ರಾಯಚೂರು | ಓಪೇಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ಗೆ ಕೀಮೋಥೆರಫಿ ಡೇ ಕೆರ್ ಚಿಕಿತ್ಸೆ ಲಭ್ಯ: ಡಾ.ಸುರೇಂದ್ರ ಬಾಬು

ರಾಯಚೂರು : ಕ್ಯಾನ್ಸರ್ ರೋಗ ತಡೆಗೆ ಸಂಬಂಧಿಸಿದಂತೆ ರಾಯಚೂರಿನ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ (ಓಪೇಕ್) ಆಸ್ಪತ್ರೆಯಲ್ಲಿ ಕೀಮೋಥೆರಫಿ ಡೇ ಕೆರ್ ಚಿಕಿತ್ಸೆ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ತಿಳಿಸಿದರು.
ವಿಶ್ವ ಕ್ಯಾನ್ಸ್ರ್ ದಿನಾಚರಣೆಯ ಅಂಗವಾಗಿ ನ.7ರಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮನುಷ್ಯನಿಗೆ ಕಂಡು ಬರುವ ಖಾಯಿಲೆಗಳಲ್ಲಿ ಭಯ ಹುಟ್ಟಿಸುವ ಕಾನ್ಸರ್ ( ಅರ್ಬುದ ಖಾಯಿಲೆ ) ರೋಗವು ಕ್ರಮವಿಲ್ಲದ ಜೀವನ ಶೈಲಿ, ಬೆಳೆಗಳಿಗೆ ಅತಿಯಾದ ರಾಸಾಯನಿಕಗಳ ಬಳಕೆ, ಸೂಕ್ತವಲ್ಲದ ದೈನಂದಿನ ಆಹಾರ ಪದ್ದತಿ, ವೈಯಕ್ತಿಕ ಅಶುಚಿತ್ವ, ತಂಬಾಕು ಉತ್ಪನ್ನಗಳ ಬಳಕೆ, ಬೀಡಿ ಸಿಗರೇಟ್ ಬಳಕೆಗಳಿಂದ ಉಂಟಾಗುವುದನ್ನು ತಡೆಗಟ್ಟುವಿಕೆಗಾಗಿ ಆರಂಭಿಕ ಪತ್ತೆಗಾಗಿ ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳಲು ಜನತೆಯು ಮುಂದೆ ಬರಬೇಕು ಎಂದು ಹೇಳಿದರು.
ಕ್ಯಾನ್ಸರ್ನ ವಿವಿಧ ರೂಪಗಳು, ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ಜನರಿಗೆ ಮಾಹಿತಿ ನೀಡಲು ಡಾ.ಗಣೇಶ್ ಜಿಲ್ಲಾ ಸರ್ವೆಕ್ಷಣಾಧಿಕಾರಿಯವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ತಪಾಸಣೆ, ಜಾಗೃತಿಯನ್ನು ನೀಡುವ ಜೊತೆಗೆ ಕ್ಯಾನ್ಸರ್ ಶಂಕೀತರನ್ನು ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಿ ಕೊಡಲಾಗುತ್ತಿದೆ. ರೋಗದ ಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚುವುದರಿಂದ ಸೂಕ್ತ ಚಿಕಿತ್ಸೆಯ ಮೂಲಕ ರೋಗಿಯನ್ನು ಸಂಪೂರ್ಣ ಗುಣಮುಖರಾಗಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಓಪೇಕ್ ಆಸ್ಪತ್ರೆಯಲ್ಲಿ ಕೇಂದ್ರ ಆರಂಭ :
ಕರ್ನಾಟಕ ಸರಕಾರದ ಮಾರ್ಗಸೂಚಿಗಳನ್ವಯ ಈಗಾಗಲೇ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಡಿ ಜಿಲ್ಲಾಡಳಿತ ಮೂಲಕ ರಾಯಚೂರು ನಗರದಲ್ಲಿರುವ ಓಪೇಕ್ ಆಸ್ಪತ್ರೆಯಲ್ಲಿ ಡೆ ಕೆರ್ ಕೀಮೊಥೇರಫಿ ಕೇಂದ್ರ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.
ಮುಂದಿನ ದಿನಗಳಲ್ಲಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ "ಸ್ಪೋಕ್ ಕೇಂದ್ರ" ವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.







