ರಾಯಚೂರು | ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಮೂವರ ಮೃತದೇಹ ಪತ್ತೆ

ರಾಯಚೂರು : ಮಂತ್ರಾಲಯ ಸಮೀಪದ ತುಂಗಭದ್ರ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿಗಳ ಮೃತದೇಹಗಳು ರವಿವಾರ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ರಾಜ್ಯದ ಹಾಸನ ಜಿಲ್ಲೆಯ ಪ್ರಮೋದ್(19), ಸಚಿನ್(20) ಹಾಗೂ ಅಜಿತ್ (20) ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ ಪುಣ್ಯಸ್ನಾನಕ್ಕಾಗಿ ಸಮೀಪದ ತುಂಗಭದ್ರಾ ನದಿಯಲ್ಲಿ ಇಳಿದು ಈಜುತ್ತಿದ್ದಾಗ ನೀರಿನ ರಭಸಕ್ಕೆ ಶನಿವಾರ ಸಂಜೆ ಕೊಚ್ಚಿ ಹೋಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಹಾಗೂ ಈಜುಗಾರರ ತಜ್ಞ ತಂಡ ಹಾಗೂ ಎನ್ಡಿಆರ್ಎಫ್ ಜಂಟಿಯಾಗಿ ಶೋಧಕಾರ್ಯವನ್ನು ಕೈಗೊಂಡಿದ್ದರು. ರಾತ್ರಿಯಾಗಿದ್ದರಿಂದ ಕಾರ್ಯಾಚರಣೆಯನ್ನು ರವಿವಾರ ಮುಂದುವರಿಸಲಾಯಿತು.
ಇಡೀ ದಿನ ನಡೆದ ಕಾರ್ಯಾಚರಣೆಯಲ್ಲಿ ಮೊದಲಿಗೆ ಸಚಿನ್ ಮೃತದೇಹ ಸಿಕ್ಕಿದ್ದು, ಕೆಲ ದೂರದಲ್ಲಿ ಪ್ರಮೋದ್ ಹಾಗೂ ಅಜಿತ್ ಅವರ ಮೃತದೇಹಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಗಾಗಿ ಆಂಧ್ರದ ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ಸರಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ಕಳುಹಿಸಿ, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ದುರ್ಘಟನೆಗೆ ಸಂಬಂಧಿಸಿದಂತೆ ಮಂತ್ರಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





