ರಾಯಚೂರು | ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ
ಪತ್ರಕರ್ತರು ಶಾರೀರಿಕ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಿ: ಎಸ್ಪಿ ಪುಟ್ಟಮಾದಯ್ಯ

ರಾಯಚೂರು : ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗಲು ಶಾರೀರಿಕ ಸದೃಢತೆ ಅತ್ಯಂತ ಮುಖ್ಯವಾಗಿದ್ದು, ದಿನನಿತ್ಯ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಪತ್ರಕರ್ತರು ಶರೀರದ ಆರೋಗ್ಯದ ಕಡೆ ಹೆಚ್ಚಿನ ಒತ್ತು ಕೊಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಪೊಲೀಸ್ ಮೈದಾನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಒತ್ತಡದಲ್ಲಿ ಕೆಲಸ ಮಾಡುವ ಸರಕಾರದ ಹಲವು ಇಲಾಖೆಗಳಂತೆ, ಅತ್ಯಂತ ಒತ್ತಡದಲ್ಲಿಕೆಲಸ ಮಾಡುವ ವಲಯವೆಂದರೆ ಅದು ಪತ್ರಕರ್ತರ ವಲಯ. ಪತ್ರಕರ್ತರು ದಿನನಿತ್ಯ ಸುದ್ದಿ ಮಾಡುವ ಒತ್ತಡದಲ್ಲಿರುತ್ತಾರೆ. ಸುದ್ದಿಗಾಗಿ ಓಡಾಡುತ್ತಿರುತ್ತಾರೆ. ಆ ಒತ್ತಡದ ಓಡಾಟದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಕ್ರೀಡೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.
ಬೆಳಿಗ್ಗಿನ ನಡಿಗೆ(ವಾಕಿಂಗ್) ಬಹಳ ಮುಖ್ಯ, ನಾವು ದಿನನಿತ್ಯ ಮಾಡುವ ಊಟದಂತೆ ವಾಕಿಂಗ್ನ್ನು ಮರೆಯಬಾರದು. ಮನಸ್ಸನ್ನು ಸ್ಥಿರವಾಗಿರಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ. ಬೆಳಿಗ್ಗೆ ಸಾಧ್ಯವಾಗದೆ ಇದ್ದರೆ ಸಂಜೆ ವೇಳೆಯಲ್ಲಿ ಆದರೂ ವಾಕಿಂಗ್ ಮಾಡಲು ಮುಂದಾಗಬೇಕು. ಸಮಾಜದ ಪ್ರಗತಿಗಾಗಿ ಪತ್ರಕರ್ತರು ದಿನನಿತ್ಯ ಶ್ರಮಿಸುತ್ತಾರೆ. ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಕ್ರೀಡೆ ಎಂಬುದು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ಅತ್ಯಂತ ಮುಖ್ಯವಾಗಿದೆ. ಒತ್ತಡದ ಬದುಕಿನ ಮಧ್ಯೆ ಮಾನಸಿಕ ನೆಮ್ಮದಿಗೆ ಕ್ರೀಡೆಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶಾಂತವೀರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ, ಹಿರಿಯ ಪತ್ರಕರ್ತರಾದ ಸುರೇಂದ್ರಾಚಾರ್ ಕೊರ್ತಕುಂದ, ರಾಯಚೂರುವಾಣಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಅರವಿಂದ ಕುಲಕರ್ಣಿ, ಕಂಪಿಲವಾಣಿ ಸಂಪಾದಕ ಭೀಮರಾಯ್ ಹದ್ದಿನಾಳ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೆಮಠ, ಜಿಲ್ಲಾ ಕಾರ್ಯದರ್ಶಿ ಪಾಷಾ ಹಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಶಿವಪ್ಪ ಮಡಿವಾಳ ಪಿ ಪರಮೇಶ್, ವೀರಭದ್ರಪ್ಪ ಜವಳಗೇರಾ, ಕಾರ್ಯದರ್ಶಿಗಳಾದ ಶರಣಬಸವ ನಿರ್ಮಾನ ವಿ, ಸುಗುರೇಶ್ವರ ಗುಡಿ, ಗುರುರಾಜ ಗೌಡೂರು, ಬಸವರಾಜ ನಾಗರದಿನ್ನಿ, ದೇವದುರ್ಗ ತಾಲೂಕ ಅಧ್ಯಕ್ಷ ಬಾಬು ಅಲಿ, ಸಿರವಾರ ತಾಲೂಕ ಅಧ್ಯಕ್ಷ ಗುಂಡಪ್ಪ, ಪ್ರಜಾಪ್ರಸಿದ್ಧ ಪತ್ರಿಕೆಯ ಸಂಪಾದಕ ಶಿವರಾಜ, ಸಿಟಿ ಎಲೆವೆನ್ ಕ್ರಿಕೆಟ್ ಕ್ಲಬ್ ಮುಖ್ಯಸ್ಥ ಶರಣರೆಡ್ಡಿ ಮತ್ತು ತಾಲೂಕು ಹಾಗೂ ಜಿಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.







