ರಾಯಚೂರು | ನಕಲಿ ಎಸ್ಟಿ ಪ್ರಮಾಣ ಪತ್ರ ತಡೆಯಲು ಸರಕಾರಕ್ಕೆ ನಾಯಕ ಸಮಾಜ ಆಗ್ರಹ

ರಾಯಚೂರು : ನಾಯಕ ತಳವಾರ ಮತ್ತು ಪರಿವಾರ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ತಿಳಿಯದ ಹಿಂದುಳಿದ ವರ್ಗದ ಜಾತಿಗಳಿಗೆ ತಳವಾರ ಹೆಸರಿನಲ್ಲಿ ನಕಲಿ ಎಸ್.ಟಿ. ಜಾತಿ ಪ್ರಮಾಣ ಪತ್ರ ನೀಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ವಾಲ್ಮೀಕಿ ನಾಯಕ ಸಮಾಜದಿಂದ ಬುಧವಾರ ಪ್ರತಿಭಟನೆ ನಡೆಯಿತು.
ರಾಯಚೂರು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ, ಆದಿಕವಿ ಮಹರ್ಷಿ ವಾಲ್ಮೀಕಿ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಮಾಜದ ಮುಖಂಡರು ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ನಿಲ್ಲಿಸಬೇಕು ಮತ್ತು ಪರಿಶಿಷ್ಟ ಪಂಗಡದ ನಿಜವಾದ ನಾಯಕ ತಳವಾರರಿಗೆ ಅನ್ಯಾಯವಾಗುತ್ತಿರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಅಕ್ರಮವಾಗಿ ಬೇರೆ ಸಮುದಾಯದವರು ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಸೌಲಭ್ಯಗಳನ್ನು ವಂಚಿಸುತ್ತಿದ್ದಾರೆ. ಇದರಿಂದ ನೈಜ ತಳವಾರ ಜಾತಿಯವರಿಗೆ ಶಿಕ್ಷಣ, ನೇಮಕಾತಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಘೋರ ಅನ್ಯಾಯ ಸಂಭವಿಸಿದೆ ಎಂದು ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹೆಚ್ಚುವರಿ 10,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ, ಪರಿಶಿಷ್ಟ ಪಂಗಡದ ಜನಾಂಗದ ಆರ್ಥಿಕ, ಶೈಕ್ಷಣಿಕ, ರಾಜಕೀಯ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ಹೇಳಿದರು.
ವಾಲ್ಮೀಕಿ ಭವನಗಳನ್ನು ಪೂರ್ಣಗೊಳಿಸಿ, ವಿದ್ಯಾರ್ಥಿ ವೇತನ ಮತ್ತು ಸಹಾಯಧನಗಳನ್ನು ನಿರಂತರವಾಗಿ ನೀಡಬೇಕು. ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆದು ಭದ್ರತೆ ಒದಗಿಸಬೇಕು. ಬೇರೆ ಪ್ರಬಲ ಸಮುದಾಯಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಘುವೀರ್ ನಾಯಕ್ ಮಲ್ಲಿಕಾರ್ಜುನಾಯಕ, ಭೀಮರಾಯ ಹದ್ದಿನಾಳ, ಕೊಟ್ರೇಶಪ್ಪ ಕೋರಿ, ರಾಮ ನಾಯಕ್, ನರೇಂದ್ರ ನಾಯಕ್, ರಮೇಶ್ ನಾಯಕ, ರಾಮಕೃಷ್ಣ ನಾಯಕ, ರೂಪಾ ಶ್ರೀನಿವಾಸ್ ನಾಯಕ್, ಕರಿಯಪ್ಪ ನಾಯಕ ಮಡ್ದಿಪೇಟ, ವಿರುಪಾಕ್ಷಿ ನಾಯಕ ಮಂಗಳಾರಪೇಟೆ, ನಾಗರಾಜ್ ನಾಯಕ್ ಗಂಗಾ ನಿವಾಸ್, ಅರುಣ್ ಕುಮಾರ್ ದೊರೆ, ಸಂಗಮೇಶ್ ನಾಯಕ್, ತಿಮ್ಮಪ್ಪ ಮಟಮಾರಿ, ರವಿ ನಾಯಕ ತಿಮ್ಮಪ್ಪರಪೇಟೆ ಸೇರಿದಂತೆ ಅನೇಕ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.







