ಪ್ರೇಕ್ಷಕರ ಮನಕರಗಿಸಿದ ‘ಕಲ್ಲು ಕರಗುವ ಸಮಯ’

ನಾಟಕ: ಕಲ್ಲು ಕರಗುವ ಸಮಯ
ಮೂಲ: ಪಿ. ಲಂಕೇಶ್ ಕಥೆ
ರಂಗರೂಪ, ವಿನ್ಯಾಸ, ನಿರ್ದೇಶನ: ಕೆ.ಆರ್. ಸುಮತಿ
ಸಂಗೀತ: ಎಚ್. ಜನಾರ್ದನ್ (ಜನ್ನಿ), ಚಿಂತನ್ ವಿಕಾಸ್
ಗಾಯಕರು: ದೇವಾನಂದ ವರಪ್ರಸಾದ್, ಸಿದ್ದೇಶ್
ರಂಗಸಜ್ಜಿಕೆ: ಎಚ್.ಕೆ.ವಿಶ್ವನಾಥ್
ಬೆಳಕು: ರಾಜೇಶ್ ತಲಕಾಡು
ಪ್ರಸಾಧನ: ಅಶ್ವಥ್ ಕದಂಬ
ಮೇಲ್ವಿಚಾರಣೆ: ಮಧು ಮಳವಳ್ಳಿ
ತಂಡ: ಜನಮನ ಸಾಂಸ್ಕೃತಿಕ ಸಂಘಟನೆ
ರಂಗದ ಮೇಲೆ: ಮಾನಸಿ, ಶಿವರಾಜು, ಸನ್ಮತಿ, ಮಲ್ಲೇಶ, ಎಂ.ಆರ್. ದರ್ಶನ್, ರಾಧಿಕಾ, ದರ್ಶನ್, ಪ್ರಜ್ವಲ್, ವಿಜಯ್, ಸಲ್ಮಾನ್ತಾಜ್, ಶಶಿಕುಮಾರ್, ನಿರ್ಮಲಾದೇವಿ, ವಿನೋದಕುಮಾರ್.
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತವಾದ ಪಿ.ಲಂಕೇಶ್ ಅವರ ‘ಕಲ್ಲು ಕರಗುವ ಸಮಯ’ ಕಥಾಸಂಕಲನದಿಂದ ಅದೇ ಹೆಸರಿನ ಕಥೆಯನ್ನು ಆಯ್ದುಕೊಂಡು ಕೆ.ಆರ್. ಸುಮತಿ ಅವರು ರಂಗರೂಪಕ್ಕಿಳಿಸಿ, ವಿನ್ಯಾಸಗೊಳಿಸಿ, ನಿರ್ದೇಶಿಸಿದ್ದಾರೆ. ಈ ನಾಟಕ ಕಳೆದ ರವಿವಾರ (ಅ.5) ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು.
ಜಾತಿ, ಧರ್ಮವನ್ನು ಮೀರಿ ಪ್ರೀತಿ, ಪ್ರೇಮ ಅರಳುತ್ತದೆ. ಆದರೆ ಪ್ರೀತಿಸಿದ ಜೀವಗಳನ್ನು ಹೊಸಕಿ ಹಾಕುವ ಹುನ್ನಾರ, ಸಂಚು ನಿರಂತರವಾಗಿ ನಡೆಯುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕಷ್ಟ. ಇಂಥ ಸಂದರ್ಭದಲ್ಲಿ ಕ್ರೌರ್ಯ ತುಂಬಿದ ಮನಸ್ಸನ್ನು ಬದಲಾಯಿಸುವ, ಮಾನವೀಯಗೊಳಿಸುವ ಗುಣ ಪ್ರೀತಿಗೆ ಇದೆ ಎಂದು ಸಾಬೀತುಪಡಿಸುವ ನಾಟಕವಿದು.
ನಾಟಕ ಆರಂಭವಾಗುವುದೇ ಸೂತ್ರಧಾರರು ಕಥೆ ಹೇಳುವುದರ ಮೂಲಕ. ಅವರು ಆಗಾಗ ಪಾತ್ರಗಳೂ ಆಗುತ್ತಾರೆ. ಹಾಗೆಯೇ ನಾಟಕವನ್ನು ಮುಂದೆ ಕೊಂಡೊಯ್ಯುತ್ತಾರೆ. ಆದರೆ ಒಮ್ಮೊಮ್ಮೆ ಅವರೇ ನಾಟಕದ ಓಘಕ್ಕೆ ಕೊಂಚ ಅಡ್ಡಿಯಾಗುತ್ತಾರೆ ಎನ್ನುವುದೂ ನಿಜ. ಏಕೆಂದರೆ ನಾಟಕದ ಕಥೆ ಸಾಗುತ್ತಿರುವಾಗ ಥಟ್ಟನೆ ಸೂತ್ರಧಾರರು ಪ್ರವೇಶಿಸುತ್ತಾರೆ.
