ರಾಯಚೂರು | ಕುಡಿಯುವ ನೀರಿಗೆ ಹಾಹಾಕಾರ : ಸ್ಥಳೀಯರಿಂದ ಆಕ್ರೋಶ

ಹಟ್ಟಿ: ಪಟ್ಟಣದ ಕಾಕಾ ನಗರ ವಾರ್ಡ್ನಲ್ಲಿ ಕುಡಿಯುವ ಹಾಗೂ ಬಳಕೆಯ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಕಳೆದ ಎರಡು ವಾರಗಳಿಂದ ನೀರು ಸರಬರಾಜು ಮಾಡುವ ಮೋಟಾರ್ ಕೆಟ್ಟು ಹೋಗಿದ್ದರೂ ಇದುವರೆಗೆ ದುರಸ್ತಿ ಮಾಡದಿರುವುದಕ್ಕೆ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರು ಸಹ ಮೂರು-ನಾಲ್ಕು ತಿಂಗಳಿಗೊಮ್ಮೆ ಮಾತ್ರ ಸರಬರಾಜಾಗುತ್ತಿದ್ದು, ಈ ಕುರಿತು ಹಲವು ಬಾರಿ ಪಟ್ಟಣ ಪಂಚಾಯಿತಿ ಆಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದರು.
ಕಳೆದ ಎರಡು ದಶಕಗಳಿಂದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡುತ್ತಲೇ ಬಂದಿದ್ದು, ವಾರ್ಡ್ನ ಅಭಿವೃದ್ಧಿಗೆ ಅಗತ್ಯವಾದ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರು, ಬಳಕೆಯ ನೀರು, ಚರಂಡಿ, ರಸ್ತೆ, ಸಾರ್ವಜನಿಕ ಶೌಚಾಲಯ ಹಾಗೂ ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವಾರ್ಡ್ ದುರ್ವಾಸನೆಯಿಂದ ಕೂಡಿದೆ ಎಂದು ದೂರಿದರು.
ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜನವಿರೋಧಿ ಹಾಗೂ ಭ್ರಷ್ಟ ಅಭ್ಯರ್ಥಿಗಳನ್ನು ನಿರ್ಣಾಯಕವಾಗಿ ಸೋಲಿಸಿ ತಕ್ಕ ಪಾಠ ಕಲಿಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ವನಜಾಕ್ಷಿ, ಉಪಾಧ್ಯಕ್ಷೆ ಶಾಂತಕುಮಾರಿ, ಅಂಬಮ್ಮ, ಲಕ್ಷ್ಮೀ, ಚಾಂದಬೀ ಮದರಕಲ್, ಮಹಾದೇವಿ, ನೂರ್ಜಾ, ಮಾಬೂಬಿ, ಗೌಸಿಯಾ ಬೇಗಂ, ಹನೀಸ್ ಬೇಗಂ, ಗಾಯತ್ರಿ, ಹನುಮಂತಿ, ಬಸಮ್ಮ, ಹುಲಿಗೆಮ್ಮ, ದುರುಗಮ್ಮ, ದೀದಿ ಬೇಗಂ, ನಾಜಿಯಾ ಬೇಗಂ, ಭವಾನಿ, ಅನಂತ್, ಸುರೇಶ್, ಪೆಂಚಲಯ್ಯ, ವೆಂಕಟೇಶ ಗೋರ್ಕಲ್, ಫಕೃದ್ದೀನ್, ಮಹಾಂತೇಶ, ಚಾಂದ್ ಪಾಷಾ, ನಾಗರಾಜ್, ಧನರಾಜ್, ವೀರೇಶ್, ಮೌನೇಶ ಸೇರಿದಂತೆ ವಾರ್ಡ್ನ ಅನೇಕ ನಿವಾಸಿಗಳು ಉಪಸ್ಥಿತರಿದ್ದರು.






