ಹಳಗನ್ನಡ ಓದು, ವ್ಯಾಖ್ಯಾನ; ಪರಿಣಾಮಕಾರಿ ಪಾಠ

ಬೇರೆ ಬೇರೆ ಹಿನ್ನೆಲೆಯ ಹುಡುಗರಿಗೆ ಪಾಠ ಮಾಡುವುದು ಶಿಕ್ಷಕರಿಗೆ ನಿಜಕ್ಕೂ ಸವಾಲಿನ ಕೆಲಸ. ಅದರಲ್ಲೂ ಬೇರೆ ಬೇರೆ ಕೆಲಸಗಳ ಜೊತೆಗೆ ಪಾಠ ಮಾಡುವುದು. ಆದರೂ ತಪ್ಪಿಲ್ಲದೆ ಬರೆಯುವ ಅಭ್ಯಾಸ ಮಾಡಿಸುವುದು ಮುಖ್ಯವಾಗಬೇಕಿದೆ. ಇಲ್ಲದಿದ್ದರೆ ಡಾ. ಬೆಟ್ಟೇಗೌಡರು ಹೇಳಿದ ಹಾಗೆ ಪದವಿ ತರಗತಿಗಳಲ್ಲಿ ಓದುತ್ತಿದ್ದರೂ ಸರಿಯಾಗಿ ಅರ್ಜಿ ಬರೆಯಲು ಬರದೆ ಇರುವುದು ಕಷ್ಟಸಾಧ್ಯ.
‘‘ಪರಿಣಾಮಕಾರಿಯಾಗಿ ಪಾಠ ಹೇಗೆ ಮಾಡಬೇಕು?’’
‘‘ಮನ ಮುಟ್ಟುವ ಹಾಗೆ ಪಾಠ ಮಾಡಬೇಕು’’
ಇಂಥದೊಂದು ಚರ್ಚೆ ಮೊನ್ನೆ ಸೋಮವಾರ ಮತ್ತು ಮಂಗಳವಾರ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಹಳಗನ್ನಡ ಓದು ಮತ್ತು ವ್ಯಾಖ್ಯಾನ’ ಕುರಿತು ಕನ್ನಡ ಅಧ್ಯಾಪಕರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ನಡೆದ ಕಾರ್ಯಾಗಾರದಲ್ಲಿ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಮೈಸೂರಿನ ಕುವೆಂಪುನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರೂ ಕನ್ನಡ ಪ್ರಾಧ್ಯಾಪಕರೂ ಆದ ಡಾ. ಪಿ. ಬೆಟ್ಟೇಗೌಡ ಅವರು ಪಂಪ ಭಾರತದ ಭೀಷ್ಮರ ಪಟ್ಟಾಭಿಷೇಕ ಪ್ರಸಂಗ ಕುರಿತು ಮನ ಮುಟ್ಟುವ ಹಾಗೆ ಹೇಳಿದರು. ‘‘ಮೂವತ್ತು ವರ್ಷಗಳಿಂದ ಪಾಠ ಮಾಡುತ್ತಿರುವೆ. ಈಗಲೂ ತರಗತಿಗೆ ಹೋಗುವ ಮುನ್ನ ಓದಿಕೊಂಡು ಹೋಗುವೆ. ಇದನ್ನು ಅಧ್ಯಾಪಕಮಿತ್ರರು ಮುಂದುವರಿಸಬೇಕು.15 ವರ್ಷಗಳ ಹಿಂದೆ ವಿದ್ಯಾರ್ಥಿಗಳು ಬಂದು ಚೆನ್ನಾಗಿ ಪಾಠ ಮಾಡಿದ್ರಿ, ನೆನಪಲ್ಲಿ ಉಳಿವ ಹಾಗೆ ಪಾಠ ಮಾಡಿದ್ರಿ ಎಂದು ಹೇಳುತ್ತಿದ್ದರು. ಈಗಿನ ವಿದ್ಯಾರ್ಥಿಗಳನ್ನು ನಾನೇ ಕೇಳಿದ್ರೂ ಏನೂ ಹೇಳುವುದಿಲ್ಲ’’ ಎಂದು ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಬಸವರಾಜ್ ಅವರು ‘‘ಮೈಸೂರಿನಲ್ಲಿ ಪಿಯು ಓದುವಾಗ ಸರಿಯಾದ ಮೇಷ್ಟ್ರು ಸಿಗಲಿಲ್ಲ. ಆದರೆ ಬಿ.ಎ. ಓದುವಾಗ ಸರಿಯಾದ ಪ್ರಾಧ್ಯಾಪಕರು ಸಿಕ್ಕ ಪರಿಣಾಮ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಮೂಡಿತು. ಈಗಿನ ಅಧ್ಯಾಪಕರು ಆಸಕ್ತಿಯಿಂದ ಪಾಠ ಮಾಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಮೂಡುತ್ತಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದರು.
ಅವರ ಮಾತಿಗೆ ಧ್ವನಿಗೂಡಿಸಿದ ಹಿರಿಯ ಲೇಖಕರೂ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಆದ ಡಾ.ಕೃಷ್ಣಮೂರ್ತಿ ಮೈಸೂರು ಅವರು ‘‘ಏಳೆಂಟನೆಯ ತರಗತಿಯಲ್ಲಿರುವಾಗ ಒಳ್ಳೆಯ ಮೇಷ್ಟ್ರು ಸಿಕ್ಕಿದ್ದರಿಂದ ಅಂದು ಓದಿದ ಪಾಠಗಳೆಲ್ಲ ಈಗಲೂ ನೆನಪಿನಲ್ಲಿವೆ’’ ಎಂದು ಸ್ಮರಿಸಿಕೊಂಡರು. ಕಾರ್ಯಾಗಾರದ ನಂತರ ಸಿಕ್ಕ ಡಾ. ಬೆಟ್ಟೇಗೌಡ ಅವರು ತಮ್ಮ ಪದವಿ ಕಾಲೇಜಿನ ಶೇ.೯೦ರಷ್ಟು ವಿದ್ಯಾರ್ಥಿಗಳಿಗೆ ಸರಿಯಾಗಿ ಬರೆಯಲು ಬರುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು. ಇದರೊಂದಿಗೆ ಹಳಗನ್ನಡವನ್ನು ಪಠ್ಯದಲ್ಲಿರಿಸಬೇಡಿ ಜೊತೆಗೆ ಜನ್ನನ ಯಶೋಧರ ಚರಿತೆಯನ್ನು ಸರಳ ಕನ್ನಡದಲ್ಲಿ ಪ್ರಕಟಿಸಿ ಎಂದು ಅನೇಕ ಕನ್ನಡ ಅಧ್ಯಾಪಕರು ಒತ್ತಾಯಿಸುವುದನ್ನೂ ಡಾ. ಬೆಟ್ಟೇಗೌಡರು ಸ್ಮರಿಸಿದರು.
ಇದಕ್ಕೆ ಪೂರಕವಾಗಿ ಹೇಳುವೆ; ತಿಂಗಳ ಹಿಂದೆ ಮಠವೊಂದರಲ್ಲಿ ನಮ್ಮ ‘ಕೌದಿ’ ನಾಟಕದ ಪ್ರದರ್ಶನವಿತ್ತು. ಇದಕ್ಕಾಗಿ ಮಠದಲ್ಲಿ ಉಳಿಯುವುದು ನಿಕ್ಕಿಯಾದ ಕಾರಣ ಸಂಜೆ ಹೊತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸಲು ಹೊರಟೆ. ‘‘ಏಳನೆಯ ತರಗತಿ ವಿದ್ಯಾರ್ಥಿಗಳು ಯಾರಿದ್ದೀರಿ?’’ ಎಂದು ಕೇಳಿದಾಗ ಏಳೆಂಟು ವಿದ್ಯಾರ್ಥಿಗಳು ಕೈ ಎತ್ತಿದರು. ‘‘ನಿಮ್ಮ ಕನ್ನಡದ ಪಠ್ಯಪುಸ್ತಕ ತಗೊಂಡು ಬರ್ರಿ’’ ಎಂದಾಗ ಒಂದಿಬ್ಬರು ಹುಡುಗರು ತಂದುಕೊಟ್ಟರು. ಅವರಿಗೆ ಏಣಗಿ ಬಾಳಪ್ಪ ಅವರ ಕುರಿತು ನನ್ನ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿಯಿಂದ ಆಯ್ದ ಪಠ್ಯವನ್ನು ತೋರಿಸಿದೆ. ಖುಷಿಯಾದರು. ಅವರೊಂದಿಗೆ ಮಾತನಾಡುತ್ತಿರುವಾಗ ‘‘ಸರ್, ಇಂವ ಅಳ್ತಾಯಿದ್ದಾನೆ’’ ಎಂದೊಬ್ಬ ಹುಡುಗ ಹೇಳಿದ. ಅಳುವ ಹುಡುಗನನ್ನು ಹತ್ತಿರ ಕರೆದು ಕೇಳಿದೆ. ‘‘ಊರಿಂದ ನಿನ್ನೆಯೇ ಬಂದಿರುವೆ’’ ಎಂದ. ಅವನನ್ನು ತೊಡೆ ಮೇಲೆ ಕೂಡಿಸಿಕೊಂಡು ಹೆಸರೇನು? ಯಾವ ಊರು ಇತ್ಯಾದಿ ವಿವರ ಕೇಳಿ ‘‘ನಿನ್ನ ಹೆಸರು, ಅಪ್ಪ ಅಮ್ಮನ ಹೆಸರು, ಊರಿನ ಹೆಸರು ಬರೆದು ತೋರಿಸು’’ ಎಂದೆ. ಐದನೇ ತರಗತಿ ಓದಲು ಬಂದವನಿಗೆ ತನ್ನ ಹೆಸರು ಬಿಟ್ಟು ಬೇರೆ ಬರೆಯಲು ಬರಲ್ಲ ಎಂದ. ಅಭ್ಯಾಸ ಮಾಡು ಎಂದೆ. ಹಾಗೆ ಅವನ ಅಪ್ಪನ ಹೆಸರು, ಊರಿನ ಹೆಸರು ಬರೆಯಲು ಹೇಳಿ ‘ಕರ್ನಾಟಕ ರಾಜ್ಯ’ ಎಂದು ಬರೆ ಎಂದೆ. ಬರೆಯಲಿಲ್ಲ. ಯಾಕೆಂದೆ ಕಲಿಸಿಲ್ಲ ಎಂದ. ಅವನ ಮುಖವನ್ನೇ ದಿಟ್ಟಿಸಿ ನೋಡಿದೆ. ಪ್ರಾಮಾಣಿಕವಾಗಿ ಹೇಳಿದ್ದ. ಆಮೇಲೆ ಅವನಿಗೆ ಅಕ್ಷರಮಾಲೆ ಬರೆಸಿದೆ. ಆನಂತರ ವಿದ್ಯಾರ್ಥಿಗಳಿಗೆ ‘ಉತ್ಸವ’, ‘ರಾಜ್ಯೋತ್ಸವ’ ಎಂದು ಹೇಳಿ ಎಂದೆ. ಸಾಮೂಹಿಕವಾಗಿ ಹೇಳಿದಾಗ ಯಾರು ಸರಿಯಾಗಿ ಹೇಳುತ್ತಿದ್ದಾರೆಂದು ಗೊತ್ತಾಗಲಿಲ್ಲ. ಆಗ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರತ್ಯೇಕವಾಗಿ ಕೇಳಿದಾಗ ಅನೇಕರು ‘ಉತ್ಸವ’ ಬದಲು ‘ಉಸ್ತವ’ ಎಂದೂ ‘ರಾಜ್ಯೋಸ್ತವ’ ಎಂದೂ ಹೇಳಿದರು. ಆಮೇಲೆ ‘ಹಕ್ಕಿಯು ಅಕ್ಕಿಯನ್ನು ಹೆಕ್ಕಿ ಹೆಕ್ಕಿ ತಿಂದಿತು’ ಎಂದು ಹೇಳಿ ಎಂದಾಗ ಅನೇಕರು ತಪ್ಪಾಗಿ ಹೇಳಿದರು. ಅವರ ಚಿತ್ತಚಾಂಚಲ್ಯದ ಪರಿಣಾಮ ಸರಿಯಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ. ಕೇಳಿಸಿಕೊಂಡರೂ ತಪ್ಪಾಗಿ ಹೇಳುತ್ತಿದ್ದರು. ‘ಹಕ್ಕಿ’ ಎನ್ನುವ ಬದಲು ‘ಅಕ್ಕಿ’ ಎಂದೂ ‘ಹೆಕ್ಕಿ’ ಎನ್ನುವ ಬದಲು ‘ಎಕ್ಕಿ’ ಎಂದೂ ಹೇಳಿದರು. ಒಂದಿಬ್ಬರು ಸರಿಯಾಗಿ ಹೇಳಿದರು. ಅವರೊಂದಿಗೆ ಒಂದೂವರೆ ಗಂಟೆ ಕಳೆದದ್ದು ಖುಷಿ ಕೊಡಲಿಲ್ಲ, ಬದಲಾಗಿ ಆತಂಕವಾಯಿತು.
