ರಾಯಚೂರು | ಜಿಲ್ಲಾಡಳಿತದಿಂದ ಕನಕದಾಸ ಜಯಂತಿ ಆಚರಣೆ

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನವೆಂಬರ್ 8ರಂದು ನಗರದಲ್ಲಿ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗೆ, ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಚಾಲನೆ ನೀಡಿದರು.
ನಗರದ ಗಂಜ್ ಸರ್ಕಲ್ ಹತ್ತಿರದ ಕನಕದಾಸರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನಗರದ ರಂಗಮಂದಿರದವರೆಗೆ ಸಾಗಿತು.
ಜಿಲ್ಲಾ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ಬಸನಗೌಡ ದದ್ದಲ್, ಕನಕದಾಸರು ಓರ್ವ ಮಹಾನ್ ಹರಿದಾಸ, ಸಂತ ಹಾಗೂ ತತ್ವಜ್ಞಾನಿಯಾಗಿದ್ದಾರೆ. ಕರ್ನಾಟಕದ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕನಕದಾಸರ ಕೀರ್ತನೆಗಳು ಸಮಸಮಾಜದ ಕನಸನ್ನು ಬಿತ್ತುತ್ತವೆ. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ ಎಂದರು. ಹಾಲುಮತ ಸಮಾಜದ ಕೊಡುಗೆಯು ನಾಡಿನ ಅಭಿವೃದ್ಧಿಯಲ್ಲಿ ಪ್ರಮುಖವಾಗಿದೆ ಎಂದರು.
ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಮಾತನಾಡಿ, ಹಾಲುಮತ ಸಮಾಜವು ದೊಡ್ಡ ಸಮಾಜವಾಗಿದೆ. ಈ ಸಮಾಜಕ್ಕೆ ದೊಡ್ಡ ಶಕ್ತಿಯಿದೆ ಎಂದರು. ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ. ಇದಕ್ಕಾಗಿ ಅಗತ್ಯ ಅನುದಾನ ಸಹ ನೀಡಲಾಗುತ್ತದೆ ಎಂದರು.
ಎಂಎಲ್ಸಿ ಎ.ವಸಂತ್ ಕುಮಾರ್ ಮಾತನಾಡಿ, ಹಾಲುಮತ ಸಮಾಜದವರು ಜಾಗೃತರಾಗಬೇಕು. ಸಮಾಜವು ಒಗ್ಗಟ್ಟಾಗಿ ಮುಂದೆ ಬರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಮಾತನಾಡಿ, ಕನಕದಾಸರ ಸಾಹಿತ್ಯ ಅಧ್ಯಯನ ಮಾಡಬೇಕು. ನಾವೆಲ್ಲರು ಒಂದು ಎನ್ನುವ ಅವರ ಜೀವನ ಸಂದೇಶ ಅರಿಯಬೇಕು ಎಂದರು.
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಪ್ರಾಣೇಶ್ ಕುಲಕರ್ಣಿ ಮಾತನಾಡಿ, ಭಕ್ತ ಕನಕದಾಸರು ಕರ್ನಾಟಕದಲ್ಲಿ 15-16ನೇ ಶತಮಾನಗಳಲ್ಲಿ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಪ್ರಮುಖರಾಗಿದ್ದರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರಾಗಿದ್ದರು. ಇವರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಆಗಿದ್ದರು. ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ಬಣ್ಣಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಲುಮತ ಸಮುದಾಯದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮಠಮಾರಿ ಶಿವಾನಂದ ಮಠದ ಪರಮಪೂಜ್ಯ ಶ್ರೀಜ್ಞಾನನಂದ ಮಹಾರಾಜ, ತುರ್ವಿಹಾಳ ಗುರು ಅಮೋಘಸಿದ್ದೇಶ್ವರ ಮಠದ ಪೂಜ್ಯ ಮಾದಯ್ಯಸ್ವಾಮಿ, ಲಕ್ಷ್ಮಣ ತಾತಾ, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ಮಾಡಗಿರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ್ ರಾಣಿ, ಸಮಾಜದ ಮುಖಂಡರಾದ ಕೆ.ಬಸವಂತಪ್ಪ, ಬಿ.ಬಸವರಾಜ, ಮಹಾದೇವಪ್ಪ ಮಿರ್ಜಾಪುರ, ನೀಲಕಂಠ, ಕಸ್ತೂರಮ್ಮ ಬೀರಪ್ಪ, ನಾಗರಾಜ ಮಡ್ಡಿಪೇಟ್, ಡಾ.ನಾಗವೇಣಿ , ನಾಗರತ್ನ, ನಾಗೇಂದ್ರ ಮಾಟಮಾರಿ, ಹನುಮಂತಪ್ಪ ಜಾಲಿಬೆಂಚಿ, ಶೇಖರ ವಾರದ ಸೇರಿದಂತೆ ವಿವಿಧ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದ್ದರು.







