ರಾಯಚೂರು | ವಿವಿಧೆಡೆ ದಾಳಿ ; 20 ಬಾಲಕಾರ್ಮಿಕರ ರಕ್ಷಣೆ

ರಾಯಚೂರು : ಬಾಲಕಾರ್ಮಿಕರ ಮತ್ತು ಕಿಶೋರ ಕಾರ್ಮಿಕರ ಪತ್ತೆಗಾಗಿ ಮಾ.4ರಂದು ರಾಯಚೂರು ತಾಲೂಕಿನಲ್ಲಿ ಹಠಾತ್ ದಾಳಿ ನಡೆಸಿ, 20 ಬಾಲಕಾರ್ಮಿಕರ ರಕ್ಷಣೆ ಮಾಡಲಾಗಿದೆ.
ತಾಲೂಕಿನ ಸಗಮಕುಂಟ, ಶಾಖವಾದಿ, ಇಬ್ರಾಹಿಂ ದೊಡ್ಡಿ, ವಡ್ಡೆಪಲ್ಲಿ, ಯಾಪಲದಿನ್ನಿ, ಆತ್ಕೂರು, ಹೆಗ್ಗಸನಹಳ್ಳಿ ಹಾಗೂ ಮಾಮಡ ದೊಡ್ಡಿ ವ್ಯಾಪ್ತಿಯಲ್ಲಿ ದಾಳಿ ನಡೆಸಿದಾಗ 20 ಮಕ್ಕಳು ಪತ್ತೆಯಾಗಿದ್ದಾರೆ. ಇವರನ್ನು ಶಾಲೆ ಬಿಡಿಸಿ ಕೃಷಿ ಕೆಲಸಕ್ಕಾಗಿ ಸರಕು ಸಾಗಣೆ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ಬಾಲ ಕಾರ್ಮಿಕರನ್ನು ಕರೆದೊಯ್ಯಲು ಬಳಿಸಿದ 6 ಸರಕು ಸಾಗಣೆ ವಾಹನಗಳನ್ನು ಜಪ್ತಿ ಮಾಡಿ ಕ್ರಮ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರೆಡ್ಡಿ ಅವರು ಮಾತನಾಡಿ, ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಮತ್ತು ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಕರೆದುಕೊಂಡು ಹೋಗಿ ಬಾಲಕಾರ್ಮಿಕತೆಯಲ್ಲಿ ತೊಡಗಿಸಬಾರದು ಹಾಗೂ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕು ಎಂದರು.
ಈ ವೇಳೆ ವಾಹನ ಚಾಲಕರು, ಮಾಲಕರಿಗೆ ಹಾಗೂ ಪಾಲಕರಿಗೆ, ಪೋಷಕರಿಗೆ ಸ್ಟಿಕ್ಕರ್ ಮತ್ತು ಕರಪತ್ರಗಳನ್ನು ನೀಡಿ ತಿಳಿವಳಿಕೆ ಮೂಡಿಸಲಾಯಿತು.
ಕಾರ್ಯಾಚರಣೆಯಲ್ಲಿ ರಾಯಚೂರು 1ನೇ ವೃತ್ತದ ಕಾರ್ಮಿಕ ನಿರೀಕ್ಷಕರಾದ ಮಹಮ್ಮದ್ ಉಮರ್ ಅಬ್ದುಲ್ ಘನಿ, ಬಿ.ಇ.ಓ ಕಾರ್ಯಾಲಯದ ಇ.ಸಿ.ಓ ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ದಿನೇಶ್ ರಮೇಶ್ ಯಾದವ್, ಮಕ್ಕಳ ಸಹಾಯವಾಣಿ ಘಟಕದ ಸಿಬ್ಬಂದಿ ತಾಯ್ರಾಜ್ ಸೇರಿದಂತೆ ಇತರರು ಇದ್ದರು.







