Raichur | ಸಂಸತ್ತನ್ನು ಕಾರ್ಪೊರೇಟ್ ಕಚೇರಿಗಳು ನಿಯಂತ್ರಿಸುತ್ತಿವೆ : ಪಿ.ಜೆ.ಜೇಮ್ಸ್
ಸಿಪಿಐ(ಎಂಎಲ್) ರೆಡ್ಸ್ಟಾರ್ 13ನೇ ಮಹಾಧಿವೇಶನ ಉದ್ಘಾಟನೆ

ರಾಯಚೂರು: ದೇಶದಲ್ಲಿ ಆರೆಸ್ಸೆಸ್ನ ರಾಜಕೀಯ ಮುಖವಾಡವಾಗಿ ಬಿಜೆಪಿ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಸಂಸತ್ತನ್ನು ಕೇವಲ ಒಂದು ಪ್ರದರ್ಶನ ವಸ್ತುವನ್ನಾಗಿಸಿ, ನೀತಿ-ನಿರ್ಧಾರಗಳನ್ನು ಕಾರ್ಪೊರೇಟ್ ಕಚೇರಿಗಳು ಹಾಗೂ ನಾಗ್ಪುರದ ಕೇಂದ್ರ ಕಚೇರಿಯಿಂದ ನಿಯಂತ್ರಿಸಲಾಗುತ್ತಿದೆ ಎಂದು ಸಿಪಿಐ(ಎಂಎಲ್) ರೆಡ್ಸ್ಟಾರ್ನ ಪ್ರಧಾನ ಕಾರ್ಯದರ್ಶಿ ಪಿ.ಜೆ.ಜೇಮ್ಸ್ ಆರೋಪಿಸಿದರು.
ಬುಧವಾರ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಸಿಪಿಐ(ಎಂಎಲ್) ರೆಡ್ಸ್ಟಾರ್ 13ನೇ ಮಹಾಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಫ್ಯಾಸಿಸಂ ಯುರೋಪಿನ ಫ್ಯಾಸಿಸಂಗಿಂತ ವಿಭಿನ್ನವಾಗಿದ್ದು, ಅದು ಮುಸ್ಲಿಂ ವಿರೋಧಿ ರಾಜಕೀಯ ಮತ್ತು ಜಾತಿವಾದದ ನೆಲೆಯ ಮೇಲೆ ರೂಪುಗೊಂಡಿದೆ. ಹಿಟ್ಲರ್ ಯಹೂದಿಗಳ ವಿರುದ್ಧ ಅನುಸರಿಸಿದ್ದ ನೀತಿಯ ಮಾದರಿಯಲ್ಲೇ ಆರೆಸ್ಸೆಸ್ ಗೋಲ್ವಾಲ್ಕರ್ ಕಾಲದಿಂದಲೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಂದಿದೆ ಎಂದು ಆರೋಪಿಸಿದರು.
ಸಮಾವೇಶದಲ್ಲಿ ಪಾಲ್ಗೊಳ್ಳಲು ವಿದೇಶಗಳಿಂದ ಬರಬೇಕಿದ್ದ ಹಲವು ಪ್ರತಿನಿಧಿಗಳಿಗೆ ವೀಸಾ ಸಂಬಂಧಿತ ತೊಂದರೆಗಳಿಂದ ಭಾರತಕ್ಕೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಭಾರತೀಯ ಸರಕುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಮಂಡಿಸಲಾಗಿದ್ದರೂ, ಕೇಂದ್ರ ಸರ್ಕಾರ ಅಮೆರಿಕವನ್ನು ಪ್ರಶ್ನಿಸಲು ಹಿಂಜರಿಯುತ್ತಿದೆ ಎಂದು ಆರೋಪಿಸಿದರು. ಇತ್ತೀಚಿನ ಬ್ರಿಕ್ಸ್ ಶೃಂಗಸಭೆಯಲ್ಲಿಯೂ ಪ್ಯಾಲೆಸ್ಟೀನ್ ಮತ್ತು ಇರಾನ್ ಮೇಲಿನ ಯುದ್ಧದ ವಿಚಾರದಲ್ಲಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಕಠಿಣ ನಿಲುವು ತಾಳಲಿಲ್ಲ. ಡಾಲರ್ ಅವಲಂಬನೆ ಕಡಿಮೆ ಮಾಡುವ ಪ್ರಕ್ರಿಯೆಯಲ್ಲೂ ಭಾರತ ಸರ್ಕಾರ ಬದ್ಧತೆ ತೋರಲಿಲ್ಲ ಎಂದರು.
