ಕೊನೆಯವರೆಗೂ ಅಂಟಿರಲಿ ಬಣ್ಣದ ನಂಟು: ಉಮಾಶ್ರೀ

ನವೆಂಬರ್ರಿಂದ 7ರ ವರೆಗೆ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ, ಈ ಸಂದರ್ಭದಲ್ಲಿ ಶಿವಕುಮಾರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ ಖ್ಯಾತ ಕಲಾವಿದೆ ಉಮಾಶ್ರೀ ಅವರು ಶಿವಕುಮಾರ ಪ್ರಶಸ್ತಿ ಪುರಸ್ಕೃತರು. 50 ಸಾವಿರ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡ ಈ ಪ್ರಶಸ್ತಿಯನ್ನು ನವೆಂಬರ್ 7ರಂದು ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿ ಪುರಸ್ಕೃತರಾದ ಸಂದರ್ಭದಲ್ಲಿ ಉಮಾಶ್ರೀ ಅವರೊಂದಿಗೆ ನಡೆದ ಮಾತುಕತೆ ಇಲ್ಲಿದೆ.
► ಶಿವಕುಮಾರ ಪ್ರಶಸ್ತಿ ಪುರಸ್ಕೃತರಾದ ಕುರಿತು ನಿಮಗೆ ತಿಳಿದಾಗ ಅನ್ನಿಸಿದ್ದು ಮೇಡಂ?
ಸಾಣೇಹಳ್ಳಿ ಶ್ರೀಗಳ ಸಾಂಸ್ಕೃತಿಕ ಪ್ರೀತಿ ಮತ್ತು ರಂಗಪ್ರೀತಿ ಅಪಾರ. ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುವುದು, ರಂಗಭೂಮಿ ಕುರಿತು ವಿಚಾರ ಸಂಕಿರಣ, ಪ್ರತೀ ವರ್ಷ ನಾಟಕೋತ್ಸವ ಏರ್ಪಡಿಸುವುದು. ಇದರಲ್ಲಿ ಶಿವಕುಮಾರ ಪ್ರಶಸ್ತಿ ನೀಡುವುದು... ಹೀಗೆ ಅವರ ಕೆಲಸಗಳು ಏನೆಲ್ಲ! ನಾವು ಕಲಾವಿದರು ಪುಣ್ಯ ಮಾಡಿದ್ದೀವಿ. ಸಾಣೇಹಳ್ಳಿ ಶ್ರೀಗಳು ತಮ್ಮ ಗುರುಗಳ ಹೆಸರಲ್ಲಿ ನೀಡುತ್ತಿರುವ ಪ್ರಶಸ್ತಿ ಸಾಧಾರಣವಲ್ಲ. ಇದು ಬಹಳ ಹೆಮ್ಮೆಯ ಸಂಗತಿ. ಸಾರ್ಥಕ ಭಾವ, ಪುಣ್ಯದ ವಿಶೇಷ.
► ಏಕವ್ಯಕ್ತಿ ನಾಟಕ ಶರ್ಮಿಷ್ಠೆ ಕುರಿತು....
