ರಾಯಚೂರು | ಶಿಕ್ಷಣ ಭಾಗೀದಾರರ ಸಮಾವೇಶ
ಮಕ್ಕಳ ಕಲಿಕೆಗೆ ಕ್ರಿಯಾ ಯೋಜನೆ ತಯಾರಿ : ಡಾ.ಆಕಾಶ್ ಎಸ್.

ರಾಯಚೂರು : ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಕಳೆದ ಎರಡು ವರ್ಷಗಳಿಂದ ಶಿಕ್ಷಣ ಭಾಗೀದಾರರ ಸಮಾವೇಶ ನಡೆಸುತ್ತಿದ್ದು, ಇದರಿಂದ ಮಕ್ಕಳ ಕಲಿಕೆಗೆ ಬೇಕಾಗಿರುವ ಪೂರ್ವ ತಯಾರಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ.ಆಕಾಶ್ ಎಸ್. ಅವರು ಹೇಳಿದರು.
ಫೆ.14ರ ಶುಕ್ರವಾರ ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ, ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಶಾಲಾ ಶಿಕ್ಷಣ ಇಲಾಖೆ, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಇವರ ಸಹಯೋಗದಲ್ಲಿ ಶಿಕ್ಷಣ ಭಾಗೀದಾರರ ಸಮಾವೇಶ -2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಎರಡು ವರ್ಷದಲ್ಲಿ ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸಮಾವೇಶ ನಡೆಸಲಾಗಿದೆ. ರಾಜ್ಯದಲ್ಲಿ 57 ಸಾವಿರ ಶಿಕ್ಷಕರ ಕೊರತೆ ಇದೆ. ಈ ಭಾಗದಲ್ಲಿ 15 ಸಾವಿರ ರೂ. ಕೊರತೆ ಇದೆ. ಜೊತೆಗೆ ಶಾಲಾ ಕಟ್ಟಡ, ನೀರಿನ ಸೌಲಭ್ಯ, ಶೌಚಾಲಯ, ಸೇರಿ ಹಲವು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದೇವೆ. ಎಸೆಸೆಲ್ಸಿ ಯಲ್ಲಿ ಈ ಭಾಗದಲ್ಲಿ ಹೆಚ್ಚು ಫಲಿತಾಂಶ ಮಾಡಲು ಮೊದಲು ಕಾಪಿ ಮಾಡುವುದನ್ನು ತಡೆಗಟ್ಟಲು ವೆಬ್ ಕಾಸ್ಟಿಂಗ್ ಮಾಡಲಾಯಿತು, ನಂತರ ರಾಜ್ಯದಲ್ಲಿ ವಿಸ್ತೀರ್ಣ ಮಾಡಲಾಯಿತು ಎಂದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಸ್ಕಿಲ್ ತರಬೇತಿ ಮುಖ್ಯವಾಗಿದೆ. ಅದನ್ನು ಅವರಿಗೆ ಕೊಡಿಸುವಂತ ಕಾರ್ಯ ಮಾಡಬೇಕು. ಹಾಗೆಯೇ ಮಕ್ಕಳಿಗೆ ಶಿಕ್ಷಣದ ಮೇಲೆ ಆಸಕ್ತಿ ಬೆಳೆಯುವಂತೆ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯ ಮತ್ತು ಈ ಭಾಗದ ಎಲ್ಲ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಲಂ 371(ಜೆ) ಅಡಿಯಲ್ಲಿ ಅದರ ಲಾಭದ ಕುರಿತು ಶಿಕ್ಷಕರು ವಿವರಿಸಬೇಕು.
ಈ ಭಾಗದ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು. ಖಾಸಗಿಯೇತರ ಶಿಕ್ಷಕರಿಗೆ ಹೋಲಿಸಿದರೆ, ಸರ್ಕಾರದ ಶಿಕ್ಷಕರಿಗೆ ಶಿಕ್ಷಣದ ಮತ್ತು ಮೋಟಿವೇಶನ್ ತರಬೇತಿಯು ಅವಶ್ಯಕವಾಗಿದೆ. ಮತ್ತು ಕಲ್ಯಾಣ ಕರ್ನಾಟಕದ ಪ್ರತಿಯೊಂದು ತಾಲ್ಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಯು ಶಿಕ್ಷಕರ ಕರ್ತವ್ಯ ಆದ್ದರಿಂದ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಮಾಡುವಂತಹ ದೇಯೋದ್ದೇಶವು ಪ್ರತಿಯೊಬ್ಬ ಶಿಕ್ಷಕರದ್ದು ಎಂದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಗುರುರಾಜ್ ಸುಂಕದ್ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬ ಶಿಕ್ಷಕರಿಗೆ ಸ್ಕಿಲ್ ತರಬೇತಿ ತುಂಬಾ ಅವಶ್ಯಕವಾಗಿದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಆಸಕ್ತಿ ಬೆಳೆಸಲು ಅನುಕೂಲ ಮಾಡಬೇಕು. ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವಾರು ತಂತ್ರಜ್ಞಾನಗಳು ಆವಿಷ್ಕಾರ ಆಗಿರುವುದರಿಂದ ಪ್ರತಿಯೊಬ್ಬರು ಅವುಗಳ ಮಾಹಿತಿ ಪಡೆದರೆ ಸೂಕ್ತವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ್, ಡಯಟ್ ಉಪನಿರ್ದೇಶಕರಾದ ಇಂದಿರಾ.ಆರ್, ಪ್ರಥಮ ಪೌಂಡೇಶನ್ ಮುಖ್ಯಸ್ಥರಾದ ಸುಮನ್ ಭಟ್ಟಾಚಾರ್ಯ, ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಮಲ್ಲಿಕಾರ್ಜುನ, ರಾಜಕುಮಾರ, ಕಾರ್ಯಕ್ರಮ ಅಧಿಕಾರಿ ಲತಾ ಕೋಟೆ ಸೇರಿದಂತೆ ಇತರರು ಇದ್ದರು.