ಅದಾನಿ ಮತ್ತು ಅಂಬಾನಿಯಂತಹ ಬಂಡವಾಳಶಾಹಿಗಳು ಜಾಗತಿಕ ಬಹುರಾಷ್ಟ್ರೀಯ ಕಂಪನಿಗಳ ಕಿರಿಯ ಪಾಲುದಾರರಾಗಿದ್ದು, ಭಾರತದಲ್ಲಿ ಸ್ವತಂತ್ರ ತಂತ್ರಜ್ಞಾನ ನಿಯಂತ್ರಣ ಇಲ್ಲ ಎಂದು ಹೇಳಿದರು. “ವಿಶ್ವಗುರು” ಎಂದು ಹೇಳಿಕೊಳ್ಳುವ ಭಾರತ, ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗದಲ್ಲಿ ಚೀನಾ ಮತ್ತು ಅಮೆರಿಕದ ತಂತ್ರಜ್ಞಾನಗಳ ಮೇಲೆಯೇ ಅವಲಂಬಿತವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಚೀನಾಕ್ಕಿಂತ ಹಿಂದುಳಿದಿದೆ ಎಂದು ಅಭಿಪ್ರಾಯಪಟ್ಟರು.
ಕಮ್ಯುನಿಸ್ಟ್ ಚಳವಳಿಯ ಇತಿಹಾಸವನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿನ ಸಾಂಪ್ರದಾಯಿಕ ಕಮ್ಯುನಿಸ್ಟ್ ಚಳವಳಿಗಳು ಜಾತಿ ಪ್ರಶ್ನೆಯನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ಆತ್ಮಾವಲೋಕನ ಮಾಡಿಕೊಂಡರು. ಭಾರತದಲ್ಲಿ ಯುರೋಪಿಯನ್ ಮಾದರಿಯ ವರ್ಗ ವಿಶ್ಲೇಷಣೆ ಅನ್ವಯಿಸುವುದಿಲ್ಲ. ಇಲ್ಲಿ ಜಾತಿ ಮತ್ತು ವರ್ಗ ಪರಸ್ಪರ ಬೆಸೆದುಕೊಂಡಿದ್ದು, ಜಾತಿ ವಿನಾಶದ ಹೋರಾಟವೇ ವರ್ಗ ಸಂಘರ್ಷದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದರು.
ರಾಯಚೂರಿನಲ್ಲಿ ದಾಖಲಾಗುತ್ತಿರುವ ತೀವ್ರ ತಾಪಮಾನ ಹಾಗೂ ಜಾಗತಿಕ ಹವಾಮಾನ ಬಿಕ್ಕಟ್ಟಿಗೆ ಕಾರ್ಪೊರೇಟ್ ಬಂಡವಾಳಶಾಹಿಯೇ ನೇರ ಕಾರಣ ಎಂದು ಆರೋಪಿಸಿದ ಅವರು, ಕಾರ್ಲ್ ಮಾರ್ಕ್ಸ್ ಹೇಳಿದಂತೆ ಬಂಡವಾಳಶಾಹಿಯು ಮಾನವ ಅಸ್ತಿತ್ವದ ಮೂಲಗಳಾದ ಶ್ರಮ ಮತ್ತು ಪ್ರಕೃತಿ ಎರಡನ್ನೂ ನಾಶಪಡಿಸುತ್ತಿದೆ ಎಂದರು. ನೇಪಾಳದಲ್ಲಿ ಹಿಮಪರ್ವತಗಳು ಕರಗುತ್ತಿರುವುದು, ಓಝೋನ್ ಸವಕಳಿ ಸೇರಿದಂತೆ ಪರಿಸರ ಸಮಸ್ಯೆಗಳು ಬಂಡವಾಳಶಾಹಿ ಲೂಟಿಯ ಪರಿಣಾಮ ಎಂದು ಹೇಳಿದರು.
