ದೇಶದ ಮುಖಕ್ಕೆ ಕನ್ನಡಿ ಹಿಡಿಯುವ ಜಾತಿಗಣತಿ

ಸಾಂದರ್ಭಿಕ ಚಿತ್ರ PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರ ಸರಕಾರದ ಭದ್ರತಾ ವೈಫಲ್ಯ ಚರ್ಚೆಯಲ್ಲಿರುವಾಗಲೇ, ಜನಗಣತಿಯ ಜೊತೆಯಲ್ಲೇ ಜಾತಿಗಣತಿಯನ್ನು ನಡೆಸುವ ಮಹತ್ವದ ತೀರ್ಮಾನ ಕೇಂದ್ರದಿಂದ ಹೊರ ಬಿದ್ದಿದೆ. ಮುಂದಿನ ರಾಷ್ಟ್ರೀಯ ಜನಗಣತಿಯ ಜೊತೆಯಲ್ಲೇ ಜಾತಿಗಣತಿಯನ್ನು ಕೂಡ ನಡೆಸಲಾಗುವುದು ಎಂದು ಬುಧವಾರ ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯು ನಿರ್ಧರಿಸಿದ್ದು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ‘‘ಮುಂಬರುವ ಜನಗಣತಿಯಲ್ಲಿ ಜಾತಿ ಗಣತಿಯನ್ನು ಕೂಡ ಸೇರ್ಪಡೆಗೊಳಿಸಲು ಪ್ರಧಾನಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ನಮ್ಮ ಸರಕಾರವು ನಮ್ಮ ದೇಶದ ಮೌಲ್ಯಗಳು ಹಾಗೂ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿರುವುದನ್ನು ಇದು ತೋರಿಸುತ್ತದೆ’’ ಎಂದಿದ್ದಾರೆ. ‘‘ಈ ಹಿಂದೆಯೂ ನಮ್ಮ ಸರಕಾರವು ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ. 10 ಮೀಸಲಾತಿಯನ್ನು ಜಾರಿಗೊಳಿಸಿತ್ತು’’ ಎನ್ನುವುದನ್ನೂ ಈ ಸಂದರ್ಭದಲ್ಲಿ ಸಚಿವರು ನೆನಪಿಸಿದ್ದಾರೆ. ಬಿಹಾರದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಸರಕಾರ ಈ ಅನಿರೀಕ್ಷಿತ ಘೋಷಣೆಯನ್ನು ಮಾಡಿದೆ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ದೇಶದಲ್ಲೇ ಕರ್ನಾಟಕ ಜಾತಿಗಣತಿಯನ್ನು ಘೋಷಿಸಿದ ಮೊದಲ ರಾಜ್ಯವಾಗಿದ್ದರೂ, ಬಿಹಾರ ಜಾತಿಗಣತಿ ವರದಿಯನ್ನು ತನ್ನ ಸಂಪುಟದ ಮುಂದೆ ಚರ್ಚೆಗಿಟ್ಟ ಮೊದಲ ರಾಜ್ಯವಾಗಿದೆ. ಮೋದಿ ಮಿತ್ರರಾಗಿರುವ ನಿತೀಶ್ ಕುಮಾರ್ ಅವರು ಜಾತಿಗಣತಿಯ ಪರವಾಗಿರುವುದರಿಂದ, ಬಹುತೇಕ ರಾಜ್ಯಗಳು ಜಾತಿಗಣತಿಯ ಬಗ್ಗೆ ಆಸಕ್ತಿ ತೋರಿಸುತ್ತಿರುವುದರಿಂದ, ಜಾತಿಗಣತಿಯನ್ನು ಬೆಂಬಲಿಸುವುದು ಕೇಂದ್ರಕ್ಕೆ ಅನಿವಾರ್ಯವಾಗಿದೆ.
