ರಾಯಚೂರು | ಜಿಲ್ಲಾ ಮಟ್ಟದ ಏಕತಾ ಕಾಲ್ನಡಿಗೆ ಯಾತ್ರೆ

ರಾಯಚೂರು : ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಮೇರಾ ಯುವ ಭಾರತ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್, ಕೃಷ್ಣ ತುಂಗೆ, ಎನ್ಸಿಸಿ ಮತ್ತು ಭಾರತ ಸೇವಾದಳದ ಸಂಯುಕ್ತಾಶ್ರಯದಲ್ಲಿ ನವೆಂಬರ್ 20ರಂದು ರಾಯಚೂರು ನಗರದಲ್ಲಿ ಜಿಲ್ಲಾಮಟ್ಟದ ಏಕತಾ ಯಾತ್ರೆ ನಡೆಯಿತು.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ನಿಮಿತ್ತ ನಡೆದ ಜಿಲ್ಲಾಮಟ್ಟದ ಏಕತಾ ಕಾಲ್ನಡಿಗೆ ಯಾತ್ರೆಯು ಬೆಳಗ್ಗೆ 9 ಗಂಟೆಗೆ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಶ್ರೀಬಸವೇಶ್ವರ ವೃತ್ತ, ಗಾಂಧಿ ಚೌಕ್, ಚಂದ್ರಮೌಳೇಶ್ವರ ಸರ್ಕಲ್ ಮೂಲಕ ಸಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು.
ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಸಿರೋಯಾ ಮಾತನಾಡಿ, ಭಾರತ ದೇಶದ ಏಕೀಕರಣದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೇಶಪ್ರೇಮ, ಸಂಘಟನಾತ್ಮಕ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮಹಾಗನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿರುವ ಪವನ್ ಕಿಶೋರ್ ಪಾಟೀಲ್, ಭಾರತ ಸೇವಾದಳದ ತಾಲೂಕು ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಕ್ಯಾದಿಗೇರಿ, ಮುಖಂಡರಾದ ವೀರನಗೌಡ ಪಾಟೀಲ್, ಯು ನರಸರೆಡ್ಡಿ, ಶಂಕರರೆಡ್ಡಿ, ಸಂತೋಷ ರಾಜಗುರು, ಗೌತಮ ರೆಡ್ಡಿ, ವಿಜಯಕುಮಾರ್ ಸಜ್ಜನ, ವಿದ್ಯಾಸಾಗರ ಚಿಮಣಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







