ಹೈದರಾಬಾದ್ನಲ್ಲಿ ‘ನಾಯಿ ಕಳೆದಿದೆ’!

ಕನ್ನಡ ನಾಟ್ಯ ರಂಗ, ಹೈದರಾಬಾದ್ ಆಶ್ರಯದಲ್ಲಿ ನಾಯಿ ಕಳೆದಿದೆ ನಾಟಕ (ರಚನೆ, ನಿರ್ದೇಶನ: ರಾಜೇಂದ್ರ ಕಾರಂತ) ತಾ 30-11-2025 ರಂದು ಇಲ್ಲಿನ ಸುಂದರಯ್ಯ ಕಲಾ ನಿಲಯದಲ್ಲಿ ಪ್ರದರ್ಶಿಸಲ್ಪಟ್ಟಿತು. ಬೈಂದೂರಿನ ಲಾವಣ್ಯ ತಂಡದವರ ಈ ಅದ್ಭುತ ಪ್ರಯೋಗ ಹಲವುಕಾಲ ಇಲ್ಲಿಯ ಕನ್ನಡಿಗರ ಮನಗಳಲ್ಲಿ ಸ್ಥಾಯಿಯಾಗಿ ಉಳಿಯುವಂತಹದ್ದು.
ಮಕ್ಕಳು ವಿದೇಶವಾಸದ ಬಿಸಿಲುಗುದುರೆಯನ್ನೇರಿ ಹೋದಾಗ ಇಳಿ ವಯಸ್ಸಿನ ತಂದೆತಾಯಿಗಳು ಅನುಭವಿಸುವ ಒಂಟಿತನ, ಪಡುವ ಕಳವಳ, ನಿರಾಸೆ-ಇಂದಿನ ಜ್ವಲಂತ ಸಮಸ್ಯೆಯ ಸುತ್ತ ಹೆಣೆದ ಕತೆ. ಸಾಕು ನಾಯಿಯನ್ನು ಅವರ ಸುಪರ್ದಿಗೆ ಬಿಟ್ಟು ಹೋಗುವ ಮಕ್ಕಳಿಗೆ ಹೆತ್ತವರ ಮೇಲಿನ ಕಾಳಜಿಗಿಂತ ನಾಯಿಯ ಆರೈಕೆಯೇ ಮುಖ್ಯವಾಗುತ್ತದೆ. ಪ್ರತೀ ಫೋನ್ನಲ್ಲೂ ಅವರಿಗೆ ತಮ್ಮ ತಂದೆ ಕೆಮ್ಮುವುದು ಕೇಳದು. ಬದಲಿಗೆ ನಾಯಿಯ ಬಗ್ಗೆ ಕಳಕಳಿಯ ಪ್ರಶ್ನೆಗಳು. ಜೊತೆಗೆ ನಾಯಿಸಾಕಣೆಯಿಂದಾಗಿ ಬರುವ ಮುನಿಸಿಪಾಲಿಟಿಯವರ ಉಪಟಳ ಬೇರೆ. ಯಾವಾಗಲೂ ಈ ದಂಪತಿಯ ಕಷ್ಟ ಸುಖಕ್ಕೆ ಒದಗುವ ಹೊರಗಿನವನಾದ ಅಶೋಕ (ಮೂರ್ತಿ, ಬೈಂದೂರು) ನಾಯಿಯನ್ನು ದೂರ ಕೊಂಡೊಯ್ಯುತ್ತಾನೆ. ನಾಯಿ ಕಾಣೆಯಾದ ಸುದ್ದಿ ಸಿಕ್ಕಿದೊಡನೇ ಅಮೆರಿಕದಿಂದ ಧಾವಿಸಿ ಬಂದ ಮಗ ಸೊಸೆ ಅಶೋಕನನ್ನು ವಿಚಾರಣೆಗೆ ಒಳಪಡಿಸಿ ನಾಯಿಯನ್ನು ಮಾರಿದುದಲ್ಲದೆ ತಮ್ಮ ತಂದೆತಾಯಿಯನ್ನು ನಂಬಿಸಿ ಆಸ್ತಿ-ಮನೆಯನ್ನು ಲಪಟಾಯಿಸುವ ಹುನ್ನಾರವೂ ಅವನಿಗೆ ಇದೆಯೆಂದು ಆಪಾದಿಸುತ್ತಾರೆ.
