ರಾಯಚೂರು | ಬೆಂಕಿ ಆಕಸ್ಮಿಕ: 70 ಸಾವಿರ ರೂ. ಮೌಲ್ಯದ ಬಣವೆ ನಷ್ಟ

ರಾಯಚೂರು, ಡಿ.11: ಆಕಸ್ಮಿಕವಾಗಿ ಬೆಂಕಿ ತಗಲಿ 70 ಸಾವಿರ ರೂ. ಮೌಲ್ಯದ ಸಜ್ಜೆಯ ಸೊಪ್ಪಿ, ಶೇಂಗಾ ಹೊಟ್ಟು( ಸಿಪ್ಪೆ) ತೊಗರಿ ಹೊಟ್ಟಿನ ಬಣವೆ ಸುಟ್ಟು ಕರಕಲಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ವೀರಾಪೂರು ಗ್ರಾಮದಲ್ಲಿ ನಡೆದಿದೆ.
ಕುರಿಗಾಯಿ ದುರಗಮ್ಮ ಎಂಬವರಿಗೆ ಸೇರಿದ ಬಣವೆ ಬೆಂಕಿಗಾಹುತಿಯಾಗಿದೆ. ಬೇಸಿಗೆಯಲ್ಲಿ ಕುರಿ ಮರಿಗಳಿಗೆ ದನಕರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಬಾರದು ಎಂದು ದುರುಗಮ್ಮ 70 ಸಾವಿರ ರೂಪಾಯಿ ಮೌಲ್ಯದ ಸಜ್ಜೆ ಸೊಪ್ಪಿ, ಶೇಂಗಾ, ತೊಗರಿ ಹೊಟ್ಟು ಸಂಗ್ರಹಿಸಿಟ್ಟಿದ್ದರು.
ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಸಂತ್ರಸ್ತ ಕುಟುಂಬ ಕುರಿಮರಿಗಳನ್ನು ಕಾಯ್ದು ಬದುಕುವ ಕುಟುಂಬ ಆಗಿದ್ದು, ನಷ್ಟ ಪರಿಹಾರವಾಗಿ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಆಗ್ರಹಿಸಿದ್ದಾರೆ.
Next Story





