ರಾಯಚೂರು | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘಟನೆಯಿಂದ ಪ್ರತಿಭಟನೆ

ರಾಯಚೂರು : ಮಾನ್ವಿ ತಾಲೂಕಿನಲ್ಲಿ ಎರಡು ಕಡೆ ಜೋಳ ಖರೀದಿ ಕೇಂದ್ರಗಳು ತೆರೆದಿದ್ದು, ತಾಲ್ಲೂಕಿನಲ್ಲಿ ಇನ್ನು 3 ಕಡೆ ತೆರಿಗೆ ಕೇಂದ್ರ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ರೈತ ಸಂಘಟನೆ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನಾದ್ಯಂತ ರೈತರು ಜೋಳ ಕಟಾವು ಮಾಡಿ ಎರಡು ತಿಂಗಳು ಕಳೆದರೂ, ಖರೀದಿ ಕೇಂದ್ರ ಎರಡು ಕಡೆ ಪ್ರಾರಂಭವಾದರೂ ಇದುವರೆಗೂ ಕೂಡ ಹಿಂಗಾರಿನ ಜೋಳದ ನೊಂದಣಿ ಪ್ರಾರಂಭ ಮಾಡಿರುವುದಿಲ್ಲ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಭಾಗದಲ್ಲಿ ಕಳೆದ 2-3 ವರ್ಷಗಳಿಂದ ರೇಷನ್ ಕಾರ್ಡ್ ಕೊಡುತ್ತಿಲ್ಲ. ಇದರಿಂದ ಬಡ ಫಲಾನುಭವಿಗೆ ತೊಂದರೆಯಾಗಿದೆ ಮತ್ತು ಜಾನೇಕಲ್ ಹಾಗೂ ತಡಕಲ್ ಗ್ರಾಮಗಳಿಗೆ ಓಡಾಡುವ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ. ಈ ಕೂಡಲೇ ರಸ್ತೆ ಹಾಗೂ ವಿದ್ಯುತ್ ಅನ್ನು ದುರಸ್ಥಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರೈತ ಸಂಘ ಮುಖಂಡ ಚಾಮರಸ ಮಾಲಿಪಾಟೀಲ್, ಸಿದ್ದಯ್ಯ ಸ್ವಾಮಿ , ಲಿಂಗಪ್ಪ ಇನ್ನಿತರರು ಹಾಜರಿದ್ದರು.