ಶರ್ಮಿಷ್ಠೆ ನಾಟಕವಾಡುವಾಗ ಭಯ, ಆತಂಕ ಇತ್ತು. ಆರಂಭದ ಪ್ರಯೋಗಗಳಿದ್ದಾಗ ಸೈಡ್ವಿಂಗ್ನಲ್ಲಿ ನಿಂತಾಗ ಸಂಭಾಷಣೆ ಕುರಿತೇ ಯೋಚನೆ ಆಗಿತ್ತು. ಎಂಟು-ಹತ್ತು ಶೋಗಳಾದ ಮೇಲೆ ಸುಲಲಿತವಾಗಿ ನಾಟಕವಾಗುತ್ತಿದೆ. ಆರಂಭದಲ್ಲಿ 40 ದಿನಗಳವರೆಗೆ ತಾಲೀಮು ಮಾಡಿದರೂ ಭಯ, ಆತಂಕ ಕಾಡುತ್ತಿತ್ತು. ಆಮೇಲೆ ಹಿಡಿತಕ್ಕೆ ತಗೊಂಡೆ. ನಾಟಕ ಕಲಿತು ಮಾಡುವುದು ಸುಲಭ, ಆದರೆ ಏಕವ್ಯಕ್ತಿ ನಾಟಕ, ಹವ್ಯಾಸಿ ನಾಟಕಗಳಲ್ಲಿ ಗೆರೆ ಕೊರೆದ ಹಾಗೆ ಅಭಿನಯಿಸಬೇಕು, ಮಾತಾಡಬೇಕು. ಈ ನಾಟಕದ ಸಂಭಾಷಣೆ ಸಹಜವಲ್ಲ. ಗ್ರಾಂಥಿಕವೂ ಅಲ್ಲ. ಮಿಶ್ರಿತವಾಗಿರುವ ಕ್ಲಾಸ್ ಭಾಷೆ ಜೊತೆಗೆ ಆಡುಮಾತು. ಯಯಾತಿ ಜೊತೆಗೆ ಶರ್ಮಿಷ್ಠೆ ಕೊನೆಗೆ ಮಾತಾಡುವಾಗ ರಾಜನೀತಿ ಕುರಿತು ಮಾತಾಡುತ್ತಾಳೆ. ಈಗ ಶರ್ಮಿಷ್ಠೆ ಒಲಿದಿದ್ದಾಳೆ.
► ನಿಮ್ಮ ರಂಗಭೂಮಿ ಪಯಣದ ಆರಂಭದ ದಿನಗಳು...
1977ರಲ್ಲಿ ‘ರುಕ್ಮಿಣಿ ಸ್ವಯಂವರ’ ಎಂಬ ಪೌರಾಣಿಕ ನಾಟಕಕ್ಕೆ ಮೊದಲು ಬಣ್ಣ ಹಚ್ಚಿದೆ. ಆಗ ಮನೆ ಬಿಟ್ಟು ಬಂದಿದ್ದೆ. ನಾಟಕದ ಕರಪತ್ರದಲ್ಲಿ ಸುಮಾ ಎಂಬ ಹೆಸರಿತ್ತು. ನಿಜವಾದ ಹೆಸರನ್ನು ಮರೆಮಾಚಬೇಕಿತ್ತು.
ಆಮೇಲೆ ‘ದೇವದಾಸಿ’ ಎಂಬ ಸಾಮಾಜಿಕ ನಾಟಕದಲ್ಲಿ ಮಣಿ ಮಂಜರಿ ಪಾತ್ರ ನಿರ್ವಹಿಸಿದೆ. 1979ರಲ್ಲಿ ರಂಗಸಂಪದ ತಂಡಕ್ಕೆ ಸೇರಿದೆ. 1982ರಲ್ಲಿ ‘ಒಡಲಾಳ’ ನಾಟಕದಲ್ಲಿ ಸಾಕವ್ವಳ ಪಾತ್ರ ಮಾಡಿದೆ. ನಂತರ ‘ಚೋಮನದುಡಿ’, ‘ಸಂಗ್ಯಾಬಾಳ್ಯ’, ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’, ‘ಸಂದರ್ಭ’, ‘ಸನ್ನಿವೇಶ’, ‘ಸಾಕ್ಷಿಕಲ್ಲು’, ‘ಹರಕೆಯ ಕುರಿ’, ‘ಯಯಾತಿ’, ‘ಕಳವು’... ಮುಂತಾದ ನಾಟಕಗಳಲ್ಲಿ ಬಣ್ಣ ಹಚ್ಚಿದೆ.