ಗ್ರಾಮದ ಮಲ್ಲೇಗೌಡ ತನ್ನ ವಿರುದ್ಧ ಯಾರೂ ಸೊಲ್ಲೆತ್ತದಂತೆ ನೋಡಿಕೊಂಡಿರುವ ಸಂದರ್ಭದಲ್ಲಿ ಆತನ ಮಗಳು ಶ್ಯಾಮಲಾ, ಕುರುಬರ ಹುಡುಗ ತಿಪ್ಪಣ್ಣನನ್ನು ಪ್ರೀತಿಸುತ್ತಾಳೆ. ಅವರಿಬ್ಬರ ಪ್ರೀತಿ ಚಿಗಿತದ್ದು ಕ್ರಾಂತಿ ವೇದಿಕೆ ಏರ್ಪಡಿಸಿದ್ದ ಸಿನೆಮಾ ಕಮ್ಮಟದ ಮೂಲಕ.
‘‘ಜಂಗಮರ ಶ್ಯಾಮಲಾ
ಕುರುಬರ ತಿಪ್ಪಣ್ಣ
ಕೇದಿಗೆಯ ಬನದ ಬಳಿ
ಪ್ರೀತಿ ಮಾಡಿದರಲ್ಲೊ
ಇದ ಕಂಡು ಊರ ಜನ
ಬೆಚ್ಚಿಬಿದ್ದರಲ್ಲೊ...’’
ಎಂದು ಸುಮತಿ ಅವರ ಹಾಡನ್ನು ಜನ್ನಿ ಹಾಡಿದಾಗ ಪ್ರೇಕ್ಷಕರು ಮೆಚ್ಚಿದರು. ತನ್ನ ಮಗಳು ಕುರುಬರ ಹುಡುಗನನ್ನು ಪ್ರೀತಿಸಿದಳಲ್ಲ ಎಂದು ಮಲ್ಲೇಗೌಡ ಗಾಬರಿಯಾಗುತ್ತಾನೆ, ಆತಂಕಪಡುತ್ತಾನೆ, ಸಿಟ್ಟುಗೊಳ್ಳುತ್ತಾನೆ. ಕೊಚ್ಚಿ ಹಾಕುವೆನೆಂದು ರೋಷಗೊಳ್ಳುತ್ತಾನೆ. ಆಗ ಮಧ್ಯಸ್ಥಿಕೆ ವಹಿಸಬೇಕು, ಮಗಳಿಗೆ ಬುದ್ಧಿ ಹೇಳಿ ಎಂದು ಸ್ವಾಮೀಜಿಯನ್ನು ಕರೆಸುತ್ತಾನೆ. ಆಗ ಸ್ವಾಮೀಜಿ
‘‘ಎಲ್ಲ ಉಲ್ಲಂಘಿಸಿ ಪ್ರತಿಭಟಿಸಿ
ಕೆಂಡವಾಗಿ ನಿಂತ
ನಿನ್ನ ಹತ್ತಿರ
ಹಸಿರು ಗರುಕೆ ಕೂಡ
ಸುಳಿಯುವುದಿಲ್ಲ.
ಸಿಟ್ಟು ಮಾಡುವಾಗ ಎಚ್ಚರವಿರಲಿ’’
ಎಂದು ಸಮಾಧಾನ ಹೇಳುತ್ತಾರೆ. ತಾಳ್ಮೆ ಇರಲಿ, ಇಂಥ ವಿಚಾರದಲ್ಲಿ ಆತುರ ಒಳ್ಳೆಯದಲ್ಲ ಎನ್ನುತ್ತಾರೆ.
‘‘ಸಮುದ್ರದಲ್ಲಿ ಕೊಬ್ಬಿನಿಂದ ಮೆರೆವ
ಅಂಬಿಗನಿಗೆ
ಚಂಡಮಾರುತ ಕಲಿಸಿದ
ಮೊದಲ ಪಾಠ
ವಿನಯ’’
‘ನಿನ್ನ ಜೀವನದಲ್ಲಿ ಎದ್ದಿರುವ ಈ ಚಂಡಮಾರುತವನ್ನು ನೀನು ವಿನಯದಿಂದಲೇ ಎದುರಿಸಬೇಕಪ್ಪ’ ಎಂದು ಸ್ವಾಮೀಜಿ ತಿಳಿವಳಿಕೆ ಹೇಳುತ್ತಾರೆ. ಹಿನ್ನೆಲೆಯಲ್ಲಿ ಜನ್ನಿ ಅವರು ಬಸವಣ್ಣನವರ ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು’ ಎಂದು ಹಾಡುತ್ತಾರೆ. ಆದರೆ ಸ್ವಾಮೀಜಿಯು ಶ್ಯಾಮಲಾಳನ್ನು ಭೇಟಿಯಾಗಿ
‘‘ಯುದ್ಧ ಮತ್ತು ಮದುವೆಗೆ
ಯಾರನ್ನೂ ಪ್ರೋತ್ಸಾಹಿಸಬೇಡ
ಪಶ್ಚಾತ್ತಾಪ ಪಡುವೆ’’
ಎಂದು ಸ್ವಾಮೀಜಿ ಹೇಳಿದಾಗ
‘‘ಹಣ್ಣಿನೊಂದಿಗೆ ಬೀಜ ನುಂಗಿದ ಹಕ್ಕಿ
