ಒಳಮೀಸಲಾತಿಗೆ ಆಗ್ರಹಿಸಿ ರಾಯಚೂರು ನಗರ ಬಂದ್

ರಾಯಚೂರು: ಪರಿಶಿಷ್ಟ ಜಾತಿಯ ಜನರಿಗೆ ಒಳ ಮೀಸಲು ನಿಗದಿ ಮಾಡಿ ಸರಕಾರಿ ಹುದ್ದೆಗಳನ್ನು ನೇಮಿಸುವಂತೆ ಒತ್ತಾಯಿಸಿ ಮಾದಿಗ ಸಂಬಂಧಿತ ಸಂಘಟನೆಗಳಿಂದ ಕರೆ ನೀಡಿದ ರಾಯಚೂರು ಬಂದ್ ಹೋರಾಟಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.
ರಾಜ್ಯ ಸರ್ಕಾರ 56,432 ಸರ್ಕಾರಿ ಹುದ್ದೆಗಳನ್ನು ನೇಮಿಸಲು ನಿರ್ಧರಿಸಿದೆ. ಆದರೆ ಪ್ರಕರಣವೊಂದರಲ್ಲಿ ಶೇ.50ರಷ್ಟು ಮೀಸಲಾತಿ ಮೀರದಂತೆ ನೀಡಿರುವ ತೀರ್ಪಿನಂತೆ ಶೇ.50 ಮೀಸಲಾತಿಯಂತೆ ನೇಮಕಾತಿ ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಮಾದಿಗ ಸಮುದಾಯದ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗಲಿದ್ದು, ಒಳಮೀಸಲು ನಿಗದಿಪಡಿಸಿಯೇ ನೇಮಕಾತಿ ನಡೆಸಲು ಹೋರಾಟ ನಡೆಸಲಾಗುತ್ತದೆ.
ಎಸ್ಸಿ-ಎಸ್ಟಿ ಸಮುದಾಯಗಳಿಗೆ ಶೇ.50 ಮೀಸಲು ನಿಗದಿಪಡಿಸಿದ ಒಳ ಮೀಸಲು ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದೆ. ನೇಮಕಾತಿಯಲ್ಲೇ ಒಳ ಮೀಸಲು ನಿಗದಿಪಡಿಸಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.
ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಉದ್ದೇಶ ಪೂರಕವಾಗಿ ತಪ್ಪಿಸುವ ಉದ್ದೇಶದಿಂದ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಶೇ.15 ಮೀಸಲಾತಿಯನ್ನು ಹಂಚಿಕೆ ಮಾಡಿ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅಲೆಮಾರಿಗಳಿಗೆ ಅನ್ಯಾಯ ಮಾಡಿರುವ ಸರ್ಕಾರ ಈಗ ಮಾದಿಗರೂ ಅನ್ಯಾಯ ಮಾಡಲು ಹೊರಟಿದೆ ಎಂದು ದೂರಿದರು.
ಹೋರಾಟದ ಭಾಗವಾಗಿ ಇಂದು ಕೇಂದ್ರ ಬಸ್ ನಿಲ್ದಾಣದಿಂದ ಯಾವುದೇ ಬಸ್ ಹೊರಡಲಿಲ್ಲ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹೋರಾಟಗಾರರು ಟೆಂಟ್ ಹಾಕಿ ರಸ್ತೆ ತಡೆ ನಡೆಸಿದರು.
ಕಿರಾಣಿ ಬಝಾರ್, ಬಟ್ಟೆ ಬಝಾರ್, ಸರಾಫ್ ಬಝಾರ್, ಸ್ಟೇಷನ್ ರಸ್ತೆ ಸೇರಿದಂತೆ ನಗರದ ಎಲ್ಲಾ ವ್ಯಾಪಾರ ಮಳಿಗೆಗಳು ಬಂದ್ ಮಾಡಿತ್ತು, ರಮಝಾನ್ ಹಿನ್ನೆಲೆಯಲ್ಲಿ ಚಂದ್ರಮೌಳೇಶ್ವರ ರಸ್ತೆ, ಬಟ್ಟೆ ಬಝಾರ್ ನಲ್ಲಿ ವ್ಯಾಪಾರಿ ಮಳಿಗೆ ತೆರೆದರೂ ಬಳಿಕ ಹೋರಾಟಗಾರರ ಮನವಿ ಮೇರೆಗೆ ಬಂದ್ ಮಾಡಿ ಬೆಂಬಲ ಸೂಚಿಸಿದರು.
ನಗರದ ಯಾವುದೇ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡದೇ ಸಂಪೂರ್ಣ ಸ್ತಬ್ಧವಾಗಿತ್ತು. ಪೋಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.







