ರಾಯಚೂರಿನಲ್ಲಿ ಸುಡುಬಿಸಿಲು: ಪೊಲೀಸ್ ಶ್ವಾನಗಳಿಗೆ ಕೂಲರ್ ವ್ಯವಸ್ಥೆ!

ರಾಯಚೂರು: ಬಿಸಿಲುನಾಡು ರಾಯಚೂರಿನಲ್ಲಿ ಕಳೆದೊಂದು ತಿಂಗಳಿನಿಂದ ಬಿಸಿಲು ಧಗೆ ಜೋರಾಗಿದ್ದು, ಗರಿಷ್ಠ ತಾಪಮಾನ 42-44 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗುತ್ತಿದೆ. ಇದರಿಂದ ಜನರು, ಜಾನುವಾರುಗಳು ತತ್ತರಿಸಿ ಹೋಗಿವೆ. ಸಾಕು ಪ್ರಾಣಿಗಳನ್ನು ಮರಗಳ ನೆರಳಿನಲ್ಲಿ ಮಾಲಕರು ಕಟ್ಟಿ ಹಾಕಿ ಬಿಸಿಲ ಬೇಗೆಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿ ಕಾರ್ಯಾಚರಿಸುತ್ತಿರುವ ಶ್ವಾನ ದಳಕ್ಕೂ ಕೂಲರ್ ಗಳ ವ್ಯವಸ್ಥೆ ಮಾಡಿ ತಂಪಾಗಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಬಿರುಬಿಸಿಲು ತಾಂಡವವಾಡುತ್ತಿದ್ದು. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನ ದಳದಲ್ಲಿರುವ ಐದು ನಾಯಿಗಳಿದ್ದು, ಅವುಗಳ ಕೊಠಡಿಗಳಿಗೆ ಕೂಲರ್ ಸೌಲಭ್ಯ ಕಲ್ಪಿಸಿರುವ ಜತೆಗೆ ಆಹಾರ ಪದ್ದತಿಯಲ್ಲೂ ಬದಲಾವಣೆ ತರಲಾಗಿದೆ. ಶ್ವಾನಗಳ ಆಹಾರ ರೆಫ್ರಿಜರೇಟರ್ ನಲ್ಲಿ ಇಟ್ಟು ನೀಡಲಾಗುತ್ತಿದೆ.
ಬಳ್ಳಾರಿಯಲ್ಲಿ 6, ಬೀದರ್ 4. ವಿಜಯನಗರ 2, ಕೊಪ್ಪಳ 4. ಕಲಬುರಗಿ 5, ರಾಯಚೂರಿನಲ್ಲಿ ಐದು ಸೇರಿ ರಾಜ್ಯದ ನಾನಾ ಜಿಲ್ಲೆಗಳ ಶ್ವಾನದಳದಲ್ಲಿ 270 ನಾಯಿಗಳಿವೆ. ಈ ಪೈಕಿ ಲ್ಯಾಬ್ರಡಾರ್ 98, ಬೆಳ್ಳಿಯಂ ಮೆಲೋನಿಸ್ 74, ಡಾಬರ್ ಮನ್ 61 ಮತ್ತು ಜರ್ಮನ್ ಶೆಫರ್ಡ್ 37 ನಾಯಿಗಳಿವೆ. ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ನೆರವಾಗುವ ಈ ನಾಯಿಗಳ ಆರೋಗ್ಯ ಕಾಪಾಡಲು ಪೊಲೀಸ್ ಇಲಾಖೆ ಈ ಬಾರಿ ತುಸು ಹೆಚ್ಚು ಮುತುವರ್ಜಿ ವಹಿಸಿದ್ದು ಕಾಣಬಹುದು.
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿರುವ ಶ್ವಾನದಳದ ಕಟ್ಟಡದಲ್ಲಿ ಸಿರಿ, ಲೂಸಿ, ರೀಟಾ, ಚೆರ್ರಿ, ಡಾರ್ಬಿ ಹೆಸರಿನ ಶ್ವಾನಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಐದು ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಲ್ಯಾಬ್ರಡಾರ್ ಬಲು ಸೂಕ್ಷ್ಮ
ಮನ್, ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೇವರ್ ತಳಿ ಸೇರಿ ಇತರ ನಾಯಿಗಳಿವೆ. ಲ್ಯಾಬ್ರಡಾರ್ ತಳಿ ಹೆಚ್ಚು ಉಷ್ಣಾಂಶ ತಡೆದುಕೊಳ್ಳದಷ್ಟು ಸೂಕ್ಷ್ಮವಾಗಿದೆ. ಲ್ಯಾಬ್ರಡಾರ್ ಸೇರಿ ಇತರ ನಾಯಿಗಳ ಆರೋಗ್ಯ ಕಾಪಾಡಲು ಕೂಲರ್ ಅಳವಡಿಸಿ, ದೇಹ ತಂಪುಗೊಳಿಸಲಾಗುತ್ತಿದೆ. ಮತ್ತೊಂದೆಡೆ ಸುಲಭವಾಗಿ ಜೀರ್ಣವಾಗುವ ಮತ್ತು ಹೆಚ್ಚು ನೀರಿನಾಂಶ ಇರುವ ಆಹಾರವನ್ನು ಈ ಶ್ವಾನಗಳಿಗೆ ನೀಡಲಾಗುತ್ತಿದೆ. ರಾಗಿ ಗಂಜಿ, ಮಜ್ಜಿಗೆ, ಎಳನೀರು, ಕೆಲವೆಡೆ ಸಬ್ಬಕ್ಕಿ, ಶ್ಯಾವಿಗೆ ಪಾಯಸ ನೀಡಲಾಗುತ್ತಿದೆ. ಬಿರುಬೇಸಿಗೆ ಹಿನ್ನೆಲೆ ಆಹಾರ ಮೆನುವಿನಲ್ಲಿ ಮಟನ್ ಪ್ರಮಾಣ ತಗ್ಗಿಸಲಾಗಿದೆ. ಪಶು ವೈದ್ಯರ ಸಲಹೆ ಮೇರೆಗೆ ತಣ್ಣೀರಿನಲ್ಲೇ ಸ್ನಾನ ಮಾಡಿಸಲಾಗುತ್ತಿದೆ.
ಪೊಲೀಸ್ ಶ್ವಾನಗಳು ಸ್ಫೋಟಕ ವಸ್ತುಗಳ ಪತ್ತೆ, ಅಪರಾಧ ಪತ್ತೆಗೆ ತರಬೇತಿ ನೀಡಿ ಪರಿಣತಿ ಹೊಂದಿರುತ್ತವೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶ್ವಾನಗಳ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಪೊಲೀಸ್ ಸಿಬ್ಬಂದಿಗೆ ನೀಡುವ ಗೌರವ ಶ್ವಾನಗಳಿಗೂ ನೀಡಬೇಕು. ಮಾನವೀಯ ನೆಲೆಯಲ್ಲಿ ಅವುಗಳಿಗೆ ಕೂಲರ್ ವ್ಯವಸ್ಥೆ ಮಾಡಲಾಗಿದೆ.
-ಅರುಣಾಂಗ್ಷುಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು






