ರಾಯಚೂರಿನಲ್ಲಿ ಮಾಕ್ ಡ್ರಿಲ್: ಸೈರನ್ ಮೊಳಗಿಸಿ ಜನಜಾಗೃತಿ

ರಾಯಚೂರು : ಕೇಂದ್ರ ಸರ್ಕಾರ, ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ನಗರದ ಹೊರವಲಯದ ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರ( ಆರ್ ಟಿಪಿಎಸ್ ) ಹೆಲಿಪ್ಯಾಡ್ ಆವರಣದಲ್ಲಿ ಇಂದು ಸಂಜೆ ನಾಗರಿಕರ ಅಣಕು ರಕ್ಷಣಾ ಕಾರ್ಯಾಚರಣೆ (ಮಾಕ್ ಡ್ರಿಲ್) ಮಾಡಲಾಯಿತು.
ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆರೋಗ್ಯ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಸೇರಿ 10ಕ್ಕೂ ಹೆಚ್ಚಿನ ಇಲಾಖೆಯ ಸಂಯುಕ್ತಾಶ್ರದಲ್ಲಿ ಮಾಕ್ ಡ್ರಿಲ್ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಆರಂಭದಲ್ಲಿ ನೆರೆ ದೇಶ ಯುದ್ಧ ಘೋಷಣೆ ಮಾಡಿದೆ ಎಂದು ಜಿಲ್ಲಾಡಳಿತದ ಮೂಲಕ ಸಂದೇಶ ರವಾನೆಯಾಗುತ್ತದೆ, ಬಳಿಕ ದೇಶದ ಕೆಲ ಭಾಗದಲ್ಲಿ ಬಾಂಬ್ ದಾಳಿ ಆಗಿದೆ ಎಂದು ಪಟಾಕಿ ಸಿಡಿಸಿ ಯುದ್ಧದ ಸನ್ನಿವೇಶ ಸೃಷ್ಟಿ ಮಾಡಲಾಯಿತು.
ಬಾಂಬ್ ದಾಳಿಯಾದ ಬಗ್ಗೆ ಪೊಲೀಸ್ ಇಲಾಖೆಯಿಂದ ನಾಗರಿಕರಿಗೆ ಸೂಚನೆ ನೀಡಿ, ಭಯ ಪಡದೇ ಧೈರ್ಯವಾಗಿ ಪರಿಸ್ಥಿತಿ ಎದುರಿಸಿ, ಸೇನೆ ನಿಮ್ಮ ಜೊತೆಗಿದೆ ಎಂದು ಸಂದೇಶ ನೀಡಲಾಯಿತು.
ಅಗ್ನಿಶಾಮಕ ದಳ ಬೆಂಕಿ ಆರಿಸಿ ನಾಗರಿಕರನ್ನು ರಕ್ಷಣೆ ಮಾಡುವುದು ವೈದ್ಯರ ತಂಡ ಸ್ಥಳಕ್ಕೆ ಆಗಮಿಸಿ ತುರ್ತು ಚಿಕಿತ್ಸೆ ನೀಡುವುದು, ಗಾಯಾಳುಗಳನ್ನು ಆಂಬುಲೆನ್ಸ್ ನಲ್ಲಿ ಸಾಗಣೆ ಮಾಡುವುದು, ನಾಗರಿಕರ ರಕ್ಷಣಾ ಪಡೆಗಳು ಹೇಗೆ ಯುದ್ಧದ ಸಂದರ್ಭದಲ್ಲಿ ಕಾಪಾಡುತ್ತಾರೆ ಎಂದು ಸಾರ್ವಜನಿಕರಿಗೆ ಮನದಟ್ಟಾಗುವಂತೆ ಅಣಕು ಪ್ರದರ್ಶನ ಮಾಡಲಾಯಿತು.