1980ರಲ್ಲಿ ಸಿನೆಮಾ ನಟಿಯಾದೆ. 1984ರಲ್ಲಿ ‘ಅನುಭವ’ ಸಿನೆಮಾದ ಮೂಲಕ ಪ್ರಖ್ಯಾತಳಾದೆ. ಸಿನೆಮಾದಲ್ಲಿ ಪ್ರಸಿದ್ಧಳಾದ ಮೇಲೆ ಕಂಪನಿ ನಾಟಕಗಳಿಗೆ ಬಣ್ಣ ಹಚ್ಚಿದೆ. ಕುಮಾರಸ್ವಾಮಿಗಳ ಕಂಪನಿಯು ದಾವಣಗೆರೆಯಲ್ಲಿದ್ದಾಗ ‘ಬಸ್ ಹಮಾಲ’ ನಾಟಕದ ಮೂಲಕ ಕಂಪನಿ ನಾಟಕಗಳ ಯಾತ್ರೆ ಶುರುವಾಯಿತು. ಹವ್ಯಾಸಿ ರಂಗಭೂಮಿಯು ಅಭಿನಯದ ಇತಿಮಿತಿಗಳನ್ನು ಕಲಿಸಿತು. ಗಟ್ಟಿಯಾದ ವ್ಯಕ್ತಿತ್ವ ರೂಪಿಸಿತು. ಸಂಘಜೀವಿಯಾಗಿ ಬೆಳೆಯುವುದಕ್ಕೂ ಕಲಿಸಿತು. ಲಿಂಗ ತಾರತಮ್ಯವಿಲ್ಲದ ಸ್ನೇಹಪರ ಕುಟುಂಬದ ಪರಿಸರ ಇರುತ್ತದೆ. 45 ವರ್ಷಗಳಿಂದ ರಂಗಸಂಪದದವರೆಲ್ಲ ಒಂದು ಕುಟುಂಬದಂತೆ ಇದ್ದೇವೆ. ನಾಟಕ ಮೀರಿ ಬಾಂಧವ್ಯ ಬೆಳೆಯಿತು.
ನಾಟಕ ಕಂಪನಿಗಳ ನಡುವೆ ಸ್ಪರ್ಧೆ ಇರುತ್ತದೆ. ಹಾಗೆಯೇ ಕಲಾವಿದರ ನಡುವೆ ಸ್ಪರ್ಧೆ ಇರುತ್ತದೆ. ನಾನು ಚೆನ್ನಾಗಿ ಪಾತ್ರ ಮಾಡಬೇಕು, ಹಾಡಬೇಕು ಎನ್ನುವ ತುಡಿತ ಇರುತ್ತದೆ. ಆದರೆ ಹವ್ಯಾಸಿ ನಾಟಕದಲ್ಲಿ ನಾಟಕ ಚೆನ್ನಾಗಿ ಬರಬೇಕೆಂಬ ತುಡಿತ ಇರುತ್ತದೆ. ಕಲಾವಿದರು ತಮ್ಮ ಅಭಿನಯದಿಂದ ನಾಟಕವನ್ನು ಗೆಲ್ಲಿಸುತ್ತಿರುವುದರ ಹೊತೆಗೆ ನೆನಪಲ್ಲಿ ಉಳಿಯುತ್ತಾರೆ. ‘ತುಘಲಕ್’ ನಾಟಕದಿಂದ ಸಿ.ಆರ್.ಸಿಂಹ, ‘ಮುಖ್ಯಮಂತ್ರಿ’ ನಾಟಕದಿಂದ ಚಂದ್ರು, ‘ತಾಯಿ’ ನಾಟಕದಿಂದ ಬಿ.ಜಯಶ್ರೀ, ‘ಹಳ್ಳಿ ಹುಡುಗಿ’ ನಾಟಕದಿಂದ ಚಿಂದೋಡಿ ಲೀಲಾ, ‘ರೈತನ ಮಕ್ಕಳು’ ನಾಟಕದಿಂದ ಗುಡಗೇರಿ ಬಸವರಾಜ, ‘ಸೊಸೆ ಹಾಕಿದ ಸವಾಲ್’ ನಾಟಕದ ಕಲಿಯುಗದ ಕುಡುಕ ಪಾತ್ರದಿಂದ ರಾಜು ತಾಳಿಕೋಟೆ... ಹೀಗೆಯೇ ‘ಒಡಲಾಳ’ದ ಸಾಕವ್ವ ಪಾತ್ರದ ಮೂಲಕ ನಾನು ಹವ್ಯಾಸಿ ರಂಗಭೂಮಿಯಲ್ಲಿ ಪ್ರಸಿದ್ಧಳಾದೆ. ಜೊತೆಗೆ ಕಂಪನಿ ನಾಟಕದಲ್ಲಿ ಖಾನಾವಳಿ ಚೆನ್ನಿ, ಸಿನೆಮಾದಲ್ಲಿ ಪುಟ್ಟಮಲ್ಲಿ, ಸೀರಿಯಲ್ನಲ್ಲಿ ಪುಟ್ಟಕ್ಕಳಾಗಿ ಪ್ರಸಿದ್ಧಳಾದೆ. ಹೀಗೆ ನಾಟಕ, ತಂಡ, ನಿರ್ದೇಶಕನ ಮೀರಿ ಕಲಾವಿದರು ಬೆಳೆಯುತ್ತಾರೆ. ಕಂಪನಿ ನಾಟಕಗಳಲ್ಲಿ ಓವರ್ ಆಕ್ಟಿಂಗ್ ನಡೆಯುತ್ತದೆ. ಆದರೆ ಹವ್ಯಾಸಿ ರಂಗಭೂಮಿಯಲ್ಲಿ ಇತಿಮಿತಿಯಲ್ಲಿ ಅಭಿನಯಿಸಬೇಕಿರುತ್ತದೆ. ಸಿನೆಮಾ, ಸೀರಿಯಲ್ನಲ್ಲಿ ಅಭಿನಯಿಸುವಾಗ ಹವ್ಯಾಸಿ ಹಾಗೂ ಕಂಪನಿ ನಾಟಕಗಳ ಶೈಲಿ ಅಳವಡಿಸಿಕೊಳ್ಳುವೆ. ಆದರೆ ಆರಂಭದ ಸಿನೆಮಾಗಳಲ್ಲಿ ನಟಿಸುವಾಗ ಕ್ಯಾಮರಾ ಗೊತ್ತಿರಲಿಲ್ಲ, ಧ್ವನಿ ಉಪಯೋಗದ ಬಗ್ಗೆ ಗೊತ್ತಿರಲಿಲ್ಲ. ಆಮೇಲೆ ಪಾಲಿಶ್ ಆಗುತ್ತಾ ಬಂದೆ. ಬದುಕು ರೂಪುಗೊಂಡ ಹಾಗೆ ಕಲೆ ಕೂಡಾ ಹಣ್ಣಾಯಿತು. ಅಭಿನಯ ಕೂಡಾ ಹಣ್ಣಾಗಕ್ಕೆ ಹೋಗುತ್ತದೆ. ಸಾವಿರಾರು ನಾಟಕಗಳ ನೂರಾರು ಪಾತ್ರಗಳ ಮೂಲಕ ಪ್ರಯೋಗ ಮಾಡಿದೆ. ಅಭಿನಯ, ಸಂಭಾಷಣೆ, ವೇಷಭೂಷಣಗಳ ಮೂಲಕ, ವಿಭಿನ್ನವಾದ ಪ್ರಯೋಗಗಳ ಮೂಲಕ ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ ಹೋಗಬೇಕು. ಇದರಿಂದ ಒಂದೇ ರೀತಿಯ ಪಾತ್ರ ಮಾಡಲಿಲ್ಲ. ಸಮಾಜದ ಜನರನ್ನು ಗಮನಿಸುತ್ತ ಪಾತ್ರಗಳಾದೆ.
► ರಂಗಭೂಮಿಯಿಂದ ಸಿನೆಮಾ, ಸೀರಿಯಲ್ಗೆ ಹೋದ್ರಿ. ಯಾವುದು ಹೆಚ್ಚು?
ನಾಟಕವೇ ಹೆಚ್ಚು. ಸಿನೆಮಾ, ಸೀರಿಯಲ್ನ ಪಾತ್ರಗಳಿಗಿಂತ ಜೀವಂತಿಕೆ ನಾಟಕದ ಮೂಲಕ ಆಗುತ್ತದೆ. ಆದರೆ ಇಲ್ಲಿಯೇ ಇದ್ದು, ಬಿದ್ದು ಗೆಲ್ಲಬೇಕು. ಅನೇಕರು ಬೇಗ ನಿರಾಶೆ ಹೊಂದುತ್ತಾರೆ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೇಕು. ಎಲ್ಲರಿಗೂ ಅವಕಾಶಗಳು ಸಿಗುವುದು ದುರ್ಲಭ, ಲಕ್ಷಾಂತರ ಕಲಾವಿದರ ನಡುವೆ ಹತ್ತಾರು ಕಲಾವಿದರು ಉಳಿಯುತ್ತಾರಷ್ಟೇ.
