ರಾಯಚೂರು | ಮಲ್ಲಟ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ದಾರಿ ಇಲ್ಲದ ದುಸ್ಥಿತಿ; ಹಳ್ಳದ ನೀರಿನಲ್ಲಿ ಮೃತದೇಹ ಹೊತ್ತು ಸಾಗಿದ ದಲಿತರು

ರಾಯಚೂರು: ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದಲ್ಲಿ ದಲಿತ ಸಮುದಾಯದವರು ಅಂತ್ಯ ಸಂಸ್ಕಾರಕ್ಕೆ ಪರದಾಡುವಂತಾಗಿದೆ. ಇತ್ತೀಚೆಗೆ ಮೃತಪಟ್ಟ ವ್ಯಕ್ತಿಯ ಶವವನ್ನು ಎದೆಮಟ್ಟದ ಹಳ್ಳದ ನೀರಿನಲ್ಲಿ ಹೊತ್ತು ಸಾಗಿಸಿ ಶವಸಂಸ್ಕಾರ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಶವಸಂಸ್ಕಾರ ಸ್ಥಳವು ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದು, ಸ್ಮಶಾನಕ್ಕೆ ಹೋಗಲು ಸರಿಯಾದ ದಾರಿ ಇಲ್ಲದ ಕಾರಣ ಗ್ರಾಮಸ್ಥರು ಹಳ್ಳದ ನೀರಿನಲ್ಲಿ ನಡೆದುಕೊಂಡು ಹೋಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಅ.24ರಂದು ನಡೆದ ಶವಸಂಸ್ಕಾರ ಸಂದರ್ಭದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದರೂ, ಗ್ರಾಮಸ್ಥರು ಜೀವಭಯದಲ್ಲಿಯೇ ಶವವನ್ನು ಹೊತ್ತು ಹೋಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಮಳೆಗಾಲದ ಹೊರತುಪಡಿಸಿದ ದಿನಗಳಲ್ಲಿ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಶವಸಂಸ್ಕಾರಕ್ಕೆ ಅಡಚಣೆ ಆಗುವುದಿಲ್ಲ. ಆದರೆ ಮಳೆಗಾಲ ಬಂದಾಗ ತುಂಬಿ ಹರಿಯುವ ಹಳ್ಳದಲ್ಲಿಯೇ ನಡೆದು ಹೋಗುವ ಅನಿವಾರ್ಯತೆ ಇದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮಸ್ಥರಾದ ರಮೇಶ ಭಂಡಾರಿ ಹಾಗೂ ಬಸವರಾಜ ಅವರು ಮಾತನಾಡಿ, ಸ್ಮಶಾನದ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
ತಹಶೀಲ್ದಾರ್ ಅಶೋಕ ಪವಾರ್ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆ ಆಲಿಸಿ, ಸ್ಮಶಾನಕ್ಕೆ ಹೋಗಲು ಅಗತ್ಯ ದಾರಿ ವ್ಯವಸ್ಥೆ ಮಾಡಲಾಗುವುದು. ಸಾಧ್ಯವಾಗದಿದ್ದರೆ ಬೇರೆ ಸರ್ಕಾರಿ ಭೂಮಿಯನ್ನು ಗುರುತಿಸಿ ಶವಸಂಸ್ಕಾರ ಸ್ಥಳ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.