ಹಿಕ್ಕೆ ಹಾಕಿ ಹಾರಿ ಹೋಗಿ
ಬೀಜ ಗಿಡವಾದ ಬಗ್ಗೆ
ಹೆಮ್ಮೆ ಪಡದಿರುವಂತೆ
ನಮ್ಮ ಕ್ರಿಯೆ ಇರಬೇಕು’’
ಎನ್ನುತ್ತಾಳೆ ಶ್ಯಾಮಲಾ. ಆಗ ಸ್ವಾಮೀಜಿ
‘‘ನೀನು ಮೆಚ್ಚುವ ಪ್ರೇಮಿಯ
ಪುಟ್ಟ ಗುಡಿಸಲು ಅರಮನೆಯೆಂದು ಭ್ರಮಿಸಬೇಡ
ಎಲ್ಲ ಪ್ರೇಮದ ಹಿಂದೆಯೂ ಒಂದು ಸೆರೆಮನೆ ಇದೆ’’
ಎಂದು ಹೇಳುತ್ತಾರೆ. ಆಗ ಶ್ಯಾಮಲಾ
ನಾವು ಪ್ರೀತಿಸುವ ವ್ಯಕ್ತಿಯಲ್ಲಿ
ತಪ್ಪು ಕಂಡು ಹಿಡಿಯುವ ಕೆಲಸ
‘‘ಓಯಸಿಸ್ನಲ್ಲಿ
ಹಸಿರು ಮತ್ತು ನೀರನ್ನು
ತಿರಸ್ಕರಿಸಿದಂತೆ’’
ಎಂದಾಗ ಆಕೆಯ ಪ್ರೀತಿಯ ಅಂತಃಸತ್ವಕ್ಕೆ ಮಾರು ಹೋಗಿ ಸ್ವಾಮೀಜಿ ಬದಲಾಗುತ್ತಾರೆ. ಹೀಗೆ ಅಲ್ಲಲ್ಲಿ ಲಂಕೇಶ್ ಅವರು ಬರೆಯುತ್ತಿದ್ದ ನೀಲು ಪದ್ಯಗಳನ್ನು ನಾಟಕದುದ್ದಕ್ಕೂ ಬಳಸಿಕೊಳ್ಳಲಾಗಿದೆ.
‘‘ಕೆಲವನ್ನು ನೆನೆದು ನಕ್ಕು
ಕೆಲವನ್ನು ಕ್ಷಮಿಸಿ
ಕೆಲವು ಕ್ಷಣಗಳನ್ನು
ಉದಾರವಾಗಿ ಧ್ಯಾನಿಸಿ
ಕಸಿವಿಸಿಯಲ್ಲಿಯೇ ಬದುಕುವುದು
ಎಲ್ಲರ ದುರಂತ’’
ಎನ್ನುವ ನೀಲು ಪದ್ಯ ಗಮನ ಸೆಳೆಯುತ್ತದೆ. ಕೊನೆಗೆ ಇನ್ನೊಬ್ಬರ ಕತ್ತು ಕಡಿಯುತ್ತಿದ್ದ ಮಲ್ಲೇಗೌಡ ತನ್ನ ಮಗಳ ಪ್ರೀತಿಯ ವಿಷಯದಲ್ಲಿ ಬದಲಾಗುತ್ತಾನೆಯೇ? ಬದಲಾದರೆ ಹೇಗೆ ಎನ್ನುವುದೇ ನಾಟಕದ ತಿರುಳು. ಕೊನೆಗೆ ‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ’ ಎನ್ನುವ ಬಸವಣ್ಣನವರ ವಚನದೊಂದಿಗೆ ನಾಟಕ ಕೊನೆಗೊಳ್ಳುತ್ತದೆ.
ನಾಟಕದ ಕೆಲ ಕಲಾವಿದರು ಹೊಸಬರಾಗಿದ್ದರಿಂದ ಸಮರ್ಥ ಅಭಿನಯದ ಕೊರತೆ ಕಾಡುತ್ತಿತ್ತು. ಆದರೆ ಶ್ಯಾಮಲಾ ಪಾತ್ರಧಾರಿ ಮಾನಸಿ ಮಿಂಚುತ್ತಾರೆ. ಹಾಗೆಯೇ ಅಜ್ಜಿ ಪಾತ್ರದಲ್ಲಿ ಸಲ್ಮಾನ್ತಾಜ್ ಹಾಗೂ ಮಲ್ಲೇಗೌಡನ ಪಾತ್ರದಲ್ಲಿ ಪ್ರಜ್ವಲ್ ಗಮನಸೆಳೆಯುತ್ತಾರೆ.
ಮುಖ್ಯವಾಗಿ ಜನ್ನಿಯ ಹಾಡಿನ ಮೋಡಿಗೆ ತಕ್ಕಂತೆ ಕಲಾವಿದರು ಕಲಾತ್ಮಕವಾಗಿ ಅಭಿನಯಿಸಿದರೆ ನಾಟಕ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.







