Raichuru: ಯುವತಿಗೆ ಚುಡಾಯಿಸಿದ ಆರೋಪದಲ್ಲಿ ಯುವಕನನ್ನು ಅಪಹರಿಸಿ ಕೂಡಿ ಹಾಕಿ ಹಲ್ಲೆ

ರಾಯಚೂರು: ಯುವತಿಗೆ ಚುಡಾಯಿಸಿದ್ದಾನೆ ಎಂದು ಆರೋಪಿಸಿ ಯುವಕನೊಬ್ಬನನ್ನು ಅಪಹರಿಸಿ, ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದ್ದು, ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಗರದ ಯರಮರಸ್ ಕ್ಯಾಂಪ್ ನಿವಾಸಿಯಾಗಿರುವ ಮೆಹಬೂಬ್ ಎಂಬ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಕಚೇರಿ ಸಹಾಯಕ(ವಾರ್ಡ್ ಬಾಯ್) ಆಗಿ ಕೆಲಸ ಮಾಡುತ್ತಿದ್ದು ಅದೇ ಆಸ್ಪತ್ರೆಗೆ ಬಂದ ಯುವತಿಯೊಬ್ಬಳಿಗೆ ಚುಡಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಮೆಹಬೂಬ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಯುವತಿಯ ಕುಟುಂಬಸ್ಥರು, ಕೆಲ ಸ್ನೇಹಿತರು ತಡೆದು ಅಪಹರಿಸಿದ್ದರೆನ್ನಲಾಗಿದೆ.
ಮೆಹಬೂಬ್ ನನ್ನು ಐಡಿಎಸ್ ಎಂಟಿ ಲೇಔಟ್ ನಲ್ಲಿರುವ ಮನೆಯೊಂದರಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ಕೂಡಿ ಹಾಕಿ ಮನಸೋಇಚ್ಛೆ ಥಳಿಸಿದ್ದಾರೆ. ಇದರ ವೀಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ ಮಹಿಳೆಯೊಬ್ಬಳು ಮೆಹಬೂಬ್ ಮೇಲೆ ಹಲ್ಲೆ ಮಾಡುತ್ತಿರುವುದು ಕಾಣಿಸುತ್ತದೆ.
ಈ ಬಗ್ಗೆ ಬಜಾರ್ ಠಾಣಾ ಪೊಲೀಸರನ್ನು ಸಂಪರ್ಕಿಸಿದಾಗ, ಯುವಕನ ಮೇಲಿನ ಹಲ್ಲೆಯ ವೈರಲ್ ವೀಡಿಯೋ ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.




