ರಾಯಚೂರು | ಲೋಕ್ ಅದಾಲತ್ ನಲ್ಲಿ ರಾಜಿ ಸಂದಾನದ ಮೂಲಕ ಬಾಕಿ ಪ್ರಕರಣ ಇತ್ಯಾರ್ಥ : ನ್ಯಾ.ಮಾರುತಿ ಬಾಗಡೆ

ರಾಯಚೂರು: ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ಕಕ್ಷಿದಾರರನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಬಾಗಡೆ ಹೇಳಿದರು.
ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಈ ವರ್ಷದ ಮೂರನೇ ಲೋಕ ಅದಾಲತ್ ಇಂದು ನಡೆದಿದೆ. ಈವರೆಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. 25 ಲಕ್ಷಕ್ಕೂ ಹೆಚ್ಚಿನ ಹಣವನ್ನು ರಾಜಿ ಸಂಧಾನದಲ್ಲಿ ಪಾವತಿ ಮಾಡಿಸಲಾಗಿದೆ. ಪ್ರಮುಖವಾಗಿದ್ದ ಆಸ್ತಿ ಮಾರಾಟದ ವ್ಯಾಜ್ಯವೂ ರಾಜಿಯಾಗಿದೆ ಎಂದರು.
ವಿಚಾರಣೆಗೆ ಬಾಕಿ ಇರುವ 5,000 ಪ್ರಕರಣಗಳು ಇತ್ಯರ್ಥವಾಗುವ ನಿರೀಕ್ಷೆಯಿದೆ. ವ್ಯಾಜ್ಯ ಪೂರ್ವ ಪ್ರಕರಣಗಳು 25,000 ಮೇಲ್ಪಟ್ಟು ಇತ್ಯರ್ಥಪಡಿಸಬಹುದು ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರ ಸಹಕಾರದಿಂದ ಹೆಚ್ಚಿನ ಪ್ರಕರಣ ಇತ್ಯರ್ಥಗೊಳಿಸಗುತ್ತದೆ ಎಂದು ತಿಳಿಸಿದರು.
ಡಿಸೆಂಬರ್ನಲ್ಲಿ ಮತ್ತೊಂದು ರಾಷ್ಟೀಯ ಲೋಕ ಅದಾಲತ್ ಏರ್ಪಡಿಸಲಾಗುವುದು. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡದಲ್ಲಿ ಶೇ.50 ರಷ್ಟು ರಿಯಾಯತಿ ನೀಡಲಾಗಿದೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಲೋಕ ಅದಾಲತ್ ನಡೆಯುತ್ತಿದೆ. ಅದೇ ರೀತಿಯಾಗಿ ಹೊರ ರಾಜ್ಯಗಳಲ್ಲಿಯೂ ಕೂಡ ಲೋಕ್ ಅದಾಲತ್, ರಾಜಿ ಮಾಡಲು ಪ್ರಯತ್ನ ಮಾಡಲಾಗುತ್ತದೆ. ಆದರೆ ಒಂದೇ ದಿನದಲ್ಲಿ ರಾಜಿಯಾಗುವುದಿಲ್ಲ. ನ್ಯಾಯಾಧೀಶರೂ ರಾಜಿ ಮಾಡಲು ಪ್ರಯತ್ನಿಸುತ್ತಾರೆ. ಸಾರ್ವಜನಿಕರೂ ಕೂಡ ಲೋಕ್ ಅದಾಲತ್ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಮದ್ಯಾಹ್ನ 1 ಗಂಟೆಯವರೆಗೆ ಸಿವಿಲ್, ಕ್ರಿಮಿನಲ್, ಮೋಟಾರು ವಾಹನ ಪ್ರಕರಣ ಹಾಗೂ ಕುಟುಂಬ ನ್ಯಾಯಾಲಯದ ಒಟ್ಟು ಸುಮಾರು 1,500 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಇದೇ ವೇಳೆ ಆಸ್ತಿ ವಿಚಾರವಾಗಿ ಒಂದು ವರ್ಷದಿಂದ ನಡೆಯುತ್ತಿದ್ದ ಹಾಗೂ ಬಾಕಿ ಇದ್ದ ಒಂದು ಸಿವಿಲ್ ಪ್ರಕರಣವನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಆಸ್ತಿಯಲ್ಲಿ ಹಿಸ್ಸಾಗಳನ್ನು ಪ್ರತ್ಯೇಕ ಮಾಡಿ, ಆಸ್ತಿಯನ್ನು ಹಂಚಲಾಯಿತು. ಆಸ್ತಿಗಳ ಜೊತೆಗೆ ಕೆಲವೊಂದು ಹಣದ ಮಾತುಕತೆಯೂ ಆಗಿದ್ದು, ಆಯಾ ಕಕ್ಷಿದಾರರಿಗೆ ಹಣವನ್ನು ಕೊಡಿಸಿ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಇದರ ಜೊತೆಗೆ ಟ್ರೇಡ್ ಮಾರ್ಕ್ ಕಾಯ್ದೆಯಡಿ ಹೂಡಲಾಗಿದ್ದ ದಾವೆಯನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಚ್.ಎನ್.ಸಾತ್ವಿಕ್, ವಕೀಲರು, ಕಕ್ಷೀದಾರರು, ನ್ಯಾಯಾಲಯ ಸಿಬ್ಬಂದಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಜೊತೆಗೆ ಪೊಲೀಸರು ಇದ್ದರು.







