Raichur | 1 ಲಕ್ಷದೊಳಗಿನ ಬಿಲ್ ಪಾವತಿಯಲ್ಲಿ ಮೀಸಲಾತಿ ನಿಯಮ ಉಲ್ಲಂಘನೆ ಆರೋಪ: ಮರುಪರಿಶೀಲನೆಗೆ ಆಗ್ರಹ

ರಾಯಚೂರು : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ (RDWSD), ರಾಯಚೂರು ಹಾಗೂ ಅದರ ಅಧೀನ ಕಚೇರಿಗಳಲ್ಲಿ 1 ಲಕ್ಷ ರೂ. ಒಳಗಿನ ಖರೀದಿ, ಕಾಮಗಾರಿ ಮತ್ತು ಸೇವೆಗಳಿಗೆ ಸಂಬಂಧಿಸಿದ ಬಿಲ್ ಪಾವತಿಯಲ್ಲಿ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ಮರುಪರಿಶೀಲನೆ ನಡೆಸಬೇಕು ಎಂದು ದಲಿತ ಸೇನೆ ರಾಷ್ಟ್ರೀಯ ಸಂಘಟನೆಯ ರಾಯಚೂರು ಜಿಲ್ಲಾ ಅಧ್ಯಕ್ಷ ಮಾರುತಿ ಕಮ್ತೋಳ್ ಆಗ್ರಹಿಸಿದ್ದಾರೆ.
ಈ ಕುರಿತು ಆ.11ರಂದು ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕರಿಗೆ ಮರುಪರಿಶೀಲನಾ ಮನವಿ ಸಲ್ಲಿಸಿರುವ ಅವರು, ಈ ಹಿಂದೆ ಮಾ.12ರಂದು ಸಲ್ಲಿಸಿದ್ದ ದೂರಿಗೆ ಖಜಾನೆ ಇಲಾಖೆ ಆ.5ರಂದು ನೀಡಿರುವ ಉತ್ತರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಮಾರುತಿ ಕಮ್ತೋಳ್ ಅವರ ಆರೋಪದಂತೆ, 2006ರ ಡಿ.29ರಂದು ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ವಯ 1 ಲಕ್ಷ ರೂ. ಒಳಗಿನ ಕೆಲವು ಸರ್ಕಾರಿ ಖರೀದಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ನಿಗದಿಪಡಿಸಿರುವ ಆದ್ಯತೆ ಹಾಗೂ ಮೀಸಲಾತಿ ನಿಯಮಗಳನ್ನು ಪಾಲಿಸಬೇಕಿದೆ. ಆದರೆ RDWSD ರಾಯಚೂರು ವಿಭಾಗ ಹಾಗೂ ಅಧೀನ ಕಚೇರಿಗಳಲ್ಲಿ ಈ ನಿಯಮಗಳನ್ನು ಪಾಲಿಸದೆ ಬಿಲ್ ಪಾವತಿಸಲಾಗಿದೆ ಎಂದು ಅವರು ದೂರಿದ್ದಾರೆ.
ತಮ್ಮ ದೂರಿಗೆ ಖಜಾನೆ ಇಲಾಖೆಯಿಂದ ಮೀಸಲಾತಿ ನಿಯಮ ಪಾಲನೆಯಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಧಿಕಾರ ಖಜಾನೆಗೆ ಇಲ್ಲ ಹಾಗೂ ಬಿಲ್ ತಡೆಹಿಡಿಯುವ ಅಧಿಕಾರವೂ ಇಲ್ಲ ಎಂಬ ಉತ್ತರ ಬಂದಿದೆ ಎಂದು ಮಾರುತಿ ತಿಳಿಸಿದ್ದಾರೆ. ಈ ನಿಲುವು KTC, KFC ಹಾಗೂ MCE ನಿಯಮಗಳ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
RDWSD ಇಲಾಖೆಯಿಂದ ಇದುವರೆಗೆ 1 ಲಕ್ಷ ರೂ. ಒಳಗೆ ಪಾವತಿಸಲಾದ ಎಲ್ಲ ಬಿಲ್ಗಳ ವೌಚರ್ ಸಂಖ್ಯೆ, ದಿನಾಂಕ, ಮೊತ್ತ ಹಾಗೂ ಸಂಬಂಧಿತ ಫಲಾನುಭವಿಗಳ ವಿವರಗಳನ್ನು ಪಡೆದು ಪರಿಶೀಲಿಸಬೇಕು. ಮೀಸಲಾತಿ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮವಾಗಿ ಪಾವತಿಯಾಗಿರುವ ಮೊತ್ತವಿದ್ದರೆ ಅದನ್ನು ವಸೂಲಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
15 ದಿನಗಳೊಳಗೆ ಕೈಗೊಂಡ ಕ್ರಮದ ವರದಿ ನೀಡದಿದ್ದರೆ ಕರ್ನಾಟಕ ಮಾಹಿತಿ ಆಯೋಗ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸುವುದಾಗಿ ಮಾರುತಿ ಕಮ್ತೋಳ್ ಎಚ್ಚರಿಸಿದ್ದಾರೆ. ಮನವಿಯ ಪ್ರತಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಖಜಾನೆ ಇಲಾಖೆಯ ನಿರ್ದೇಶಕರು ಹಾಗೂ ಲೋಕಾಯುಕ್ತರಿಗೂ ಸಲ್ಲಿಸಿದ್ದಾರೆ.






