ರಾಯಚೂರು : ಮಹಾನಗರ ಪಾಲಿಕೆಗೆ 3 ತಿಂಗಳೊಳಗೆ ಚುನಾವಣೆ ನಡೆಸಲು ಹೈಕೋರ್ಟ್ ನಿರ್ದೇಶನ

ರಾಯಚೂರು: ಮಹಾನಗರ ಪಾಲಿಕೆಗೆ ಮುಂದಿನ ಮೂರು ತಿಂಗಳೊಳಗೆ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ಆದೇಶ ನೀಡಿ ತೀರ್ಪು ಪ್ರಕಟಿಸಿದೆ.
ಮುಂದಿನ ಚುನಾವಣೆ ನಡೆಯುವವರೆಗೆ ನಗರಸಭೆ ಸದಸ್ಯರ ಅಧಿಕಾರಾವಧಿಯನ್ನು ಮುಂದುವರಿಸಬೇಕು ಎಂದು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಹೈಕೋರ್ಟ್ ಕಲಬುರಗಿ ಪೀಠ ಎತ್ತಿಹಿಡಿದಿದ್ದು, ಎ. 28ರಂದು ಈ ತೀರ್ಪು ಪ್ರಕಟಿಸಿದೆ.
ನ. 01, 2025ಕ್ಕೆ ನಗರಸಭೆ ಸದಸ್ಯರ ಅಧಿಕಾರಾವಧಿ ಮುಗಿದಿದೆ. ಮತ್ತೆ ಚುನಾವಣೆ ನಡೆಯುವವರೆಗೆ ಅಧಿಕಾರಾವಧಿಯನ್ನು ಮುಂದುವರಿಸುವುದು ಸೆಕ್ಷನ್ 243 ಕಾನೂನಿನ ಉಲ್ಲಂಘನೆಯಾಗುತ್ತದೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ರಾಯಚೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ಕಲಬುರಗಿ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಜಸ್ಟಿಸ್ ಸೂರಜ್ ಗೋವಿಂದರಾಜ್ ಹಾಗೂ ಡಾ. ಜಸ್ಟಿಸ್ ಚಿಲಕೂರ್ ಸುಮಲತಾ ಅವರು ತೀರ್ಪು ನೀಡಿದ್ದಾರೆ.
2018ರಲ್ಲಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದವರು 2020ರಲ್ಲಿ ಪ್ರಥಮ ಸಭೆ ನಡೆಸಿದ್ದರು. 2023-24ರಲ್ಲಿ ಅಧ್ಯಕ್ಷೀಯ ಮೀಸಲಾತಿ ವಿವಾದ ಕೋರ್ಟ್ ಮೆಟ್ಟಿಲೇರಿದ ಕಾರಣ 5 ತಿಂಗಳ ಕಾಲ ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. ಅದರ ನಂತರ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ 01-11-2025ಕ್ಕೆ ಪೂರ್ಣಗೊಂಡಿದೆ ಎಂದು ಸೂಚಿಸಿತ್ತು.
ಇದನ್ನು ಪ್ರಶ್ನಿಸಿದ 23 ಸದಸ್ಯರು ಕರ್ನಾಟಕ ಮುನ್ಸಿಪಲ್ ಕಾಯ್ದೆ 503ನೇ ಕಲಂ ಅಡಿಯಲ್ಲಿ 15 ತಿಂಗಳ ಆಡಳಿತಾಧಿಕಾರಿಗಳ ಅವಧಿಯನ್ನು ಹೊರಗಿಡಬೇಕು ಎಂದು ಹೈಕೋರ್ಟ್ ಕಲಬುರಗಿ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ಪೀಠವು ಅವರ ಮೇಲ್ಮನವಿಯನ್ನು ಫೆಬ್ರವರಿ 26, 2026ರಂದು ತಿರಸ್ಕರಿಸಿತ್ತು. ಇದೀಗ ಅಂತಿಮವಾಗಿ ಎಲ್ಲಕ್ಕೂ ತೆರೆಬಿದ್ದಿದ್ದು, ಮುಂದಿನ ಮೂರು ತಿಂಗಳೊಳಗೆ ಚುನಾವಣೆ ನಡೆಸಲು ಹೈಕೋರ್ಟ್ ಕಲಬುರಗಿ ಪೀಠ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.