ಹೀಗೆ ಬೇರೆ ಬೇರೆ ಹಿನ್ನೆಲೆಯ ಹುಡುಗರಿಗೆ ಪಾಠ ಮಾಡುವುದು ಶಿಕ್ಷಕರಿಗೆ ನಿಜಕ್ಕೂ ಸವಾಲಿನ ಕೆಲಸ. ಅದರಲ್ಲೂ ಬೇರೆ ಬೇರೆ ಕೆಲಸಗಳ ಜೊತೆಗೆ ಪಾಠ ಮಾಡುವುದು. ಆದರೂ ತಪ್ಪಿಲ್ಲದೆ ಬರೆಯುವ ಅಭ್ಯಾಸ ಮಾಡಿಸುವುದು ಮುಖ್ಯವಾಗಬೇಕಿದೆ. ಇಲ್ಲದಿದ್ದರೆ ಡಾ. ಬೆಟ್ಟೇಗೌಡರು ಹೇಳಿದ ಹಾಗೆ ಪದವಿ ತರಗತಿಗಳಲ್ಲಿ ಓದುತ್ತಿದ್ದರೂ ಸರಿಯಾಗಿ ಅರ್ಜಿ ಬರೆಯಲು ಬರದೆ ಇರುವುದು ಕಷ್ಟಸಾಧ್ಯ. ಆಮೇಲೆ ವಿದ್ಯಾರ್ಥಿಗಳಿಗೆ ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ?’ ಕವನವನ್ನು ಪಾತರಗಿತ್ತಿ ಅಂದರೆ ಚಿಟ್ಟೆ ಹೇಗೆ ಹಾರುತ್ತದೆ ಎಂದು ಕೈ ಮಾಡಿ ತೋರಿಸಿದೆ. ಹೀಗೆಯೇ ಕೆಲ ಕವನಗಳನ್ನು ಗಟ್ಟಿಯಾಗಿ ಓದಿ, ನಾಟಕೀಯವಾಗಿ ಓದಿ ಅವರ ಮನ ಮುಟ್ಟಲು ಪ್ರಯತ್ನಿಸಿದೆ. ಮರುದಿನ ಬೆಳಗ್ಗೆಯೇ ನಮ್ಮ ತಂಡದ ‘ಕೌದಿ’ ನಾಟಕದ ಪ್ರದರ್ಶನ ಸಲುವಾಗಿ ಹೊರಡಬೇಕಿತ್ತು.
