ರಾಯಚೂರು : 10 ರೂಪಾಯಿ ವಿಚಾರಕ್ಕೆ ಜಗಳ; ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

ರಾಯಚೂರು: ಕೇವಲ 10 ರೂಪಾಯಿ ಪೆಟ್ರೋಲ್ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ರಾಯಚೂರು ತಾಲ್ಲೂಕಿನ ಹಂಚಿನಾಳ ಕ್ಯಾಂಪ್ ಸಮೀಪದ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೇಘನಾಥ್ (42) ಕೊಲೆಗೀಡಾದ ವ್ಯಕ್ತಿ.
ಮಾಹಿತಿಯ ಪ್ರಕಾರ, ಬಾಟಲಿಯಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ವ್ಯಕ್ತಿ ಮತ್ತು ಪೆಟ್ರೋಲ್ ಬಂಕ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಪೆಟ್ರೋಲ್ ಖರೀದಿಸುವ ವೇಳೆ ಕೇವಲ 10 ರೂಪಾಯಿ ವಿಚಾರಕ್ಕೆ ಆರಂಭವಾದ ಈ ವಾಗ್ವಾದ ತೀವ್ರ ರೂಪ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಜಗಳದ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ಮೇಘನಾಥನಿಗೆ ಸ್ನೇಹಿತನ ಕರೆ ಬಂದಿತ್ತು. ಸ್ಥಳಕ್ಕೆ ಬಂದ ಮೇಘನಾಥ್ ಬಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಈ ವೇಳೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಘರ್ಷಣೆಯ ಸಂದರ್ಭದಲ್ಲಿ ಕಟ್ಟಿಗೆಯಿಂದ ಪರಸ್ಪರ ಹಲ್ಲೆ ನಡೆದಿದ್ದು, ಮೇಘನಾಥ್ ಅವರಿಗೆ ತಲೆ ಹಾಗೂ ದೇಹಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಡಪನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.






