ರಾಯಚೂರು : ಹಟ್ಟಿ ಪಟ್ಟಣಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ವಿದ್ಯಾರ್ಥಿಗಳ ಗೋಳು ಕೇಳದ ಶಾಸಕ ಮಾನಪ್ಪ; ಆರೋಪ

ಹಟ್ಟಿ: ಪಟ್ಟಣದಿಂದ ಲಿಂಗಸೂರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಎಸ್ ಎಫ್ ಐ, ಸಿ ಐ ಟಿ ಯು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳೊಂದಿಗೆ ಹಟ್ಟಿ ಬಸ್ ನಿಲ್ದಾಣದಲ್ಲಿ ಸುಮಾರು 3 ಗಂಟೆಗಳ ಕಾಲ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು
ಗುರುವಾರದಂದು ಪ್ರತಿಭಟನೆ ನಡೆಸಿದ ಜಂಟಿ ಸಂಘಟನೆಗಳ ಮುಖಂಡರು ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಾಗ ಡಿಪೋ ಮ್ಯಾನೇಜರ್ ಪಿ.ಲಕ್ಷ್ಮಣ್ ಅವರು ಸ್ಥಳಕ್ಕೆ ಆಗಮಿಸಿ, ಸಮಸ್ಯೆಯನ್ನು ಪರಿಹಾರ ಮಾಡುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲೂಕಿನ ಲಿಂಗಸ್ಗೂರು ಡಿಪೋ ದಲ್ಲಿ ಬಸ್ಸುಗಳ ಕೊರತೆ ಇದೆ. ಗುಜರಿಗೆ ಹಾಕುವ ಎಲ್ಲಾ ಬಸ್ಸುಗಳನ್ನು ತಾಲೂಕಿನಲ್ಲಿ ಓಡಿಸಲಾಗುತ್ತದೆ. ಇದರಿಂದ ಅವು ಮಧ್ಯದಲ್ಲಿ ಕೆಟ್ಟ ನಿಲ್ಲುತ್ತಿವೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಸರಿಯಾದ ಸಮಯಕ್ಕೆ ಶಾಲಾ ಕಾಲೇಜು ಹಾಗೂ ಇತರೆ ಕೆಲಸಗಳ ಸ್ಥಳಕ್ಕೆ ತಲುಪದೆ ನಿತ್ಯ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗಂತೂ ಅವರ ವಿದ್ಯಾಭ್ಯಾಸದ ಮೇಲೆ ಭಾರೀ ಪೆಟ್ಟು ಬಿದ್ದಿದೆ.
ತಾಲೂಕಿನ ಬಸ್ ಡಿಪೋಗೆ ಹೊಸ ಬಸ್ಸುಗಳನ್ನು ಖರೀದಿ ಮಾಡುವ ತುರ್ತು ಇದೆ. ಆದರೆ ಶಾಸಕ ಮಾನಪ್ಪ ವಜ್ಜಲ್ ತಾಲೂಕಿನಲ್ಲಿ ಕಾಣೆಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಯುವಜನರ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇಂತಹ ಅಯೋಗ್ಯ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ವೆಂಕೋಬ್ ಮಿಯ್ಯಾಪೂರು, ನಿಂಗಪ್ಪ ವೀರಾಪೂರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಮುಖಂಡರಾದ ಕೆಪಿಆರ್ ಎಸ್ ಮುಖಂಡರಾದ ಪೆಂಚಲಯ್ಯ, ವನಜಾಕ್ಷಿ, ಹಾಜಿಬಾಬು, ಅಲ್ಲಾಭಕ್ಷ, ರಜಿಯಾ, ಸಾಹಿರಾ ಬಾನು, ದುರುಗಮ್ಮ, ಫಕ್ರುದ್ದೀನ್, ದಾವೂದ್, ಡಿವೈಎಫ್ಐ ಮುಖಂಡ ಕಾಶಿಪತಿ ತವಗ ಹಾಗೂ ನೂರಾರು ವಿದ್ಯಾರ್ಥಿಗಳು, ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.






