ರಾಯಚೂರು: ವಿಶೇಷ ವರ್ಗದ ಫಲಾನುಭವಿಗಳಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯಿಸಿ ಕುಟುಂಬಸ್ಥರೊಂದಿಗೆ ಅಹೋರಾತ್ರಿ ಧರಣಿ

ರಾಯಚೂರು: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಾಜಿ ದೇವದಾಸಿಯರು, ಎಚ್ ಐವಿ ಪೀಡಿತರು, ವಿಧವೆಯರು ಸೇರಿ ವಿಶೇಷ ವರ್ಗದವರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ದಲಿತ ಸಮರ ಸೇನೆ–ಕರ್ನಾಟಕದ ನೇತೃತ್ವದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಿರವಾರ, ಸಿಂಧನೂರು, ಮುದಗಲ್, ಕವಿತಾಳದಲ್ಲಿ ವಿಶೇಷ ವರ್ಗಕ್ಕೆ ನಿವೇಶನ ಗುರುತಿಸಲಾಗಿದೆ. ಆದರೆ, ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕವಿತಾಳದ ಪಟ್ಟಣದ ಸರ್ವೆ 19/2 ರಲ್ಲಿ ಮೂರು ಎಕರೆ 35 ಗುಂಟೆ, ಸರ್ವೆ ಮಾಡಿ ಭೂಮಿ ಹದ್ದುಬಸ್ತ್ ಮಾಡಲಾಗಿದೆ. ಫಲಾನುಭವಿಗಳ ಪಟ್ಟಿ ಸಹ ಅನುಮೋದನೆ ಗೊಂಡಿದೆ. ಸರ್ವೆ 684 ರಲ್ಲಿ 4 ಎಕರೆ ಐದು ಗುಂಟೆ ಭೂಮಿಯನ್ನು ಬೀದಿ ವ್ಯಾಪಾರಿಗಳಿಗೆ ಗುರುತಿಸಲಾಗಿದೆ. ಆದರೆ, ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿಲ್ಲ ಎಂದು ಆರೋಪಿಸಿದರು.
ಲಿಂಗಸುಗೂರು ತಾಲ್ಲೂಕಿನ ಸರ್ವೆ 410/1 ರಲ್ಲಿ ಐದು ಎಕರೆ ಭೂಮಿ ದಲಿತ, ಅಲ್ಪಸಂಖ್ಯಾತ ದಿನಗೂಲಿ ನೌಕರರಿಗೆ ಗುರುತಿಸಲಾಗಿದೆ. ಅಲ್ಲಿಯೂ ಹಂಚಿಕೆ ಮಾಡುತ್ತಿಲ್ಲ, ಸಿಂಧನೂರು ತಾಲ್ಲೂಕಿನ ಜ್ಯೋತಿ ಬಾಪುಲೆ, ರಾಮ ಕಿಶೋರ ಕಾಲೊನಿ ಜನರು ಕಾಲುವೆ ಪಕ್ಕದಲ್ಲಿ ವಾಸ ಮಾಡುತ್ತಿದ್ದಾರೆ. ಕೋಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಮಂಡಳಿ ಆಯುಕ್ತರು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿ ಸ್ಲಂ ಘೋಷಣೆ ಮಾಡಲು ಸೂಚಿಸಿದ್ದರು. ಇಂದಿಗೂ ಸ್ಥಳಾಂತರವೂ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ವಿಶೇಷ ವರ್ಗಕ್ಕೆ ಸೇರಿದ ನಿವೇಶನ ರಹಿತ ಮತ್ತು ವಸತಿಹೀನ ಕುಟುಂಬಗಳಿಗೆ ಕೂಡಲೇ ನಿವೇಶನ, ಹಕ್ಕುಪತ್ರ ಹಾಗೂ ಮೂಲಭೂತ ಪುನರ್ವಸತಿ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ರಾಯಚೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಎಚ್ಐವಿ ಪೀಡಿತರು, ದೇವದಾಸಿಯರು, ವಿಧವೆಯರು, ಬೀದಿ ವ್ಯಾಪಾರಿಗಳು, ನಿರ್ಗತಿಕರು, ಅಂಗವಿಕಲರು ಹಾಗೂ ಅಲೆಮಾರಿ–ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ಅನೇಕ ಕುಟುಂಬಗಳು ಹಲವು ವರ್ಷಗಳಿಂದ ನಿವೇಶನ ಮತ್ತು ವಸತಿ ಸೌಲಭ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿವೆ. ಸರ್ಕಾರದ ಆದೇಶದಂತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ತುರ್ತಾಗಿ ನಿವೇಶನ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದಲಿತ ಸಮರ ಸೇನೆಯ ಮುಖಂಡ ನೀಲಕಂಠ ಅನಿಲ್ ಮಾತನಾಡಿ, ಕವಿತಾಳ ಪಟ್ಟಣದ ಸರ್ವೆ ನಂ.19/2ರಲ್ಲಿ ಅಲೆಮಾರಿ ಸಮುದಾಯದ ನೂರಕ್ಕೂ ಹೆಚ್ಚು ಫಲಾನುಭವಿಗಳಿಗಾಗಿ 3 ಎಕರೆ 35 ಗುಂಟೆ ಜಮೀನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ ಸುಮಾರು ಎಂಟು ತಿಂಗಳು ಕಳೆದರೂ ನಿವೇಶನ ಹಂಚಿಕೆ ಮಾಡಿಲ್ಲ. ಕೂಡಲೇ ಜಮೀನನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿ ಫಲಾನುಭವಿಗಳಿಗೆ ನಿವೇಶನ, ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದರು.
ಕವಿತಾಳ ಪಟ್ಟಣದ ಸರ್ವೆ ನಂ.684ರಲ್ಲಿ ಗುರುತಿಸಿರುವ 4 ಎಕರೆ 5 ಗುಂಟೆ ಜಮೀನಿನಲ್ಲಿ ಸುಮಾರು 183 ಕುಟುಂಬಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು. ಲಿಂಗಸೂರು ತಾಲೂಕಿನ ಸರ್ವೆ ನಂ.410/1ರಲ್ಲಿ 188 ವಸತಿಹೀನ ಕುಟುಂಬಗಳಿಗಾಗಿ ಕಾಯ್ದಿರಿಸಿರುವ 5 ಎಕರೆ ಜಮೀನಿನಲ್ಲಿಯೂ ಫಲಾನುಭವಿಗಳಿಗೆ ಕೂಡಲೇ ನಿವೇಶನ ಹಂಚಿಕೆ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಿಂಧನೂರು ತಾಲೂಕಿನ ಜ್ಯೋತಿ ಬಾಪುಲೆ–ರಾಮಕಿಶೋರ್ ಕಾಲೋನಿಯಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಬಡ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಕುಟುಂಬಗಳಿಗೂ ಸೂಕ್ತ ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಮರ ಸೇನೆಯ ಸಂಸ್ಥಾಪಕ ಅಧ್ಯಕ್ಷ ಗಣೇಶ್ ಎಸ್. ಕೊಳಗೇರಿ, ತಿಪ್ಪಣ್ಣ ಎನ್. ಛಲವಾದಿ, ಸುರೇಶ್ ಎಲ್.ವಿ., ನರಸಿಂಹಲು, ಹನುಮೇಶ ಅರೋಲಿ,ಬಸವರಾಜ್, ಅರಿಫಾ, ಶರಣಪ್ಪ,ರಂಗಮ್ಮ, ರಾಬಿಯಾ, ಶಂಕರ್, ರೇಣುಕಮ್ಮ, ರಾಜಮ್ಮ, ಶೈನಾಜ್ ಬೇಗಂ,ಫಾತಿಮಾ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.






