ರಾಯಚೂರು | ಒಂದು ವಾರದ ಆಕಾಂಕ್ಷ ಹಾತ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ: ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಹಬ್ಬದ ಸಂಭ್ರಮ

ರಾಯಚೂರು: ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಆ.25ರಂದು ಹಬ್ಬದ ಸಂಭ್ರಮ ಕಾಣುತ್ತಿದೆ. ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳನ್ನು ಉತ್ತೇಜಿಸುವ ಆಕಾಂಕ್ಷ ಹಾತ್ ಕಾರ್ಯಕ್ರಮದಡಿ ಉದ್ಯಾನವನದಲ್ಲಿ ಸುಮಾರು 23 ಸ್ಟಾಲ್ಗಳನ್ನು ಹಾಕಲಾಗಿದ್ದು, ಬಗೆಬಗೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಜನಮನ ಸೆಳೆಯುತ್ತಿದೆ.
ಮೊದಲ ದಿನ ಬೆಳಗ್ಗೆಯಿಂದ ಸಂಜೆ ವೇಳೆಗೆ ಸುಮಾರು 2,500ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು, ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಮಹತ್ವಾಕಾಂಕ್ಷೆ ಮತ್ತು ಮಹತ್ವಾಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ದೇಶದ ಆರ್ಥಿಕತೆಯಲ್ಲಿ ಹಾಗೂ ಸದೃಢ ದೇಶ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮಹಿಳೆಯರು ಮನೆಯಲ್ಲಿ ಉತ್ಪಾದನೆ ಮಾಡಿದ ದೇಶಿ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕೆಂದರು.
ಇಂದಿನಿಂದ ಆ.30ರವರೆಗೆ ಸುಮಾರು ಒಂದು ವಾರಗಳ ಕಾಲ ನಡೆಯುವ ಮೇಳದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹೆಚ್ಚು ಗ್ರಾಹಕರನ್ನು ಸೆಳೆಯಬೇಕು. ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ಮಾರಾಟ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಮತ್ತೊಬ್ಬರಿಗೆ ಮಾದರಿಯಾಗಬೇಕು. ಸ್ವಯಂ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷ್ ರಾಣಿ ಅವರು ಮಾತನಾಡಿ, ದೇಶದ ಶೇ.60ರಷ್ಟು ಆರ್ಥಿಕ ಶಕ್ತಿಯು ಅದು ಮನೆಮನೆಗಳಿಂದಲೇ ಸಾಧ್ಯಾಗುತ್ತಿದೆ. ಮನೆಯಲ್ಲಿಯೇ ಉತ್ಪಾದನೆ ಮಾಡುವ ಉತ್ಪನ್ನಗಳಿಗೆ ಬ್ರಾಂಡ್ ಇಲ್ಲದೇ ಇರುವುದರಿಂದ ಮಾರಾಟ ವ್ಯವಸ್ಥೆ ಸವಾಲಿನಂತಾಗಿರುತ್ತದೆ. ಉತ್ಪನ್ನಕ್ಕೆ ಒಂದು ಹೆಸರು ಕೊಟ್ಟು ಇಂತಹ ಮೇಳದಲ್ಲಿ ಪರಿಚಯಿಸಬೇಕು. ಮಹಿಳೆಯರು ಉತ್ತಮ ಅಡುಗೆ ಕೌಶಲ್ಯ ಬೆಳೆಸಿಕೊಂಡು ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದಲ್ಲಿ ಉತ್ತಮ ರೀತಿಯ ಮಾರುಕಟ್ಟೆ ಸಿಕ್ಕು ಸ್ವಾವಲಂಬಿಗಳಾಗಿ ಆರ್ಥಿಕ ಸದೃಢರಾಗಲು ಸಾಧ್ಯವೆಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಡಾ.ಟಿ.ರೋಣಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಧಿಕಾರಿ ಜಿ.ಯು.ಹುಡೇದ್, ಉದ್ಯೋಗ ವಿನಿಮಯ ಅಧಿಕಾರಿ ನವೀನ್ ಕುಮಾರ, ಸ್ವ-ಸಹಾಯ ಗುಂಪುಗಳ ತಾಲೂಕು ಅಧ್ಯಕ್ಷೆ ಲಲಿತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸ್ವ-ಸಹಾಯ ಗುಂಪುಗಳ ಮಹಿಳೆಯರು ಮೇಳದಲ್ಲಿ ಭಾಗವಹಿಸಿದ್ದರು.







