RAICHURU | ಮುಖ್ಯಮಂತ್ರಿ ಸಿದ್ದರಾಮಯ್ಯರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ!

ರಾಯಚೂರು, ಫೆ.8: ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಅವರ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಅವರಿದ್ದ ಹೆಲಿಕಾಪ್ಟರ್ ನಿಗದಿತ ಹೆಲಿಪ್ಯಾಡ್ ಬದಲು ಬೇರೊಂದು ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆದ ಘಟನೆ ರವಿವಾರ ವರದಿಯಾಗಿದೆ. ಇದರಿಂದ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಸಿದ್ಧರಾಗಿದ್ದ ಅಧಿಕಾರಿಗಳು ಗೊಂದಲಕ್ಕೊಳಗಾದರು.
ಮುಖ್ಯಮಂತ್ರಿಯಿದ್ದ ಹೆಲಿಕಾಪ್ಟರ್ ಇಳಿಯಲು ರಾಯಚೂರು ರಸ್ತೆಯಲ್ಲಿ ಹೆಲಿಪ್ಯಾಡ್ ಸಿದ್ಧಪಡಿಸಲಾಗಿತ್ತು. ಎಲ್ಲ ಅಧಿಕಾರಿಗಳು ಮುಖ್ಯಮಂತ್ರಿಯ ಆಗಮನಕ್ಕಾಗಿ ಅಲ್ಲಿ ಕಾಯುತ್ತಿದ್ದರು. ಅಲ್ಲಿಗೆ ಹೆಲಿಕಾಪ್ಟರ್ ಬಂದಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಆಗಮಿಸಿದ್ದಾರೆಂದು ಸ್ವಾಗತಿಸಲು ಅಧಿಕಾರಿಗಳು ಸಿದ್ಧರಾದರು. ಆದರೆ, ಈ ಹೆಲಿಕಾಪ್ಟರ್ ನಲ್ಲಿ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಇದ್ದರು. ಇದರಿಂದ ಕ್ಷಣಕಾಲ ವಿಚಲಿತಗೊಂಡ ಅಧಿಕಾರಿಗಳು ಮುಖ್ಯಮಂತ್ರಿಯ ಹೆಲಿಕಾಪ್ಟರ್ ಎಲ್ಲಿ ಹೋಯಿತು ಎನ್ನುವ ಗೊಂದಲಕ್ಕೆ ಒಳಗಾದರು.
ಆತಂಕದಲ್ಲಿದ್ದ ಅಧಿಕಾರಿಗಳಿಗೆ ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಯ ಹೆಲಿಕಾಪ್ಟರ್ ಗುಲ್ಬರ್ಗಾ ರಸ್ತೆಯಲ್ಲಿರುವ ಶಾಸಕ ಮಾನಪ್ಪ ವಜ್ಜಲ್ ಅವರ ಹೆಲಿಪ್ಯಾಡ್ ನಲ್ಲಿ ಇಳಿದಿದೆ ಎನ್ನುವ ಮಾಹಿತಿ ತಿಳಿಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆದ ಹೆಲಿಪ್ಯಾಡ್ ನಲ್ಲಿ ಇಬ್ಬರು ಪಿಎಸ್ಸೈ ಮಾತ್ರ ಇದ್ದರು. ಹೆಲಿಕಾಪ್ಟರ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಳಿಯುತ್ತಿದ್ದಂತೆ ಬೆರಗಾದ ಪಿಎಸ್ಸೈಗಳು ಮುಖ್ಯಮಂತ್ರಿಯನ್ನು ಸ್ವಾಗತಿಸಿ, ಮದುವೆ ಸಮಾರಂಭಕ್ಕೆ ಕರೆದೊಯ್ದರು ಎಂದು ತಿಳಿದುಬಂದಿದೆ.
ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರವಾಗಿ ಈ ಬದಲಾವಣೆ, ಗೊಂದಲಕ್ಕೆ ಸ್ಪಷ್ಟ ಕಾರಣ ಏನೆಂದು ತಿಳಿದುಬಂದಿಲ್ಲ.






