ಸಿಂಧನೂರು | ಮಳೆಗೆ ಅಪಾರ ಪ್ರಮಾಣದ ಬೆಳೆನಾಶ

ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಹಲವಡೆ ಮಂಗಳವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಭತ್ತದ ರಾಶಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿಯ ಬೆಳೆ ಹಾನಿಯಾಗಿದೆ.
ಸಿಂಧನೂರು ತಾಲ್ಲೂಕಿನ ಸುಲ್ತಾನಪುರದ ಗ್ರಾಮದ ಹೊರವಲಯದಲ್ಲಿ ಕಟವಾಗಿರುವ ಸುಮಾರು 700ಕ್ಕೂ ಹೆಚ್ಚು ಕ್ವಿಂಟಾಲ್ ಭತ್ತದ ರಾಶಿಗೆ ನೀರು ನುಗ್ಗಿದ್ದು, ಸಂಪೂರ್ಣ ಹಾಳಾಗಿದೆ. ಅಂದಾಜು 10 ಲಕ್ಷ ರೂ. ಮೌಲ್ಯದ ಹಾನಿ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸುಲ್ತಾನಪುರದ ನಿವಾಸಿ ಹಾನಿಗೊಳಗಾದ ರೈತ ಲಕ್ಷ್ಮಣ ಮಾತನಾಡಿ, ಭತ್ತ ಕಟಾವು ಮಾಡಿ ಜಮೀನೊಂದರಲ್ಲಿ ರಾಶಿ ಹಾಕಲಾಗಿತ್ತು. ಇಂದು ಸಂಜೆ ಸುರಿದ ಧಾರಾಕಾರ ಮಳೆಗೆ ರಾಶಿಗೆ ನೀರು ನುಗ್ಗಿ ಸಂಪೂರ್ಣ ಹಾಳಾಗಿದೆ. ಸುತ್ತಮುತ್ತ ಜನರು ರಾಶಿ ಮಾಡಿದ್ದ ಭತ್ತ ಮಳೆಯಿಂದಾಗಿ ಕಣದ ಸುತ್ತಮುತ್ತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾದ ಕಾರಣ ಭತ್ತ ರಕ್ಷಿಸಲು ಆಗಲಿಲ್ಲ ಇದರಿಂದ ಸುಮಾರು 10 ಲಕ್ಷ ರೂಪಾಯಿವರೆಗೂ ಅಪಾರ ಹಾನಿಯಾಗಿದೆ ಎಂದರು.
ರೈತರಿಗೆ ಕೆಲ ಕಡೆ ಸೂಕ್ತ ದಾಸ್ತಾನು ಸಂಗ್ರಹ ಗೋದಾಮು ಇಲ್ಲದ ಕಾರಣ ತಮ್ಮ ಹೊಲ ಅಥವಾ ಬಯಲು ಪ್ರದೇಶದಲ್ಲಿ ಕಟಾವು ಮಾಡಿದ ಭತ್ತ ರಾಶಿ ಮಾಡಿದ್ದರು.
ಅಕಾಲಿಕ ಮಳೆಗೆ ಕಟವಾಗಿದ್ದ ಭತ್ತದ ರಾಶಿ ಹಾಗೂ ಬೆಳೆ ಸಂಪೂರ್ಣ ಹಾಳಾಗಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.