ಅನಿರೀಕ್ಷಿತ ತಿರುವಿನೊಂದಿಗೆ ಕೊನೆಗೊಳ್ಳುವ ಈ ನಾಟಕದ ಆರಂಭದಲ್ಲೇ ಜಿ.ಎಸ್.ಎಸ್.ರ ಭಾವಗೀತೆ- ‘‘ಎಲ್ಲೋ ಹುಡುಕಿದೆ ಇಲ್ಲದ ದೇವರ...’’ - ನಾಟಕದ ಆಶಯದ ಸುಳಿವನ್ನು ನೀಡುತ್ತದೆ. ‘‘ಅಮ್ಮಾ ನಿನ್ನ ಎದೆಯಾಳದಲ್ಲಿ’’ ಮತ್ತಿತರ ಜನಜನಿತ ಗೀತೆಗಳು ಸನ್ನಿವೇಶಗಳಿಗೆ ಭಾವ ಪುಷ್ಟಿಯನ್ನು ಒದಗಿಸುತ್ತವೆ. ರಂಗದ ಮೇಲೆ ಒಮ್ಮೆಯೂ ಕಾಣಿಸದ ನಾಯಿಯ ಪಾತ್ರ - ಕಳೆದುಹೋದವೆಂದುಕೊಂಡ ಮಾನವ ಸಂಬಂಧಗಳಿಗೆ, ನಾವು ನಿರೀಕ್ಷಿಸಿದ ಕಡೆಯಲ್ಲಲ್ಲದೆ ಮತ್ತೆಲ್ಲೋ ಸಿಗುವ ಪ್ರೀತಿ ವಿಶ್ವಾಸಗಳಿಗೆ ಸಂಕೇತವಾಗಿ ನೋಡುಗರ ಹೃದಯವನ್ನು ತಟ್ಟುತ್ತದೆ. ಉದಯ ಆಚಾರ್ಯರ ಬೆಳಕು ಸಂಯೋಜನೆಯಲ್ಲಿ (ಉದಾ-ದುಃಸ್ವಪ್ನದ ದೃಶ್ಯ)ಈ ವಾಸ್ತವ ಕತೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿತು. ಒಂದೂವರೆ ಗಂಟೆ ಯಾವೊಬ್ಬ ಪ್ರೇಕ್ಷಕರೂ ಮೊಬೈಲ್ ಕಡೆ ನೋಡದೇ ಇದ್ದುದು, ತುಂಬಿದ ಸಭೆಯಲ್ಲಿ ಒಬ್ಬರೂ ಏಳದೆ ಕುಳಿತೆಡೆಯಲ್ಲೇ ಮಂತ್ರಮುಗ್ಧರಾಗಿದ್ದುದು ಈ ಮನೆಮನೆಯ ಕತೆ ಸಾಧಿಸಿದ ವಿಕ್ರಮವೆಂದೇ ಹೇಳಬೇಕು. ಪ್ರತೀ ಪಾತ್ರದಲ್ಲೂ ಜೀವ ತುಂಬಿದ ಪಾತ್ರವರ್ಗದಲ್ಲಿ ತಂದೆ ತಾಯಿಯ ಪಾತ್ರದಲ್ಲಿ ಸುಬ್ರಹ್ಮಣ್ಯ ಜಿ.ಉಪ್ಪುಂದ ಮತ್ತು ನಿಧಿ ನಾಯಕ್, ಕಂಬದ ಕೋಣೆ ಉಲ್ಲೇಖನೀಯರು- ಕೊನೆಯ ದೃಶ್ಯದಲ್ಲಿ ಅವರ ಅಭಿನಯದಿಂದಾಗಿ ಹನಿಗಣ್ಣಾಗದ ಸಭಿಕರೇ ಇರಲಿಲ್ಲವೆನ್ನಬೇಕು. ಸಾಕು ಮಗನಾಗಿ ಅಶೋಕ್ ನಾಯಿಯಂತೆ ಶಬ್ದ ಹೊರಡಿಸಿದ್ದು, ಬಿಗ್ಬಾಸ್ ವಿಜೇತೆ ಮುನಿವೆಂಕಟಮ್ಮನ(ಜ್ಯೋತ್ಸ್ನಾ) ತೆಲುಗು ಮಿಶ್ರಿತ ಕನ್ನಡ ಲಘು ಹಾಸ್ಯಗಳು- ಸಭಿಕರ ಮನರಂಜಿಸಿದವು. ಕೇಮಿಯೋಗಳಲ್ಲಿ ಪಿಎ ಪಾತ್ರದ ಪಾಂಡು, ಸಾಬಿಯಾಗಿ ಗಣೇಶ್ ಪರಮಾನಂದ, ಪತ್ರಕರ್ತನಾಗಿ ರಾಜೇಶ್ ನಾಯಕ್ ಮನ ಸೆಳೆದರು. ಹಾಗೆಯೇ ಬಾಯಿ ಬಿಟ್ಟು ಹೇಳಲಾಗದ ಸಂದೇಶಗಳನ್ನೂ ಮುಟ್ಟಿಸುವುದರಲ್ಲಿ ಯಶಸ್ವಿಯಾದರು. ಪಾತ್ರವರ್ಗದ ಎಲ್ಲರೂ ತಮ್ಮ ಸಹಜ ನಟನೆಯಿಂದ ತಮ್ಮದೇ ಕತೆಯನ್ನು ರಂಗದ ಮೇಲೆ ನೋಡುವ ತಾದಾತ್ಮ್ಯಭಾವವನ್ನು ಪ್ರೇಕ್ಷಕರಲ್ಲಿ ಮೂಡಿಸಿದರು. ಹಿತಮಿತವಾದ ವೇಷಭೂಷಣ ಮತ್ತು ಪ್ರಸಾದನ-ತ್ರಿವಿಕ್ರಮ್ ರಾವ್ ಉಪ್ಪುಂದ ಅವರಿಂದ.
ಮಾನವ ಸ್ವಭಾವವನ್ನು ಸಣ್ಣ ಸಣ್ಣ ಸಹಜ ವಿವರಗಳಲ್ಲಿ ಚಿತ್ರಿಸಿದ ನಾಟಕಕಾರ, ನಿರ್ದೇಶಕ, ರಾಜೇಂದ್ರ ಕಾರಂತರು ಅಭಿನಂದನೀಯರು.
ಎಲ್ಲೂ ಅತಿ ನಾಟಕೀಯತೆ ಇರದೆ ಸರಳ ಸುಂದರವಾಗಿ ಮೂಡಿ ಬಂದ ಅಪರೂಪದ ಪ್ರದರ್ಶನ.







