ರಾಯಚೂರು | ಬಿಜೆಪಿಯ ಯುವ ಮುಖಂಡ ಸನ್ನಿ ಗಡಿಪಾರು ರಾಜಕೀಯ ಪ್ರೇರಿತ : ಜೆ.ಬಿ.ರಾಜು ಆರೋಪ

ರಾಯಚೂರು: ಮಾದಿಗ ಸಮುದಾಯದಲ್ಲಿ ರಾಜಕೀಯವಾಗಿ ಬೆಳೆಯುತ್ತಿರುವ ಯುವ ನಾಯಕ ರೋನಾಲ್ಡ್ ಅಗಸ್ಟೀನ್ (ಸನ್ನಿ) ಅವರನ್ನು ರಾಯಚೂರು ವಿಭಾಗೀಯ ದಂಡಾಧಿಕಾರಿ (ಸಹಾಯಕ ಆಯುಕ್ತರು) ಗಡಿಪಾರು ಮಾಡಿ ಆದೇಶ ಹೊರಡಿಸಿದ್ದು, ರಾಜಕೀಯ ಪ್ರೇರಿತ ದುರುದ್ದೇಶದಿಂದ ಕೂಡಿದೆ. ಇದರ ವಿರುದ್ಧ ಕಾನೂನು ಹಾಗೂ ಹೋರಾಟ ರೂಪಿಸುತ್ತೇವೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಜೆ.ಬಿ.ರಾಜು ತಿಳಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಂಡಾ ಕಾಯಿದೆಯಡಿ ಗಡಿಪಾರು ಮಾಡುವ ಅಧಿಕಾರ ಸಹಾಯಕ ಆಯುಕ್ತರಿಗಿಲ್ಲ. ಅಲ್ಲದೆ, ಜಿಲ್ಲಾ ದಂಡಾಧಿಕಾರಿ ಆದೇಶ ಮಾಡಬೇಕಿತ್ತು. ಕೆಲ ಪ್ರಕರಣಗಳಲ್ಲಿ ದುರುದ್ದೇಶದಿಂದ ಸನ್ನಿ ಅವರ ಹೆಸರು ಸೇರಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಆದೇಶವಾಗಿದೆ. ಇದರ ಹಿಂದೆ ರವಿಬೋಸರಾಜ್ ಕೈವಾಡವಿದೆ ಎಂದು ಅವರು ಆರೋಪಿಸಿದರು.
ರವಿಬೋಸರಾಜು ಯಾರು ? ಅವರೇನು ಜನಪ್ರತಿನಿಧಿಯೇ ? 2014ರಲ್ಲಿ ನಡೆದ ಘಟನೆಯ ವರದಿ ಪೂರ್ಣ ಓದಿ ಪರಿಶೀಲಿಸದೆ ಇಲ್ಲಿನ ಅಧಿಕಾರಿಗಳು ಅವರ ಕೈಗೊಂಬೆಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಆದೇಶದ ವಿರುದ್ಧ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ಆರಂಭಿಸಿದ್ದೇವೆ. ಅಲ್ಲದೆ, ಸಹಾಯಕ ಆಯುಕ್ತರ ಕಚೇರಿ ಮುಂದೆ ಒಕ್ಕೂಟದಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಒಕ್ಕೂಟದ ಪದಾಧಿಕಾರಿಗಳಾದ ಕೆ.ಪಿ.ಅನಿಲಕುಮಾರ್, ಜನಾರ್ಧನ ಹಳ್ಳಿಬೆಂಚಿ, ಶಿವರಾಜ ಅಕ್ಕರಕಿ, ಹನುಮಂತ ಮನ್ನಾಪುರ ಇದ್ದರು.







