ರಾಯಚೂರು | ಬಹುಗ್ರಾಮ ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದ ಜಿಪಂ ಸಿಇಓ ಈಶ್ವರ್ ಕಾಂದೂ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿತ್ತಾಪೂರು, ನರಕಲದಿನ್ನಿ ಹಾಗೂ ಮುದಗಲ್ ಗ್ರಾಮಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಈಶ್ವರ ಕಾಂದೂ ಭೇಟಿ ನೀಡಿ, ಜಲ ಜೀವನ ಮಿಷನ್ ಯೋಜನೆ ಅನುಷ್ಠಾನದ ಕುರಿತು ಪರಿಶೀಲಿಸಿದರು.
ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮ ಪಂಚಾಯತಿಯ ಜಾವೂರು ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಸ್ಥಳವಾದ ನಾರಯಣಪುರ ಅಣೆಕಟ್ಟಿಗೆ ಭೇಟಿ ನೀಡಿ ಸಸಿ ನೆಡುವುದರ ಮೂಲಕ ಕಾಮಗಾರಿಗಳ ಪರಿಶೀಲನೆಯನ್ನು ನಡೆಸಿದರು.
ನಂತರ ಪ್ರಗತಿ ಹಂತದಲ್ಲಿರುವ 160MLD ಸಾಮರ್ಥ್ಯದ ನೀರಿನ ಶುದ್ಧೀಕರಣ ಘಟಕ ಹಾಗೂ ಕ್ಲಾರಿಫ್ಲೋಕುಲೆಟರ್ ಘಟಕಗಳನ್ನು ಪರಿಶೀಲಿಸಿದರು. ನಾರಯಣಾಪುರ ಅಣೆಕಟ್ಟಿಗೆ ತೆರಳಿ ಜಾಕ್ ವೆಲ್ ಕಮ್ ಪಂಪ್ಹೌಸ್ ಡಿಸೈನ್ ಹಾಗೂ ಕಾಮಗಾರಿ ಪ್ರಗತಿಯ ಕುರಿತು ಮಾಹಿತಿಯನ್ನು ಪಡೆದರು. ಮುಂದುವರೆದು ಮುದಗಲ್ ಗ್ರಾಮದ ಸ್ಟಾಕ್ ಯಾರ್ಡ್ ಕ್ಯಾಂಪ್ ಗೆ ಭೇಟಿ ನೀಡಿ ಬಹುಗ್ರಾಮ ಕುಡಿಯುವ ನೀರಿನ ವಿವಿಧ ಘಟಕ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಕೈಗೊಂಡು SNC ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು , ಗ್ರಾ.ಕು.ನೀ.ಸ. ಉಪವಿಭಾಗ ಲಿಂಗಸುಗೂರು, ಶಾಖಾದಿಕಾರಿಗಳು , DPM &DTSU ಸಮಾಲೋಚರು, PMC ಹಾಗೂ SNC ಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು.