ಗೃಹ ಸಚಿವಾಲಯದ ನಿರ್ದೇಶನದಂತೆ ಅಧಿಕಾರಿಗಳು 'ಆಪರೇಷನ್ ಅಭ್ಯಾಸ್' ಅಡಿಯಲ್ಲಿ ದೊಡ್ಡ ಪ್ರಮಾಣದ ನಾಗರಿಕ ರಕ್ಷಣಾ ಮಾಕ್ ಡ್ರಿಲ್ ನಡೆಸಲಾಯಿತು. ಎಂಎಚ್ಎ ಆದೇಶಿಸಿದ ರಾಷ್ಟ್ರವ್ಯಾಪಿ ಯುದ್ಧ ಸನ್ನದ್ಧತೆಯ ವ್ಯಾಯಾಮದ ಭಾಗವಾಗಿ ಈ ಕವಾಯತು ನಡೆಸಲಾಯಿತು.
ಸಂಜೆ 4.30ಕ್ಕೆ ಸೈರನ್ ಮೊಳಗಿಸಿದ್ದು, ಸಿಡಿಮದ್ದುಗಳ ಸದ್ದು, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಕಾರ್ಯಪ್ರವೃತ್ತವಾಗಿದ್ದನ್ನು ನೈಜ ಘಟನೆಯಂತೆ ಸೃಷ್ಠಿಸಿ ಸುಮಾರು 20 ನಿಮಿಷದವರೆಗೆ ಜಾಗೃತಿ ಮೂಡಿಸಲಾಯಿತು.
ಡಿಸಿ, ಎಸ್ಪಿ, ಸಿಇಓ ಭಾಗಿ :
ಮಾಕ್ ಡ್ರಿಲ್ ನಲ್ಲಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಅಪರ ಜಿಲ್ಲಾಧಿಕಾರಿ ಶಿವಾನಂದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ತಹಶೀಲ್ದಾರ್ ಸುರೇಶ ವರ್ಮ ಸೇರಿದಂತೆ ಇತರರು ಭಾಗಿಯಾಗಿ ಅಣುಕು ಪ್ರದರ್ಶನ ವೀಕ್ಷಣೆ ಮಾಡಿದರು.
ಸೈನಿಕರಂತೆ ಕೆಲಸ ಮಾಡೋಣ :
ಈ ವೇಳೆ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಜಿಲ್ಲೆಯ ಪ್ರತಿಯೊಬ್ಬರು ಸೈನಿಕರಂತೆ ಕೆಲಸ ಮಾಡಬೇಕು. ಜಿಲ್ಲಾಡಳಿದೊಂದಿಗೆ ಕೈಜೋಡಿಸಬೇಕು. ಸಾರ್ವಜನಿಕರು ಯಾವುದೇ ರೀತಿಯ ಭಯ ಪಡಬಾರದು ಎಂದರು.
ಕೇಂದ್ರ ಸರ್ಕಾರದ ಆದೇಶದಂತೆ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಅಣುಕು ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಅಣಕು ಪ್ರದೇಶದ ಮುಖ್ಯ ಉದ್ದೇಶವು ಶತ್ರು ದೇಶಗಳಿಂದ ದಾಳಿಯಾದ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಕ್ರಮಕ್ಕೆ ಸಂಬಂಧಿಸಿದ್ದಾಗಿರುತ್ತದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹೇಳಿದರು.
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಣುಕು ಪ್ರದರ್ಶನ ಮಾಡಬೇಕು. ಸಾರ್ವಜನಿಕರಲ್ಲಿ ಯಾವುದೇ ರೀತಿಯಲ್ಲಿ ಗೊಂದಲ ಹಾಗೂ ಅಂಜಿಕೆ ಇರಬಾರದು. ಜಿಲ್ಲಾಡಳಿತವು ಈಗಾಗಲೇ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ದೇವಸಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5-6 ಹಳ್ಳಿಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತರಬೇತಿ ನೀಡಲಾಗುವುದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಂಟ್ರೋಲ್ ರೋಂ ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಎನ್.ಸಿ.ಸಿ, ವಿದ್ಯಾರ್ಥಿಗಳು ಇದ್ದರು.