ಈ ಬಾರಿಯ ‘ಕೌದಿ’ ನಾಟಕದ ಪ್ರದರ್ಶನಗಳು ಗದಗ ಜಿಲ್ಲೆಯಲ್ಲಿಯೇ ಹೆಚ್ಚಿದ್ದವು. ತೋಂಟದಾರ್ಯ ಮಠದ ಶಿವಾನುಭವದ ಜೊತೆಗೆ ತೋಂಟದಾರ್ಯ ಮಠದ ಡಾ. ಡಿ.ಸಿ. ಪಾವಟೆ ಬಿ.ಇಡಿ. ಕಾಲೇಜು ಅಲ್ಲದೆ ಜಗದ್ಗುರು ಪಂಚಾಚಾರ್ಯ ಬಿ.ಇಡಿ. ಕಾಲೇಜು ಹಾಗೂ ಪಂಚಾಕ್ಷರ ಗವಾಯಿಗಳ ಬಿ.ಇಡಿ. ಕಾಲೇಜಿನಲ್ಲಿ ಕೌದಿ ನಾಟಕ ಪ್ರದರ್ಶಿಸಿದೆವು. ಆಗ ಪಂಚಾಕ್ಷರ ಗವಾಯಿಗಳ ಬಿ.ಇಡಿ. ಕಾಲೇಜಿನ ವಿದ್ಯಾರ್ಥಿನಿ ಸುಪ್ರಿಯಾ ಡೊಳ್ಳಿನ ಅವರು ಕೌದಿ ಕುರಿತೇ ಹನಿಗವನ ರಚಿಸಿದರು ಜೊತೆಗೆ ವಾಚಿಸಿದರು ಕೂಡಾ. ಅದು ಹೀಗಿದೆ;
‘‘ಚಿತ್ತಾರಗಳನ್ನು ಹೊತ್ತ ಚೆಲುವಿನ ಕೌದಿ
ಬಣ್ಣಬಣ್ಣದ ಬಟ್ಟೆಗಳಿದ್ದರೂ ಬಿಳಿ ದಾರದಿಂದ ಒಂದಾದ ಕೌದಿ
ತ್ಯಾಪೆ ಹಚ್ಚಿಕೊಂಡರೂ ತನ್ನತನವನ್ನು ತೋರಿಸುವ ಕೌದಿ
ಕಂದನಿಗೆ ಕಾವಲಾದ ಕೌದಿ
ತುಂಡು ಅರಿವಿಗಳನ್ನು ತನ್ನೊಡಲಿನಲ್ಲಿ ಇರಿಸಿದ
ದಿಂಬಿಗೆ ದೊರೆಯಾದ ಕೌದಿ
ಅವರ ಹೊಟ್ಟೆಪಾಡಿಗಾದರೂ ನನ್ನವ್ವ, ನನ್ನಮ್ಮ
ನನ್ನೊಂದಿಗೆ ಇರುವರೆಂಬ ಹರುಷ ನೀಡುವ ಕೌದಿ’’
ಹೀಗೆ ಅವರು ಕವನ ವಾಚಿಸಿದ ತಕ್ಷಣ ಜೋರಾದ ಚಪ್ಪಾಳೆ ಬಂದವು. ಕೌದಿ ನಾಟಕ ನೋಡುತ್ತಲೇ ಅವರು ಈ ಕವನ ಬರೆದುದಕ್ಕೆ ಅಭಿನಂದಿಸಿದೆ. ಕೌದಿ ಕಾಡಿದ್ದಕ್ಕೆ ಕವನ ಹುಟ್ಟಿತು ಎಂದರು. ನಿಜ, ಹೀಗೆಯೇ ಪರಿಣಾಮಕಾರಿ ಪಾಠ ಮಾಡಿರಿ. ಖಾಸಗಿ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ಸೇರಿದ ಮೇಲೆ ಕಡಿಮೆ ಸಂಬಳವೆಂದು ಮಕ್ಕಳಿಗೆ ಸರಿಯಾಗಿ ಪಾಠ ಮಾಡದೆ ಇರಬೇಡಿ. ಸರಿಯಾಗಿ ಮಕ್ಕಳು ಕಲಿಯದೆ ಇದ್ದಾಗ ಗಮನವಿಟ್ಟು ಕಲಿಸಿ. ನಿಮ್ಮ ಸಮಸ್ಯೆ, ಸಂಕಟಗಳನ್ನು ಸರಿಯಾಗಿ ಕಲಿಯದೆ ಇರುವ ವಿದ್ಯಾರ್ಥಿಗಳನ್ನು ಹೊಡೆಯುವ ಮೂಲಕ ತೀರಿಸಿಕೊಳ್ಳಬೇಡಿ ಎಂದು ವಿನಂತಿಸಿಕೊಂಡೆ. ಇದರೊಂದಿಗೆ ಪಂಪನ ಊರಾದ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ನಿಂಗಮ್ಮ ಹೂಗಾರ ಪಿಯು ಕಾಲೇಜಿನ ವಿದ್ಯಾರ್ಥಿಗಳ ಎದುರು ಕೌದಿ ನಾಟಕ ಪ್ರದರ್ಶಿಸಲು ಅವಕಾಶ ನೀಡಿದವರು ಆ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಹರ್ಲಾಪುರ. ಅವರಿಗೆ ಎಂಭತ್ತು ವರ್ಷ ವಯಸ್ಸಷ್ಟೇ. ಈಗಲೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯವೈಖರಿಗೊಂದು ಉದಾಹರಣೆ ಎಂದರೆ; ನಾಟಕ ಪ್ರದರ್ಶನ ನಿಗದಿಯಾಗಿದ್ದ ತರಗತಿಯ ಕೋಣೆಯ ಕರಿಹಲಗೆ ಮೇಲೆ ಚಿತ್ರಕಲಾ ಶಿಕ್ಷಕ ವಸಂತ್ ಪಟ್ಟೇದ ಅವರು ಸುಂದರವಾಗಿ ಕೌದಿ ನಾಟಕ ಕುರಿತು ಚಿತ್ರಸಮೇತ ಬರೆಸಿದ್ದರು.