► ಹವ್ಯಾಸಿ ರಂಗಭೂಮಿ ಬದಲಾಗಿದೆಯೆಂದು ಅನ್ನಿಸಿದೆಯೇ?
ಬಹಳ ಬದಲಾಗಿದೆ. ಹಿಂದೆ ತಂಡದವರೆಲ್ಲ ಸೇರಿ ನಾಟಕವಾಡುತ್ತಿದ್ದರು. ಸೆಟ್, ಉಡುಪು... ಹೀಗೆ ಎಲ್ಲದಕ್ಕೂ ತಂಡದವರೇ ನಿರ್ವಹಿಸುತ್ತಿದ್ದರು. ಈಗ ಹಾಗಿಲ್ಲ. ಎಲ್ಲದಕ್ಕೂ ಪ್ರತ್ಯೇಕ ಡಿಪಾರ್ಟ್ಮೆಂಟ್ ಇದೆ ಮತ್ತು ಪೇಮೆಂಟ್ ಇದೆ. ಆದರೆ ನಾಟಕವಾಡಿಸುವ ಸಂಸ್ಥೆಗಳು ಉಳಿಯಬೇಕು. ಜೊತೆಗೆ ನಾಟಕ ಅಡುವ ತಂಡಗಳು ಉಳಿಯಬೇಕು.
ನಟ ಮುಸುರಿ ಕೃಷ್ಣಮೂರ್ತಿ ಅವರು ಒಮ್ಮೆ ಹೇಳಿದ್ದರು. ‘ಸಿನೆಮಾಗೆ ಬಂದಿದ್ದೀಯ. ಚೆನ್ನಾಗಿರು. ಯಾವುದೇ ಕಾರಣಕ್ಕೂ ಪತ್ರಿಕೆಗಳಲ್ಲಿ ಫೋಟೋ ಬಂತಾ?, ಸುದ್ದಿ ಬಂತಾ ಅಂತ ಕುತೂಹಲ ಇಟ್ಟುಕೊಳ್ಳಬೇಡ’ ಎಂದು. ಹಾಗೆಯೇ ಇರುವೆ. 22ನೇ ವಯಸ್ಸಲ್ಲಿ ಸಾಕವ್ವ ಪಾತ್ರ ಮಾಡಿದೆ. ಆಗ ಚಪ್ಪಾಳೆ ಬಿದ್ದಾಗ ಸಂಭ್ರಮಿಸಬೇಕೆಂಬ ತಿಳಿವಳಿಕೆ ಇರಲಿಲ್ಲ. ಈಗಲೂ ಆಷ್ಟೇ-ಶರ್ಮಿಷ್ಠೆ ಪಾತ್ರ ಮಾಡಿದಾಗಲೂ ಬೀಳುವ ಚಪ್ಪಾಳೆಗೆ ಉಬ್ಬಲ್ಲ. ಉಬ್ಬಿ ಹೋದರೆ ಸತ್ತ ಹಾಗೆ, ಅಣ್ಣಾವ್ರ ಡಾ.ರಾಜಕುಮಾರ್ ಕೀರ್ತಿಯನ್ನು ತಲೆಗೇರಿಸಿಕೊಳ್ಳಲಿಲ್ಲ. ಹಾಗೆ ಬದುಕಬೇಕು.
► ಮುಂದಿನ ನಾಟಕ ಮೇಡಂ?
ಸೂರಿ (ಎಸ್.ಸುರೇಂದ್ರನಾಥ್) ಅವರು ಎರಡೇ ಪಾತ್ರಗಳಿರುವ ನಾಟಕಕ್ಕೆ ಕರೆದಿದ್ದಾರೆ. ಡಿಸೆಂಬರ್ನಲ್ಲಿ ಆಗಬಹುದು, ಕೊನೆಯವರೆಗೂ ಕೊನೆಯ ದಿನದವರೆಗೂ ಕಲಾವಿದೆಯಾಗಿರಲು ಬಯಸುವೆ. ಪಾತ್ರ ಮಾಡಲು ಗಟ್ಟಿಮುಟ್ಟಾಗಿರಬೇಕು. ಸಾಕಾಯ್ತು ಅನ್ನಿಸಬಾರದು.







