ರಾಯಚೂರು | ಬುಡ್ಗಾ ಅಲೆಮಾರಿ ಸಮುದಾಯಗಳ ಕಾಲೋನಿಗಳಲ್ಲಿ ಮೂಲಸೌಕರ್ಯ ಒದಗಿಸಲು ಮನವಿ

ರಾಯಚೂರು: ತಾಲೂಕಿನ ಮಮದಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಹೊಸೂರು ಗ್ರಾಮದ ಸೀಮಾಂತರ ವ್ಯಾಪ್ತಿಗೆ ಒಳಪಟ್ಟ ಸಿ.ಎನ್ ಕಾಲೋನಿಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡ್ಗ ಜಂಗಮ ಅಲೆಮಾರಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ರಾಯಚೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ರಾಯಚೂರು ತಾಲೂಕಿನ ತಹಶೀಲ್ದಾರ್ ಸುರೇಶ್ ವರ್ಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಿಎನ್ ಕಾಲೋನಿಯ ಜನರು ಕಳೆದ ಐದಾರು ವರ್ಷಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದಾರೆ. ಇಂದಿಗೂ ಸರ್ಕಾರದಿಂದ ದೊರೆಯಬೇಕಾದ ಮೂಲಭೂತ ನಾಗರಿಕ ಸೌಲಭ್ಯಗಳು ದೊರೆತಿಲ್ಲ. ಹೇಗೋ ಕಷ್ಟಪಟ್ಟು ದುಡಿದು ಸಾಲಗಳನ್ನು ಮಾಡಿಕೊಂಡು ಒಂದು ಕಡೆ ನೆಲೆನಿಲ್ಲಬೇಕು ಎಂದು ಒಂದಿಷ್ಟು ಬದುಕಲು ಜಾಗವನ್ನು ಮಾಡಿಕೊಂಡಿದ್ದಾರೆ. ಆ ಜಾಗದಲ್ಲಿ ಗುಡಿಸಲು ಅಥವಾ ಶೆಡ್ ಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಆದರೆ ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ, ಆರೋಗ್ಯ ಸೌಲಭ್ಯಗಳು, ಶಿಕ್ಷಣದ ಸೌಲಭ್ಯಗಳು ಸೇರಿದಂತೆ ಮೊದಲಾದ ಅಗತ್ಯ ಸೌಲಭ್ಯಗಳು ಇಲ್ಲ.
ಸರ್ಕಾರವು ಅಲೆಮಾರಿ ಹಾಗೂ ಅರ್ಧ ಅಲೆಮಾರಿ ಜನಾಂಗಗಳ ಪುನರ್ವಸತಿ ಮತ್ತು ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿದೆ. ಬುಡ್ಗ ಜಂಗಮ ಸಮುದಾಯದವರಿಗೂ ಆ ಯೋಜನೆಗಳ ಅಡಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಶೀಘ್ರದಲ್ಲಿ ಕಲ್ಪಿಸಿಕೊಡಬೇಕೆಂದು ಎಐಡಿವೈಒ ಸಂಘಟನೆ ಒತ್ತಾಯಿಸಿದೆ.
ಕೂಡಲೇ ಅಲೆಮಾರಿ ಬುಡ್ಗ ಜಂಗಮ ಜನರು ವಾಸಿಸುವ ಸ್ಥಳವನ್ನು ಪಂಚಾಯತ್ ವ್ಯಾಪ್ತಿ ಅಥವಾ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ತಂದು ನಾಗರಿಕ ಸೌಲಭ್ಯಗಳನ್ನು ನೀಡಬೇಕು. ಕೂಡಲೇ ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ಸೌಲಭ್ಯ ಕಲ್ಪಿಸಬೇಕು. ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ಸೌಲಭ್ಯ ಒದಗಿಸಬೇಕು. ಹಿರಿಯರಿಗೆ ಪಿಂಚಣಿ ಹಾಗೂ ಆರೋಗ್ಯ ಸೌಲಭ್ಯ ನೀಡಬೇಕು. ವಿದ್ಯುತ್ ಕಂಬಗಳನ್ನು ಹಾಕಿ ಮನೆಮನೆಗೂ ವಿದ್ಯುತ್ ಸೌಲಭ್ಯವನ್ನು ಒದಗಿಸಬೇಕು ಒತ್ತಾಯಿಸಿದೆ.
ಈ ವೇಳೆ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್, ಶಿವಪ್ಪ ಅಸ್ಕಿಹಾಳ್ ಹಿರಿಯರಾದ ವೀರೇಶ್ ಬಾಬು, ಮಹೇಂದ್ರ ಸಿಂಗ್, ಶಾಂತಗೌಡ ಸುಬೇದಾರ್, ರಂಗನಾಥ್, ಅಲೆಮಾರಿ ಸಮುದಾಯದ ವೆಂಕಟೇಶ್, ಅಂಬಣ್ಣ, ಜಾನ್, ಸರೋಜಮ್ಮ, ಶೃತಿ, ಜ್ಯೋತಿ, ನರಸಿಂಹ ಮುಂತಾದವರು ಇದ್ದರು.







