ಮಾನ್ವಿ ಪಟ್ಟಣದ ತಾಯಿ-ಮಕ್ಕಳ ಆಸ್ಪತ್ರೆಯ ಸೇವೆ ಶ್ಲಾಘನೀಯ : ಸುಬೋಧ್ ಯಾದವ್

ರಾಯಚೂರು : ಮಾನ್ವಿ ಪಟ್ಟಣದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಲಭ್ಯ ಸಂಪನ್ಮೂಲಗಳ ಮೂಲಕ ನೀಡುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಜಲಶಕ್ತಿ ಸಚಿವಾಲಯದ ಅಪರ ಕಾರ್ಯದರ್ಶಿ ಸುಬೋಧ್ ಯಾದವ್ ಅವರು ಗುರುವಾರ ವ್ಯಕ್ತಪಡಿಸಿದರು.
ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ವಿವಿಧ ಇಲಾಖೆಗಳ ಸೂಚನೆಯಡಿ ಜಿಲ್ಲಾ ಮಟ್ಟದ ಪರಿಶೀಲನೆ ನಡೆಸಿದ ಅವರು, ಹೆರಿಗೆ ಪೂರ್ವ ನಿಗಾವಣೆ ಕೊಠಡಿ, ಹೆರಿಗೆ ಕೊಠಡಿ, ಬಾಣಂತಿಯರ ಆರೈಕೆ ವಾರ್ಡ್, ನವಜಾತ ಶಿಶು ಆರೈಕೆ ಘಟಕ ಮತ್ತು ತಾಯಿ-ಮಗು ಆರೈಕೆಗೆ ಸಂಬಂಧಿಸಿದ ಚಿಕಿತ್ಸಾ ವಿಧಾನಗಳು ಹಾಗೂ ಒದಗಿಸುವ ಔಷಧಿಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಆಸ್ಪತ್ರೆಯ ಸಿಬ್ಬಂದಿಗೆ ಮಾತುಕತೆ ನಡೆಸಿ, ಸಾರ್ವಜನಿಕರಿಗೆ ನೀಡುವ ಸೇವೆಗಳಲ್ಲಿ ಮಾನವೀಯತೆ ಮತ್ತು ಗುಣಮಟ್ಟ ಉಳಿಸಲು ಪ್ರತಿಯೊಬ್ಬ ವೈದ್ಯ ಮತ್ತು ಸಿಬ್ಬಂದಿಯವರ ಜವಾಬ್ದಾರಿಯಿದೆ. ಯಾವುದೇ ರೀತಿಯ ಲೋಪ ಇಲ್ಲದೆ ಸೇವೆ ನೀಡುವಂತೆ ಕಾರ್ಯನಿರ್ವಹಿಸಿ ಜನರ ಮನಸ್ಸಿನಲ್ಲಿ ಸರ್ಕಾರದ ಬಗ್ಗೆ ಗೌರವ ಮೂಡಿಸುವಂತೆ ನೋಡಿ ಎಂದು ಸಲಹೆ ನೀಡಿದರು.
ಪೂರ್ವನಿಗದಿಯಾಗಿ ಅವರು ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೂ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪ್ರೋಬೇಶನರಿ ಐಎಎಸ್ ಅಧಿಕಾರಿ ಪುರುರಾಜ್ಸಿಂಗ್ ಸೋಲಂಕಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ನಂದಿತಾ ಎಂ.ಎನ್., ಜಿಲ್ಲಾ ಎನ್ವಿಬಿಡಿಸಿಪಿ ಅಧಿಕಾರಿ ಡಾ. ಚಂದ್ರಶೇಖರಯ್ಯ ಸ್ವಾಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಖಾಲೀದ್ ಅಹಮ್ಮದ್, ತಾಲೂಕು ಆರೋಗ್ಯಾಧಿಕಾರಿ ಡಾ. ಶರಣಬಸವರಾಜ್, ಸಿಡಿಪಿಓ ಮನ್ಸೂರು ಅಲಿ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಅರವಿಂದ್ ಸೇರಿದಂತೆ ಪ್ರಸೂತಿ ಮತ್ತು ಮಕ್ಕಳ ತಜ್ಞರು ಉಪಸ್ಥಿತರಿದ್ದರು.







