ರಾಯಚೂರು | ನಗರ, ಗ್ರಾಮೀಣ ಪ್ರದೇಶದ ಆಸ್ಪತ್ರೆಗಳ ಮೇಲೆ ದಾಳಿ : ಕೆಲವು ಆಸ್ಪತ್ರೆಗಳಿಗೆ ಬೀಗ

ರಾಯಚೂರು : ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ರಾಯಚೂರು ಮತ್ತು ಆರೋಗ್ಯ ಇಲಾಖೆಯಿಂದ ಸೆ.10ರಂದು ನಡೆದ ಜಂಟಿ ಕಾರ್ಯಚರಣೆಯಲ್ಲಿ ಕೆಲ ಆಸ್ಪತ್ರೆಗಳನ್ನು ಜಪ್ತಿ ಮಾಡಲಾಗಿದೆ.
ರಾಯಚೂರು ನಗರ ಮತ್ತು ರಾಯಚೂರು ಗ್ರಾಮಾಂತರದಲ್ಲಿ ಕೆಪಿಎಂಇ ನೋಂದಣಿ ಇಲ್ಲದಿರುವ ಹಾಗೂ ನಕಲಿ ವೈದ್ಯರ ಆಸ್ಪತ್ರೆಗಳ ಮೇಲೆ ದಾಳಿ ಮಾಡಲಾಯಿತು.
ಸಹಾಯಕ ಆಯುಕ್ತರ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಆಯುಷ್ ಅಧಿಕಾರಿಗಳು ಮತ್ತು ಭಾರತೀಯ ವೈದ್ಯಕೀಯ ಸಂಘದ ಸದಸ್ಯ ಕಾರ್ಯದರ್ಶಿ ಅವರನ್ನೋಳಗೊಂಡ ತಂಡವು ರಾಯಚೂರು ನಗರದ ಅಗವಾರಲ್ ಪಾಲಿಕ್ಲಿನಿಕ್ ರಾಯಚೂರು, ಸನ್ನಿಧಿ ಕ್ಲಿನಿಕ್ ರಾಯಚೂರು, ಮಾಣಿಕರಾವ್ ಕ್ಲಿನಿಕ್ ರಾಯಚೂರು, ಅಲ್ ಸಲಾಮ್ ಕ್ಲೀನಿಕ್, ಸೇವಾ ಕ್ಲಿನಿಕ್ ರಾಯಚೂರು ಮತ್ತು ಅಜಮ್ ಕ್ಲೀನಿಕ್ ಗೆ ಭೇಟಿ ನೀಡಿ ಕಾಯ್ದೆಯಡಿಯಲ್ಲಿ ಜಪ್ತಿ ಮಾಡಿದರು ಮತ್ತು ಈ ಕ್ಲಿನಿಕ್ ಗಳಿಗೆ ನಿಯಮದಡಿ ದಂಡವಿಧಿಸುವ ಎಚ್ಚರಿಕೆ ನೀಡಿದರು.
ನ್ಯೂ ಲೈಫ್ ಲೈನ್ ಆಸ್ಪತ್ರೆ ರಾಯಚೂರು, ನಬಿ.ಕುಮಾರ್ ರಾಯಚೂರು, ಫಾರ್ಚುನ್ ಆಸ್ಪತ್ರೆ ರಾಯಚೂರು, ಗಾರಲದಿನ್ನಿ ಕ್ಲಿನಿಕ್ ರಾಯಚೂರು, ಜನತಾ ಆಸ್ಪತ್ರೆ ರಾಯಚೂರು ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಬಗ್ಗೆ ಪರಿಶೀಲಿಸಿದರು.
ಕೆಪಿಎಂಇ ಕಾಯ್ದೆಯ ನಿಯಮಗಳನ್ನು ಪಾಲಿಸಲು ತಂಡದ ಸದಸ್ಯರು ಸೂಚನೆ ನೀಡಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದ ರಿಜಸ್ಟ್ರರ್ ಅವರನ್ನೊಳಗೊಂಡ ಎರಡನೇ ತಂಡವು ಯರಗೇರಾದ ಗಫೂರು ಕ್ಲಿನಿಕ್ ಗೆ ಭೇಟಿ ಮಾಡಿ ಜಪ್ತಿ ಮಾಡಿತು. ಬಳಿಕ ರಾಯಚೂರಿನ ಮೆಡಿಕೇರ್ ಕ್ಲಿನಿಕ್, ಪೂಜಾರಿ ಕ್ಲಿನಿಕ್, ವಕ್ಫ್ ಆಸ್ಪತ್ರೆಗೆ ಭೇಟಿ ನೀಡಿ ಕೆಪಿಎಂಇ ಕಾಯ್ದೆಯಡಿ ನೋದಣಿ ಮಾಡಿದ ಬಗ್ಗೆ ಪರಿಶೀಲಿಸಿದರು. ಕೆಪಿಎಂಇ ಕಾಯ್ದೆಯ ನಿಯಮಗಳನ್ನು ಪಾಲಿಸಲು ತಂಡದ ಸದಸ್ಯರು ಸೂಚನೆ ನೀಡಿದರು.
ಕೆಪಿಎಂಇ ಕಾಯ್ದೆಯಡಿ ಯಾರು ನೊಂದಣಿ ಮಾಡಿಲ್ಲವೋ ಅಂತಹವರ ವಿರುದ್ಧ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದೇ ಆಸ್ಪತ್ರೆ ನಡೆಸಿದಲ್ಲಿ ಅಂತಹ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.







