ರಾಯಚೂರು | ಲಿಂಗತ್ವ ಅಲ್ಪಸಂಖ್ಯಾತರಿಗೆ ಭೂಮಿ ಗುರುತಿಸಿ ನಿವೇಶನ ಒದಗಿಸಲು ಜಿಲ್ಲಾಧಿಕಾರಿ ಸೂಚನೆ
ರಾಯಚೂರು : ಜಿಲ್ಲೆಯಲ್ಲಿ ರಾಯಚೂರು ಮತ್ತು ಸಿಂಧನೂರ ತಾಲೂಕುಗಳಲ್ಲಿನ ಅರ್ಹ ಲಿಂಗತ್ವ ಅಲ್ಪಸಂಖ್ಯಾತರಿಗೆ ಭೂಮಿಯನ್ನು ಗುರುತಿಸಿ ಅವರಿಗೆ ನಿವೇಶನ ಮಂಜೂರಿ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಜಿಲ್ಲಾಮಟ್ಟದ ಲಿಂಗತ್ವ ಅಲ್ಪಸಂಖ್ಯಾತರ ಮನೆಗಳ ನಿರ್ಮಾಣ ನಿವೇಶನ ಮಂಜೂರು ಮಾಡಲು ಕಾಯ್ದಿರಿಸುವ ಬಗ್ಗೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಮೀಕ್ಷೆ ನಡೆಸಿ ಅರ್ಹ ಲಿಂಗತ್ವ ಅಲ್ಪಸಂಖ್ಯಾತರ ಪಟ್ಟಿಯನ್ನು ತಯಾರಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದು ಆಯ್ಕೆ ಸಮಿತಿಯ ಆಯ್ಕೆಪಟ್ಟಿಗೆ ಅನುಗುಣವಾಗಿ ಬೇಕಾಗಬಹುದಾದ ಜಮೀನಿನ ವಿಸ್ತೀರ್ಣದನ್ವಯ ಸರ್ಕಾರಿ ಜಮೀನನ್ನು ಗುರುತಿಸುವ ಕಾರ್ಯವು ಈಗಾಗಲೇ ಲಿಂಗಸೂಗೂರು, ದೇವದುರ್ಗ ಮತ್ತು ಮಾನವಿ ತಾಲೂಕುಗಳಲ್ಲಿ ಪೂರ್ಣವಾಗಿದೆ.
ಜಮೀನು ಗುರುತಿಸುವ ಪ್ರಕ್ರಿಯೆಯನ್ನು ಬಾಕಿ ಇರಿಸಿಕೊಂಡ ರಾಯಚೂರು ತಾಲೂಕು ಮತ್ತು ಸಿಂಧನೂರು ತಾಲೂಕಿನ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಗೃಹ ಲಕ್ಷ್ಮಿ ಯೋಜನೆಯಡಿ, ಅರ್ಹ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ 2000 ರೂ.ಗಳು ಸಮರ್ಪಕವಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಲಿಂಗತ್ವ ಅಲ್ಪಸಂಖ್ಯಾತರ ಮನವಿಯಂತೆ, ಅರ್ಹ ಲಿಂಗತ್ವ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ಅವರಿಗೆ ಸ್ವಯಂ ಉದ್ಯೋಗ ಕೌಶಲ ತರಬೇತಿಗೆ ಏರ್ಪಾಡು, ಉದ್ಯೋಗ ಮಾಡಲು ಬೇಕಾದ ಮೂಲಭೂತ ಸೌಕರ್ಯದ ಜೊತೆಗೆ ಸಿದ್ದಪಡಿಸಿದ ವಸ್ತುಗಳಿಗೆ ಉತ್ತಮ ಬೆಲೆ ಸಿಗುವಂತೆ ಪೂರಕವಾದ ಮಾರುಕಟ್ಟೆ ವ್ಯವಸ್ಥೆಗೆ ಇಲಾಖೆಗಳಿಂದ ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಯಚೂರು ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರು ಬೀದಿ ಬದಿಯಲ್ಲಿ, ಬಸ್ ನಿಲ್ದಾಣಗಳಲ್ಲಿ, ದೇವಸ್ಥಾನಗಳಲ್ಲಿ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ವಾಸಿಸುತ್ತಿದ್ದು, ಕೂಡಲೇ ಇವರನ್ನು ನಿಗದಿಪಡಿಸಿದ ಸ್ಥಳಕ್ಕೆ ಸ್ಥಳಾಂತರಗೊಳಿಸಲು ಅನುಮತಿ ನೀಡಬೇಕು. ಜೊತೆಗೆ ವಾಸ ಮಾಡಲು ಬೇಕಾದ ಮೂಲಭೂತ ಸೌಕರ್ಯವನ್ನು ಕೂಡಲೇ ಕಲ್ಪಿಸಬೇಕು. ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನಕ್ಕಾಗಿ ವಾಸ ಯೋಗ್ಯವಾದ ಜಮೀನು ಗುರುತಿಸಬೇಕು ಎಂದು ನಾಲ್ಕಾರು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಮಾನವಿ, ದೇವದುರ್ಗ ಮತ್ತು ಲಿಂಗಸೂರ ತಾಲೂಕುಗಳಲ್ಲಿ ಈಗಾಗಲೇ ಜಮೀನು ಗುರುತಿಸಿದಂತೆ ಸಿಂಧನೂರ ಮತ್ತು ರಾಯಚೂರು ತಾಲೂಕುಗಳಲ್ಲಿ ಸಹ ಬೇಗನೇ ವಾಸಯೋಗ್ಯ ಜಮೀನು ಗುರುತಿಸಬೇಕು ಎಂದು ಇದೆ ವೇಳೆ ಸಭೆಯಲ್ಲಿದ್ದ ಲಿಂಗತ್ವ ಅಲ್ಪಸಂಖ್ಯಾತರು ಮನವಿ ಮಾಡಿದರು.
ತಾತ್ಕಾಲಿಕ ವಾಸಕ್ಕೆ ಅವಕಾಶ ನೀಡಲು ಮನವಿ :
ದೇವದುರ್ಗ, ಲಿಂಗಸೂರ ಮತ್ತು ಮಾನವಿ ತಾಲೂಕುಗಳಲ್ಲಿ ಈಗಾಗಲೇ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಸರ್ಕಾರಿ ಜಮೀನಿನ ಗಡಿ ಗುರುತಿಸಿದ್ದು, ಪಂಚನಾಮ ಮಾಡಿ ಭೂಮಿಗೆ ಸಂಬಂಧಿಸಿದ ದಾಖಲಾತಿಗಳನ್ನು ಆಯಾ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದ್ದಾರೆ. ಇದನ್ನು ಪರಿಗಣಿಸಿ ತುರ್ತಾಗಿ ನಿಗದಿಪಡಿಸಿದ ಸ್ಥಳಕ್ಕೆ ಸ್ಥಳಾಂತರ ಮಾಡಲು ಅನುಮತಿ ನೀಡಿ ತಾತ್ಕಾಲಿಕ ವಾಸಕ್ಕೆ ನಮಗೆ ಅವಕಾಶ ನೀಡಬೇಕು ಎಂದು ಇದೆ ವೇಳೆ ದೇವದುರ್ಗ, ಮಾನವಿ ಮತ್ತು ಲಿಂಗಸೂರ ತಾಲೂಕಿನ ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಲ್ಲಿ ಮನವಿ :
ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಾಸಿಸುತ್ತಿರುವ ವಿಶೇಷ ವರ್ಗಕ್ಕೆ ಸೇರಿದ ಅನೇಕ ಅಸಂಘಟಿತ ಸಮುದಾಯಗಳಾದ ಲಿಂಗತ್ವ ಅಲ್ಪಸಂಖ್ಯಾತರು, ವಿಕಲಚೇತನರು, ರಾತ್ರಿ ವೇಳೆ ಜಗುಲಿಯಲ್ಲಿ ಮಲಗುವ ನಿರ್ಗತಿಕರು, ವಿಧವೆಯರು, ದೇವದಾಸಿಯರು, ದೌರ್ಜನ್ಯಕ್ಕೆ ಒಳಗಾದವರು, ವಿಶೇಷ ವೃತ್ತಿಪರ ಗುಂಪುಗಳು ಹಾಗೂ ಹೆಚ್ಐವಿ ಸೋಂಕಿತರು ಈ ವಿಶೇಷ ವೃತಿಪರ ಕುಟುಂಬಗಳಿಗೆ ವಿಶೇಷ ವರ್ಗದಡಿಯಲ್ಲಿ ನಿವೇಶನ ಹಂಚಿಕೆ ಮಾಡಿ ಪುನರ್ವಸತಿ ಕಲ್ಪಿಸಲು ಅರ್ಹ ನಿವೇಶನ ರಹಿತ ಹಾಗೂ ವಸತಿ ಹೀನ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರವು ಸರ್ಕಾರಿ ಜಮೀನು ಗುರುತಿಸಲು ಪ್ರಥಮ ಆದ್ಯತೆ ನೀಡಿದ್ದು, ಸ್ಥಳೀಯವಾಗಿ ಲಭ್ಯವಿರುವ ಸರ್ಕಾರಿ ಜಮೀನನ್ನು ಮಂಜೂರಿ ಮಾಡಿ ನಿವೇಶನಕ್ಕೆ ಬಳಸಿಕೊಳ್ಳಬಹುದಾಗಿದೆ.
ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಜಿಲ್ಲಾ ಜಮೀನು ಖರೀದಿ ಸಮಿತಿಯ ಮೂಲಕ ವಸತಿಗೆ ಸೂಕ್ತ ಖಾಸಗಿ ಜಮೀನು ಖರೀದಿಸಲು ಅವಕಾಶವಿದೆ ಎಂದು ರಾಜ್ಯ ಸರ್ಕಾರವು ಆದೇಶಿಸಿದ್ದು, ಅದರಂತೆ ಈ ವಿಶೇಷ ವರ್ಗದ ಗುಂಪುಗಳಿಗೆ ತುರ್ತಾಗಿ ಭೂಮಿ ಮಂಜೂರಿ ಮಾಡಿ ಪುನರ್ವಸತಿ ಕಲ್ಪಿಸಿಕೊಡಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಇದೆ ವೇಳೆ ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯ ಮುಖಂಡರು ಸಭೆಯಲ್ಲಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಮಾನವಿ ನಿವಾಸಿಗಳ ಮನವಿ :
ಮಾನವಿ ತಾಲೂಕಿನ ವಾರ್ಡ್ ನಂಬರ್ 9 ಅಂಬೇಡ್ಕರ್ ನಗರ ಘೋಷಿತ ಕೊಳಚೆ ಪ್ರದೇಶದಲ್ಲಿ 237 ಕುಟುಂಬಗಳಿದ್ದು, ಇಲ್ಲಿನ ನಿವಾಸಿಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 163 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಯಾಗಿದ್ದು, ಇನ್ನುಳಿದ ಕುಟುಂಬಗಳಿಗೆ 2 ಎಕರೆ ಭೂಮಿಯನ್ನು ಮಾನವಿ ತಾಲೂಕಿನ ಸೀಕಲ್ ಸೀಮಾದ ಸರ್ವೇ ನಂ.12ರಲ್ಲಿ ಭೂಮಿ ಗುರುತಿಸಿದ್ದು, ಗುರುತಿಸಿದ ಭೂಮಿಯಲ್ಲಿ ಸ್ಥಳಾಂತರಕ್ಕೆ ಅನುಮತಿ ನೀಡಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ವಿವಿಧ ತಾಲೂಕಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಇನ್ನೀತರ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ತಾಲೂಕಿನ ಲಿಂಗತ್ವ ಅಲ್ಪಸಂಖ್ಯಾತರು ಇದ್ದರು.