ್ರಾಮ್ ಖಾತೆ ವಿರುದ್ಧ ಯುವ ಕಾಂಗ್ರೆಸ್ ದೂರು

ರಾಯಚೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ವಿಡಿಯೋ ಪ್ರಕಟಿಸಿರುವ ಇನ್ಸ್ಟಾಗ್ರಾಮ್ ಖಾತೆಯ ವಿರುದ್ಧ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಾರಿಸ್ವಾಮಿ ಗಟ್ಟುಬಿಚ್ಚಾಲಿ ಅವರ ನೇತೃತ್ವದಲ್ಲಿ ಸಲ್ಲಿಸಲಾದ ದೂರಿನಲ್ಲಿ, @desi_to_digital_channel ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಗೊಂಡಿರುವ ವಿಡಿಯೋದಲ್ಲಿ ಮುಖ್ಯಮಂತ್ರಿ ವಿರುದ್ಧ ವೈಯಕ್ತಿಕ ನಿಂದನೆ, ಅವಹೇಳನಕಾರಿ ಹಾಗೂ ಅಶ್ಲೀಲ ಪದಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ವಿಡಿಯೋದಲ್ಲಿ ಮುಖ್ಯಮಂತ್ರಿ ವಿರುದ್ಧ ತೇಜೋವಧೆ ಮಾಡುವುದರ ಜೊತೆಗೆ ನೆರೆಯ ತಮಿಳುನಾಡು ರಾಜ್ಯ ಹಾಗೂ ಅಲ್ಲಿನ ಜನರ ವಿರುದ್ಧ ಪ್ರಾದೇಶಿಕ ದ್ವೇಷ ಮತ್ತು ಹಗೆತನವನ್ನು ಪ್ರಚೋದಿಸುವ ಅಂಶಗಳಿದ್ದು, ಇದು ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್ಎಸ್)ಯ ಸಂಬಂಧಿತ ವಿಧಿಗಳು, ಅಪರಾಧಿಕ ಮಾನಹಾನಿ, ಸಾರ್ವಜನಿಕವಾಗಿ ಅಶ್ಲೀಲ ಪದಬಳಕೆ ಹಾಗೂ ಪ್ರಾದೇಶಿಕ ದ್ವೇಷ ಹರಡುವ ಆರೋಪಗಳಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಒತ್ತಾಯಿಸಿದೆ.
ಡಿಜಿಟಲ್ ಪುರಾವೆಗಳನ್ನು ತಕ್ಷಣವೇ ಸಂರಕ್ಷಿಸಿ, ಸಂಬಂಧಿತ ಇನ್ಸ್ಟಾಗ್ರಾಮ್ ಖಾತೆಯ ಹಿಂದಿರುವ ವ್ಯಕ್ತಿಯನ್ನು ಗುರುತಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಪೊಲೀಸರಿಗೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮರಿಸ್ವಾಮಿ ಗಟ್ಟು ಬಿಚ್ಚಾಲಿ, ಹುಸೇನ್, ಮೊಹಮ್ಮದ್ ಶಹಬಾಜ್, ಯೇಸುದಾಸ್, ರಾಘವೇಂದ್ರ, ಮಧು, ಎಂ. ಡಿ.ಜಾವಿದ್, ಚೇತನ್ ನಾಯಕ್, ವಿನಯ್, ಬಸವರಾಜ ಆರ್. ಸೇರಿದಂತೆ, ಯುವ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.






