ರಾಯಚೂರು | ಸಂಶೋಧನಾ ಪುಸ್ತಕಗಳನ್ನು ಹೊರತರುವ ಯೋಜನೆಯಡಿ ಪುಸ್ತಕ ಪ್ರಕಟಿಸಲು ಅರ್ಜಿ ಆಹ್ವಾನ

ರಾಯಚೂರು : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ನಿರಂತರವಾಗಿ ಈ ಭಾಗದ ಸಾಮಾಜಿಕ ಹಾಗೂ ರಚನಾತ್ಮಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹಲವಾರು ಆಯಾಮಗಳ ಕುರಿತು ಆಯಾ ಕ್ಷೇತ್ರಗಳಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ವಿದ್ವತ್ಪೂರ್ಣ ಸಂಶೋಧನಾ ಪುಸ್ತಕಗಳನ್ನು ಹೊರತರುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ವಾಂಸರಿಂದ ಒಂದು ನೂರು ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಸಿ ಪ್ರಕಟಿಸಲು ಅರ್ಜಿ ಆಹ್ವಾನಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಸಮಾಜವನ್ನು ಮತ್ತು ಇತಿಹಾಸವನ್ನು ಎಲ್ಲಾ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ಕರ್ನಾಟಕ, ಭಾರತ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ವತ್ತಿನ ಗಂಭೀರ ಚರ್ಚೆಯನ್ನು ತರುವುದಕ್ಕಾಗಿ ವಿಶೇಷ ಯೋಜನೆಯೊಂದನ್ನು ರೂಪಿಸಿದೆ.
ಕಲ್ಯಾಣ ಕರ್ನಾಟಕ ವಿವಿಧ ಮತ ಪಂಥ ಧರ್ಮಗಳ ಸಾಮರಸ್ಯ ಪರಂಪರೆಯಿಂದ ಮೆರೆದು ಜಗತ್ತಿನ ಸಮಾಜಕ್ಕೆ ಪ್ರೇರಣೆಯ ಪ್ರತೀಕವಾಗಿದೆ. ಕಲ್ಯಾಣ ಕರ್ನಾಟಕದ ನೆಲೆ, ಜಲ, ಭಾಷೆ, ಸಾಹಿತ್ಯ, ಸಾಮರಸ್ಯ ಸಂಸ್ಕೃತಿ, ಆಯಾ ಘಟ್ಟದ ಶಾಸನಗಳು, ಶೋಷಿತರ-ಮಹಿಳೆಯರ ಸ್ಥಿತಿಗತಿ, ಪ್ರಾಚೀನ, ಮಧ್ಯಕಾಲಿನ, ಆಧುನಿಕ ರಾಜ್ಯಾಡಳಿತ ಸೇರಿದಂತೆ, ಸಂಸ್ಥಾನಿಕರ ಕಾಲಘಟ್ಟದ ಇತಿಹಾಸ, ಸ್ವಾತಂತ್ರ್ಯ ಚಳುವಳಿ, ರಾಜ್ಯಶಾಹಿ ವ್ಯವಸ್ಥೆಯಿಂದ ಪ್ರಜಾಶಾಹಿ ಭಾರತದಲ್ಲಿ ವಿಲೀನಘಟ್ಟ, ಏಕೀಕರಣ ಚಳುವಳಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಘಟ್ಟಗಳು, ಸಾಮಾಜಿಕ ಚಳುವಳಿಗಳು, ಸತ್ಯಶೋಧನಾ ಸಮಿತಿ ವರದಿ, ಫಜಲ್ ಅಲಿ ಆಯೋಗದ ವರದಿ, ಧರ್ಮಸಿಂಗ್ ಸಮಿತಿ ವರದಿ, ಬಚಾವತ್ ಆಯೋಗದ ವರದಿ, ನಂಜುಂಡಪ್ಪ ಆಯೋಗದ ವರದಿಗಳ ಕುರಿತು ಅಧ್ಯಯನ, ಮಾನವ ಅಭಿವೃದ್ಧಿ, ಮಾಧ್ಯಮ, ಪ್ರಾದೇಶಿಕ ಅಸಮತೋಲನೆ, 371 ನೇ ಕಲಂ ಹೋರಾಟ ಮತ್ತು ಅನುಷ್ಠಾನ, ಸಾಧಕ-ಬಾಧಕಗಳು, ಭವಿಷ್ಯದಲ್ಲಿ ಅಭಿವೃದ್ಧಿಪರ ಹಮ್ಮಿಕೊಳ್ಳಬೇಕಾದ ಯೋಜನೆಗಳು, ಕಲ್ಯಾಣ ಕರ್ನಾಟಕದ ಉಡುಗೆ ತೊಡುಗೆ, ಆಹಾರ, ಪರಿಸರ, ಖನಿಜಸಂಪತ್ತು, ಅಲೆಮಾರಿ, ಜಾನಪದ, ತತ್ವಪದ, ನಾಟಕ, ಅರಣ್ಯ, ವಿಜ್ಞಾನ, ತಂತ್ರಜ್ಞಾನ, ನೀರಾವರಿ, ಕೈಗಾರಿಕೆ, ವಾಣಿಜ್ಯ, ಸಾರಿಗೆ, ರಸ್ತೆ ಸಂಪರ್ಕ, ಕ್ರೀಡೆಗಳು ಹೀಗೆ ಹಲವಾರು ಆಯಾಮಗಳ ಕುರಿತು ಆಯಾ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿದ್ವತ್ಪೂರ್ಣ ಸಂಶೋಧನಾ ಪುಸ್ತಕಗಳನ್ನು ಹೊರತರುವ ಯೋಜನೆ ಇದಾಗಿದೆ.
