ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಯಿಂದ ಕಾರ್ಮಿಕರ ಭವಿಷ್ಯಕ್ಕೆ ಮಾರಕ: ಕೆ.ಮಹಾಂತೇಶ್

ರಾಯಚೂರು: ಕೇಂದ್ರ ಸರಕಾರ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ್ದು, ಕಾರ್ಮಿಕ ವಿರೋಧಿ, ಉದ್ಯಮಿಗಳ ಪರವಾಗಿರುವ ಕಾನೂನುಗಳಾದ್ದು ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಮಹಾಂತೇಶ್ ಹೇಳಿದರು.
ನಗರದ ಸರಕಾರಿ ನೌಕರರ ಭವನದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆ, ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಕಾರ್ಮಿಕರ-ರೈತ-ಕೂಲಿಕಾರರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೆ.ಮಹಾಂತೇಶ್, ಕೇಂದ್ರ ಸರಕಾರ 29 ಕಾರ್ಮಿಕ ಕಾನೂನುಗಳನ್ನು 4 ಕೋಡ್ಗಳಾಗಿ ಮಾಡಿ ಜಾರಿಗೊಳಿಸಿದೆ. 29 ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡದೇ ಅವುಗಳನ್ನು ತಿದ್ದುಪಡಿ ಮಾಡಿ 4 ವಿಂಗಡಣೆಯಾಗಿ ಮಾಡಿದ್ದಾರೆ. ಈ ಹಿಂದೆ 44 ಕಾರ್ಮಿಕ ಕಾನೂನುಗಳಿದ್ದವು ಅವುಗಳನ್ನು 29ಕ್ಕೆ ತರಲಾಯಿತು. ಇದೀಗ ಅವುಗಳನ್ನು 4 ಕೋಡ್ಗಳಾಗಿ ಮಾಡಿದ್ದು ಇವುಗಳು ಯಾರಿಗೂ ಅರ್ಥವಾಗದಂತೆ ಮಾಡಲಾಗಿದೆ. ತಿದ್ದುಪಡಿ ಮಾಡಿ ಮಾಲಕರ ಪರವಾಗಿ ಮಾಡಲಾಗಿದೆ ಎಂದರು.
ಕಾರ್ಮಿಕರ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ, ಕಾರ್ಮಿಕರ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ನಮ್ಮ ಬೇಡಿಕೆಯಾಗಿತ್ತು, ಇದ್ಯಾವುದನ್ನು ಮಾಡದೇ ಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೊಳಿಸಿದ್ದಾರೆ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಕಾನೂನುಗಳನ್ನು ಜಾರಿಗೊಳಿಸಿವೆ. ಕೇಂದ್ರದಲ್ಲಿ ಸಂಸದರು, ರಾಜ್ಯದಲ್ಲಿ ಶಾಸಕರು ಇವುಗಳ ಬಗ್ಗೆ ಚರ್ಚಿಸಬೇಕು. ಆದರೆ ಇದಾವುದನ್ನು ಮಾಡದೇ ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರ್ಮಿಕರ ಪರವಾದ ಕಾನೂನುಗಳು ಬೇಕಾಗಿದೆ, ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಇಎಸ್ಐ, ಪಿಎಫ್, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಕೆಗೆ ನಮ್ಮ ಒತ್ತಾಯವಾಗಿ ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟ ನಿರಂತರವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಐಯುಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮಿ, ಟಿಯುಸಿಐ ರಾಜ್ಯಾಧ್ಯಕ್ಷ ಅಮೀರ್ ಅಲಿ, ಎಸ್.ಕೆಕೆ. ಜಿಲ್ಲಾ ಸಂಚಾಲಕ ಕೆಜಿ ವೀರೇಶ್, ಸಿಐಟಿಯು ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿ, ಕಾಶಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿಎಸ್ ಶರಣಬಸವ, ಎಐಯುಟಿಯುಸಿ ಉಪಾಧ್ಯಕ್ಷ ಎನ್ಎಸ್ ವೀರೇಶ್, ಎಂ.ರವಿ, ಜಿಂದಪ್ಪ, ರೈತ ಸಂಘದ ಅಧ್ಯಕ್ಷ ಪ್ರಭಾಕರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







