ರಾಯಚೂರು: ದಲಿತ ಶಕ್ತಿ ಪಡೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ರಾಯಚೂರು: ದಲಿತ ಶಕ್ತಿ ಪಡೆಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅದ್ಧೂರಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಶಾಸಕ ಡಾ. ಶಿವರಾಜ ಪಾಟೀಲ್, ಮಾಜಿ ಸಚಿವ ಕೆ. ಶಿವನಗೌಡ ನಾಯಕ, ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಣದಿಂದ ಮಾತ್ರ ದಲಿತರ ಉದ್ಧಾರ ಸಾಧ್ಯ. ಶಿಕ್ಷಣ ಪಡೆದರೆ ಸಾಮಾಜಿಕವಾಗಿಯೂ ಸಮಾಜ ಪ್ರಗತಿ ಸಾಧಿಸಲು ಸಾಧ್ಯವಿದೆ. ಇದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮಾ ಜ್ಯೋತಿಭಾ ಫುಲೆ ಅವರೇ ನಮಗೆ ಉತ್ತಮ ನಿರ್ದರ್ಶನವಾಗಿದ್ದಾರೆ. ದಲಿತ ಸಮಾಜದ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆ ಮೂಲಕ ಸಮಾಜದ ಪ್ರಗತಿಗೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುಖದೇವ ಕಟ್ಟಿಮನಿ ಅವರಿಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಡಾ. ಅಂಬೇಡ್ಕರ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಂಚಾರ ಒತ್ತಡ ಹೆಚ್ಚಾಗದಂತೆ ಕ್ರಮ ಕೈಗೊಂಡು ವಾಹನಗಳು ಸುಗಮವಾಗಿ ಸಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ವೃತ್ತದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಡ್ರೋನ್ ಕ್ಯಾಮೆರಾ ಮೂಲಕ ಮೆರವಣಿಗೆಯನ್ನು ನಿಯಂತ್ರಿಸಲಾಗಿತ್ತು. ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು. ಆಯ್ದ ಕಟ್ಟಿನ ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಡಿಎಆರ್ ತುಕಡಿಗಳನ್ನು ಸಹ ನಿಯೋಜಿಸಲಾಗಿತ್ತು.
ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದಲೂ ಬಂದಿದ್ದ ಬಾಬಾಸಾಹೇಬರ ಅಭಿಮಾನಿಗಳು ರೈಲು ನಿಲ್ದಾಣದ ಆವರಣದಿಂದ ಜಯಘೋಷ ಮೊಳಗಿಸುತ್ತ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬಂದರು.
ಸಂವಿಧಾನ, ಗೌತಮ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ತಬ್ಧಚಿತ್ರಗಳು ಮೆರವಣಿಗೆಗೆ ಕಳೆ ತುಂಬಿದವು. ನೀಲಿ ಧ್ವಜಗಳನ್ನು ಹಿಡಿದ ಯುವಕರ ಪಡೆ ಕ್ರಾಂತಿ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿತು.
ವೃತ್ತದ ಮೂರು ದಿಕ್ಕಿನಲ್ಲಿ ಬೃಹತ್ ಕಟೌಟ್ಗಳನ್ನು ಅಳವಡಿಸಲಾಗಿತ್ತು. ಯುವಕರು ನೀಲಿ ಧ್ವಜಗಳನ್ನು ಹಿಡಿದುಕೊಂಡು ಡಾ. ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಅಭಿಮಾನ ಮೆರೆದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ತಿಪ್ಪರಾಜು, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ, ಯುವ ಮುಖಂಡ ಸನ್ನಿ ರೆನಾಲ್ಡ್, ಅಮಿತ ದೊರೆ, ಶಿವಶಂಕರ, ಮಲ್ಲಿಕಾರ್ಜುನ, ಮಹಾಂತೇಶ ಮುಕ್ತಿ, ಬಾಬು ಶ್ರೀನಿವಾಸ್ ರೆಡ್ಡಿ, ಶಂಕರಪ್ಪ ಉಪಸ್ಥಿತರಿದ್ದರು.