ಈ ಯೋಜನೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ-ಅಂತಾರಾಷ್ಟ್ರ ಮಟ್ಟದಲ್ಲಿ ಸಂಶೋಧನೆ ಮಾಡಿರುವ ವಿದ್ವಾಂಸರಿಂದ ಒಂದು ನೂರು ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಸಿ ಪ್ರಕಟಿಸಲಾಗುವುದು.
ಈ ಯೋಜನೆಯಲ್ಲಿ ಸಂಶೋಧನಾತ್ಮಕ ಪುಸ್ತಕ ಬರೆಯುವ ಆಸಕ್ತಿ ಇರುವವರು ತಾವು ಪುಸ್ತಕ ಬರೆಯಬಹುದಾದ ಕ್ಷೇತ್ರ, ವಿಷಯ, ಶೀರ್ಷಿಕೆಗಳನ್ನು ಸ್ಪಷ್ಟವಾಗಿ ಬರೆದು ಐದು ಪುಟಗಳಿಗೆ ಮೀರದಂತೆ ಸಾರಲೇಖಗಳನ್ನು ಕಳಿಸಿಕೊಡಬಹುದು. ಸಾರಲೇಖವು ತಮ್ಮ ಆಯ್ದ ಕ್ಷೇತ್ರಗಳಲ್ಲಿ, ಆಯ್ದ ವಿಷಯಕ್ಕೆ ಸಂಬಂಧಿಸಿದ ಇದುವರೆಗಿನ ಅಧ್ಯಯನಗಳು, ಸಿದ್ದಾಂತಗಳ ಅನ್ವಯ, ಅಧ್ಯಯನ ಕ್ಷೇತ್ರದ ಸದ್ಯದ ಪರಿಸ್ಥಿತಿ, ಪ್ರಸ್ತುತ ಅಧ್ಯಯನಕ್ಕೆ ಬಳಸಿಕೊಳ್ಳುವ ಸಿದ್ದಾಂತ ಮತ್ತು ವಿಧಾನಗಳು, ಅವುಗಳ ಸಮರ್ಪಕತೆ, ಆಯ್ದುಕೊಂಡ ವಿಷಯದ ಅಧ್ಯಯನದ ಫಲಿತಗಳು, ಸಾಮಾಜಿಕ ಉಪಯೋಗಗಳು ಇವುಗಳನ್ನು ಒಳಗೊಂಡಿರಬೇಕು. ಸೂಚಕ ಪದಗಳು ಮತ್ತು ಅವಶ್ಯ ಸಂದರ್ಭ ಗ್ರಂಥಗಳು ಕಡ್ಡಾಯ ಇರಬೇಕು. ಈ ಎಲ್ಲವುಗಳನ್ನೂ ಒಳಗೊಂಡ ಐದು ಪುಟಗಳಿಗೆ ಮೀರದಂತೆ ಸಾರಲೇಖವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ‘ಅಭಿವೃದ್ಧಿ ಭವನ' ಐವಾನ-ಏ-ಶಾಹಿ, ಕಲಬುರಗಿ-585102 ಈ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ ಅಥವಾ ಇಮೇಲ್ ಐಡಿ: kketihasa@gmail.com ಮೂಲಕವೂ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9844615020ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







