ಸಿರಿವಾರ: ಗುತ್ತಿಗೆ ಪದ್ಧತಿ ರದ್ದು, ಕನಿಷ್ಠ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಸ್ತೆ ತಡೆ

ಸಿರಿವಾರ: ರಾಜ್ಯ ಹಾಗೂ ದೇಶದಾದ್ಯಂತ ಕಾರ್ಮಿಕರ ಬದುಕು ದಿನೇದಿನೇ ಸಂಕಷ್ಟಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ವೇತನವನ್ನು ತಕ್ಷಣ ಪರಿಷ್ಕರಿಸಿ ತಿಂಗಳಿಗೆ ಕನಿಷ್ಠ ₹42,000 ನಿಗದಿ ಮಾಡಬೇಕು, ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ಸಿರಿವಾರ ವಿಭಾಗದ ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ಅವರು, ರಾಜ್ಯ ಸರ್ಕಾರವು ಕನಿಷ್ಠ ವೇತನ ಪರಿಷ್ಕರಣೆಯಲ್ಲಿ ವಿಫಲವಾಗಿದೆ ಸಂಘಟನೆಗಳು ಆರೋಪಿಸಿವೆ. ಕಾನೂನು ಪ್ರಕಾರ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕಾದರೂ ಕೊನೆಯದಾಗಿ 2017ರಲ್ಲಿ ಮಾತ್ರ ಪರಿಷ್ಕರಣೆ ನಡೆದಿದ್ದು, ಬಳಿಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. 2025ರಲ್ಲಿ ಸುಮಾರು ₹25,000ಕ್ಕೆ ಹೆಚ್ಚಿಸುವ ಪ್ರಾಥಮಿಕ ಅಧಿಸೂಚನೆ ಹೊರಬಂದಿದ್ದರೂ ಅದನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಅವರು ಹೇಳಿದರು.
ಪ್ರಸ್ತುತ ವೇತನದಲ್ಲಿ ಆಹಾರ, ಬಟ್ಟೆ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಅಸಾಧ್ಯವಾಗಿದೆ. ಒಬ್ಬ ಕಾರ್ಮಿಕನು ಗೌರವಯುತ ಜೀವನ ನಡೆಸಲು ಕನಿಷ್ಠ ₹42,000 ವೇತನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸುಪ್ರೀಂ ಕೋರ್ಟ್ನ ಪ್ರಕಾರ ಕನಿಷ್ಠ ವೇತನ ನೀಡದಿರುವುದು ಬಲವಂತದ ಕೆಲಸಕ್ಕೆ ಸಮಾನವಾಗುತ್ತದೆ. ಆದಾಗ್ಯೂ ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಗ್ರಂಥಾಲಯಗಳು ಸೇರಿದಂತೆ ಅನೇಕ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ಕಾನೂನುಬದ್ಧ ವೇತನ ನೀಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕೆ ನಾಗಲಿಂಗ ಸ್ವಾಮಿ, ವಿಭಾಗದ ಅಧ್ಯಕ್ಷ ರಾಜಾಸಾಬ್, ಉಪ ವಿಭಾಗದ ಅಧ್ಯಕ್ಷರಾದ ವೆಂಕಟೇಶ್ ಕೋರಿ, ಈಶಪ್ಪ ಗೌಡ, ಚಂದು ಸಾಬ್, ಗೋಪಾಲ ರಾವ್, ನಾಗರಾಜ್ ಮಡಿವಾಳ, ಶಿವಪುತ್ರಪ್ಪ, ಹನುಮಂತ ನಾಯಕ, ನಾಗಲಿಕರ್ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.






