ರಾಯಚೂರು | ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರೆಂದು ಘೋಷಣೆ ಮಾಡಲು ಆಗ್ರಹಿಸಿ ಪ್ರತಿಭಟನೆ

ರಾಯಚೂರು : ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಯ ನೌಕರರೆಂದು ಪರಿಗಣಿಸಬೇಕು, ಎಲ್ಲ ಮಸಣಗಳ ಅಭಿವೃದ್ಧಿಪಡಿಸಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಾಸಿಕ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು, ಕಾರ್ಮಿಕರಿಗೆ ಪರಿಕರಗಳನ್ನು ವಿತರಿಸಲು ಆದೇಶವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘಟನೆ ವತಿಯಿಂದ ನಗರದ ತಾಲೂಕ ಪಂಚಾಯತ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಎಲ್ಲಾ ಮಸಣ ಕಾರ್ಮಿಕರನ್ನು ಸರ್ಕಾರ ಗಣತಿ ಮಾಡಬೇಕು. ಅವರಿಗೆ ಪುನರ್ವಸತಿಗೆ ಕ್ರಮ ವಹಿಸಬೇಕು. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕನಿಷ್ಠ ಮಾಸಿಕ ಪಿಂಚಣಿ 3,000 ರೂ. ಒದಗಿಸಬೇಕು, ಕುಣಿ ಅಗೆದು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಮಸಣ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು, ಪ್ರತಿ ಮಸಣಕ್ಕೊಬ್ಬರಂತೆ ಮಸಣ ನಿರ್ವಾಹಕರನ್ನು ಸ್ಥಳೀಯ ಸಂಸ್ಥೆಗಳು ನೇಮಿಸಿಕೊಳ್ಳಬೇಕು, ಮಸಣ ಕಾರ್ಮಿಕರ ಕುಟುಂಬಗಳಿಗೆ ತಲಾ ಐದು ಎಕರೆ ಜಮೀನು ಒದಗಿಸಬೇಕು. ಸೆ.24, 2024ರಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇವರು ಅಧಿಕೃತವಾಗಿ ಆದೇಶ ನೀಡಿದ್ದು, ಮಸಣ ಕಾರ್ಮಿಕರಿಗೆ ಪರಿಕರಗಳನ್ನು ವಿತರಿಸಬೇಕು,ಮಸಣ ಕಾರ್ಮಿಕರೆಂದು ದೃಢೀಕೃತ ಪತ್ರವನ್ನು ನೀಡಲು ಗ್ರಾಮ ಪಂಚಾಯತ್ ಪಿಡಿಓರವರಿಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಾದ್ಯಂತ ಮಸಣ ಭೂ ಮಂಜೂರು ಮಾಡಬೇಕು ಹಾಗೂ ಮಸಣಗಳು ಇದ್ದ ಕಡೆ ಮಸಣಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ವೀರೇಶ, ಹೆಚ್. ಪದ್ಮಾ, ಮುತ್ತಣ್ಣ, ನರಸಿಂಹಲು, ರಾಮಣ್ಣ, ಹುಲಿಗೆಪ್ಪ, ಲಕ್ಷ್ಮಣ, ರಾಮಣ್ಣ ಸುಲ್ತಾನಪುರ, ಆಂಜನೇಯ, ನರಸಿಂಹಲು ಇಮ್ರಾನ್ದೊಡ್ಡಿ ಸೇರಿದಂತೆ ಅನೇಕರು ಇದ್ದರು.