ವಿಶ್ವಾದ್ಯಂತ ಯುವಜನರು, ಮಹಿಳೆಯರು ಮತ್ತು ಕಾರ್ಮಿಕರು ಹೋರಾಟ ನಡೆಸುತ್ತಿದ್ದರೂ, ಅದನ್ನು ರಾಜಕೀಯ ಪರ್ಯಾಯವನ್ನಾಗಿ ರೂಪಿಸುವ ಪ್ರಬಲ ಕಮ್ಯುನಿಸ್ಟ್ ಚಳವಳಿಯ ಕೊರತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಹಾಧಿವೇಶನದ ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯ ಪ್ರಸ್ತಾವನೆಗಳು, ಕಾರ್ಯಕ್ರಮಗಳು ಹಾಗೂ ಭವಿಷ್ಯದ ಹೋರಾಟದ ನೀತಿ-ನಿಯಮಗಳ ಕುರಿತು ಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಎಂಸಿಪಿಐ(ಯು) ಪ್ರಧಾನ ಕಾರ್ಯದರ್ಶಿ ಅಶೋಕ ಓಂಕಾರ, ತಮಿಳುನಾಡಿನ ಕಮ್ಯುನಿಸ್ಟ್ ಪಾರ್ಟಿ ಬಾಲನ್, ಸೆಂಟರ್ ಫಾರ್ ಸೋಶಿಯಲ್ ಆಕ್ಟಿವಿಸ್ಟ್ ಸುಮಿತ ಘೋಷ, ಕೇರಳದ ಎಂ.ಕೆ.ದಾಸನ್, ತಮಿಳುನಾಡಿನ ಮನೋಹರನ್, ಆಂದ್ರಪ್ರದೇಶದ ಹರಿಪ್ರಸಾದ, ತೆಲಂಗಾಣದ ಮುಹಮ್ಮದ್ ಬಾಷಾ, ಛತ್ತೀಸಗಡ ಸೌರಾ ರಾಜ್ಯ, ಮಧ್ಯಪ್ರದೇಶದ ಫಹಿಂ, ಪಶ್ಚಿಮ ಬಂಗಾಳದ ಕನ್ಹಯ್ಯ, ದೆಹಲಿ ವಿಜಯ, ಪಂಜಾಬನ ಲಾಭ್ಸಿಂಗ್ ಸಾಗರೋತ್ತರ ಸಮಿತಿಪ್ರದುಶಕುಮಾರ, ಟಿಯುಸಿಐ ರಾಷ್ಟ್ರೀಯ ಅಧ್ಯಕ್ಷ ಸಾಬಿ ಜೋಸೆಫ್ , ಕರ್ನಾಟಕ ಎಐಕೆಕೆಎಸ್ನ ರುದ್ರಯ್ಯ, ದೆಹಲಿಯ ಎಐಆರ್ಎಸ್ಓನ ಅಂಜನ ಆಜಾದ್, ಛತ್ತೀಸಗಡನ ತುಹಿನ್, ಜಾತಿ ನಿರ್ಮೂಲನಾ ಚಳುವಳಿಯ ಇನಿಯಾವನ್, ಆದಿವಾಸಿ ಭಾರತ ಮಹಾಸಭಾದ ಉರ್ಮಿಳಾ, ಎಫ್ಇಪಿಎಡಿನ ಜಯರಾಜ್ನ, ಆರ್.ಮಾನಸಯ್ಯ ಇದ್ದರು. ಎಂ.ಡಿ.ಇಕ್ಬಾಲ್ ಸ್ವಾಗತಿಸಿದರು. ಎಂ.ಡಿ.ಅಮೀರ್ ಅಲಿ ವಂದಿಸಿದರು. ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳು ಭಾಗಿಯಾದರು.