ಮತ್ತೆ ಹಳಗನ್ನಡ ಓದು ಮತ್ತು ವ್ಯಾಖ್ಯಾನ ಕುರಿತ ಕಾರ್ಯಾಗಾರದತ್ತ ಬರುವೆ; ಸಮಾರೋಪ ಸಮಾರಂಭದಲ್ಲಿ ಹಿರಿಯ ಲೇಖಕ ಹನೂರು ಕೃಷ್ಣಮೂರ್ತಿ ಅವರು ಈ ಬಗೆಯ ಕಾರ್ಯಾಗಾರಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಅಧ್ಯಾಪಕರಿಗೆ ಅಗತ್ಯವಿದೆ ಎಂದು ಒತ್ತಿ ಹೇಳಿದ್ದು ಮರೆಯಲಾಗದು. ಇದರೊಂದಿಗೆ ಸರಿಯಾಗಿ ಉಚ್ಚಾರ ಮಾಡುವುದಕ್ಕಾಗಿ, ಆಕರ್ಷಕವಾಗಿ, ಏಕತಾನತೆಯಿಲ್ಲದೆ, ಪರಿಣಾಮಕಾರಿ ಪಾಠ ಮಾಡುವುದನ್ನು ಕಲಿಸಲು ಕನ್ನಡ ಅಧ್ಯಾಪಕರಿಗೆ ರಂಗಭೂಮಿ ಕುರಿತ ಶಿಬಿರಗಳಾಗಬೇಕು ಎನ್ನುವುದು ನನ್ನ ಒತ್ತಾಸೆ. ಇದಕ್ಕೊಂದು ಉದಾಹರಣೆ; ಕೆಲ ವರ್ಷಗಳ ಮೈಸೂರಿನ ರಂಗಾಯಣವು ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ನಾಟಕವಾಗಿ ಆಯ್ಕೆ ಮಾಡಿಕೊಂಡಿತ್ತು. ಕಲಾವಿದರು ಕಬ್ಬಿಣದ ಕಡಲೆ ಎಂದಾಗ ಹೆಗ್ಗೋಡಿನಿಂದ ಮಹಾಬಲೇಶ್ವರರಾವ್ ಅವರು ಬಂದು ಮಹಾಕಾವ್ಯವನ್ನು ವಾಚಿಸಿ, ಮನನ ಮಾಡಿ ಕೊಟ್ಟ ಪರಿಣಾಮ ನಾಟಕ ಯಶಸ್ವಿಯಾಯಿತು. ಹೀಗೆಯೇ ಹಳಗನ್ನಡವನ್ನು ನಾಟಕವಾಗಿಸಿ, ಅಧ್ಯಾಪಕರೇ ಪಾತ್ರಗಳಾಗಿ ರಂಗದ ಮೇಲೆ ಬರುವಂತಾದರೆ? ಖಂಡಿತವಾಗಿ ಅವರು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಪಾಠ ಮಾಡಬಲ್ಲರು.