ಮೀಸಲಾತಿಯನ್ನು ವೈಜ್ಞಾನಿಕವಾಗಿ, ಪರಿಣಾಮಕಾರಿಯಾಗಿ ಹಂಚಬೇಕಾದರೆ ಸ್ಪಷ್ಟವಾದ ಜಾತಿ ಡೇಟಾಗಳ ಅಗತ್ಯವಿದೆ ಎಂದು ಸ್ವತಃ ಸುಪ್ರೀಂಕೋರ್ಟ್ ಹೇಳಿತ್ತು. ಇಂದಿಗೂ ಜಾತಿಯ ಅಂಕಿಅಂಶಗಳಿಗಾಗಿ ಬ್ರಿಟಿಷ್ ಕಾಲದ ಡೇಟಾಗಳನ್ನೇ ಸರಕಾರ ಅವಲಂಬಿಸಬೇಕಾಗಿದೆ. ಈ ದೇಶದ ಜಾತಿಗಳ ಸ್ಪಷ್ಟ ವಿವರಗಳನ್ನು ಕಲೆ ಹಾಕದೆ ತಳಸ್ತರದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿಯೇ ದೇಶದಲ್ಲಿ ಜಾತಿಗಣತಿಯ ಬೇಡಿಕೆ ಕೇಳಿ ಬರುತಿದೆ. ಬಿಹಾರ, ಕರ್ನಾಟಕ ಜಾತಿಗಣತಿಗೆ ಮುಂದಾದಾಗ, ಇದೇ ಪ್ರಧಾನಿ ಮೋದಿಯವರು ‘ಜಾತಿ ಗಣತಿಯ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನವನ್ನು ಕೆಲವರು ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ ಜಾತಿ ಗಣತಿ ಬೆಂಬಲಿಗರನ್ನು ‘ಅರ್ಬನ್ ನಕ್ಸಲ್’ ಎಂದು ಟೀಕಿಸಿದ್ದರು. ಮೀಸಲಾತಿಯ ಬಗ್ಗೆಯೇ ಆಕ್ಷೇಪಗಳನ್ನು ಹೊಂದಿರುವವರು, ಜಾತಿಗಣತಿ ನಡೆಸಿ, ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಹಂಚುತ್ತಾರೆ ಎಂದು ನಿರೀಕ್ಷಿಸುವುದು ಕನಸಿನ ಮಾತಾಗಿದೆ. ಆಳದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ನೇತೃತ್ವದ ಸರಕಾರ ಮೀಸಲಾತಿಯ ಬಗ್ಗೆಯೇ ಅಸಹನೆಯನ್ನು ಹೊಂದಿದೆ. ಶೋಷಿತ ಜಾತಿಯ ಮೀಸಲಾತಿಯನ್ನು ದುರ್ಬಲಗೊಳಿಸುವ ಭಾಗವಾಗಿ, ಯಾವ ಸಮೀಕ್ಷೆಯನ್ನೂ ನಡೆಸದೆ ಕೇಂದ್ರ ಸರಕಾರ ಮೇಲ್ಜಾತಿಯ ಬಡವರಿಗಾಗಿ ಶೇ. 10 ಮೀಸಲಾತಿಯನ್ನು ಘೋಷಿಸಿತು. ಉತ್ತರ ಭಾರತದಲ್ಲಿ ಕೆಲವು ರಾಜ್ಯಗಳು ಜಾತಿಗಣತಿಯ ಬಗ್ಗೆ ವಿಶೇಷ ಆಸಕ್ತಿ ತೋರಿಸುತ್ತಿದ್ದಂತೆಯೇ, ಜಾತಿಗಣತಿಯ ಬಗ್ಗೆ ತನ್ನ ನಿಲುವನ್ನು ಮೃದುಗೊಳಿಸುವುದು ಆರೆಸ್ಸೆಸ್ಗೂ ಬಿಜೆಪಿಗೂ ಅನಿವಾರ್ಯವಾಯಿತು. ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆಗಿನ ಮೈತ್ರಿ ಅನಿವಾರ್ಯವಾದ ಕಾರಣ, ಜಾತಿಗಣತಿಯ ಬಗ್ಗೆ ಧನಾತ್ಮಕವಾಗಿ ಮಾತನಾಡುವುದಕ್ಕೆ ಶುರು ಹಚ್ಚಿತು. ಈಗಾಗಲೇ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಜಾತಿಗಣತಿ ನಡೆಸುವ ಬಗ್ಗೆ ತನ್ನ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿರುವುದರಿಂದ, ಬಿಹಾರ ಚುನಾವಣೆಯ ದೃಷ್ಟಿಯಿಂದ ಬಿಜೆಪಿಗೆ ಜನಗಣತಿಯ ಜೊತೆಗೆ ಜಾತಿ ಗಣತಿ ನಡೆಸುವ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಯಿತು. ಜಾತಿ ಗಣತಿಯ ಮೂಲಕ ದೇಶ ವಿಭಜನೆಯಾಗುತ್ತದೆಯೆಂದು ಈವರೆಗೆ ಕಿಡಿಕಾರುತ್ತಿದ್ದ ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಿ ಜಾತಿಗಣತಿಯನ್ನು ಒಲ್ಲದ ಮನಸ್ಸಿನಿಂದ ಸಮರ್ಥಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಕೇಂದ್ರ ಸರಕಾರ ಜಾತಿಗಣತಿ ನಡೆಸುವುದಾಗಿ ಹೇಳಿಕೆ ನೀಡಿದ ದಿನದಿಂದ, ರಾಜ್ಯದ ಬಿಜೆಪಿ ನಾಯಕರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ರಾಜ್ಯದಲ್ಲಿ ಜಾತಿಗಣತಿ ಸಂಪೂರ್ಣವಾಗಿದ್ದರೂ, ಅದು ಬಿಡುಗಡೆಯಾಗದೆ ಇರುವುದಕ್ಕೆ ವಿರೋಧಪಕ್ಷವೇ ದೊಡ್ಡ ತಡೆಯಾಗಿದೆ. ಜಾತಿಗಣತಿ ವರದಿಯನ್ನು ಯಾಕೆ ಬಿಡುಗಡೆ ಮಾಡಬಾರದು ಎನ್ನುವುದಕ್ಕೆ ಬೇಕಾದ ಸ್ಪಷ್ಟ ಕಾರಣವೂ ಬಿಜೆಪಿ ನಾಯಕರ ಬಳಿಯಿಲ್ಲ. ಜಾತಿ ಗಣತಿಯಿಂದ ಹಿಂದೂ ಸಮಾಜವನ್ನು ಛಿದ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವುದು ಒಬ್ಬರ ಅಭಿಪ್ರಾಯವಾದರೆ, ಜಾತಿಗಣತಿಯು ಸರಿಯಾಗಿ ನಡೆದಿಲ್ಲ ಎನ್ನುವುದು ಇನ್ನೊಬ್ಬರ ವಾದವಾಗಿದೆ. ಜಾತಿಗಣತಿಯ ಮೂಲಕ ಲಿಂಗಾಯತ, ಒಕ್ಕಲಿಗ ಸಮಾಜವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎನ್ನುವುದು ಮತ್ತೊಬ್ಬರ ಆರೋಪ. ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರಂತೂ, ಜಾತಿ ಗಣತಿಯ ಮೂಲಕ ಜಾತಿ ಸಂಘರ್ಷಗಳು ಹೆಚ್ಚಾಗಿ, ಸಮಾಜ ಒಡೆಯುತ್ತದೆ ಎನ್ನುವ ಅವಿವೇಕತನದ ಹೇಳಿಕೆಯನ್ನು ನೀಡಿ, ತನ್ನ ಬೌದ್ಧಿಕ ಮಟ್ಟವನ್ನು ಪ್ರದರ್ಶಿಸಿದ್ದರು. ಇದೀಗ ಮೋದಿಯೇ ಜಾತಿಗಣತಿಯ ಬಗ್ಗೆ ಆಸಕ್ತಿ ತೋರಿಸಿರುವುದು, ಇವರನ್ನೆಲ್ಲ ಇಕ್ಕಟ್ಟಿಗೆ ಸಿಲುಕಿಸಿದೆ. ಜಾತಿಗಣತಿ ವರದಿಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಣಿಯಲು ಯತ್ನಿಸುತ್ತಿದ್ದ ವಿರೋಧ ಪಕ್ಷಕ್ಕೆ ಪ್ರಧಾನಿ ಮೋದಿಯಿಂದಲೇ ಭಾರೀ ಹಿನ್ನಡೆಯಾಗಿದೆ.
ಬರೇ ಜಾತಿಯ ಗಣತಿಯಿಂದ ಈ ದೇಶದ ತಳಸ್ತರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ಅರಿಯಲು ಸಾಧ್ಯವಿಲ್ಲ. ಯಾವ ಜಾತಿಯ ಜನರ ಸಂಖ್ಯೆ ಎಷ್ಟಿದೆ ಎನ್ನುವುದು ಮಾತ್ರವಲ್ಲ, ಅದರ ಜೊತೆ ಜೊತೆಗೇ ಅವರ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಆರ್ಥಿಕ ಸ್ಥಿತಿ ಇವೆಲ್ಲದರ ವಿವರಗಳನ್ನು ಕಲೆ ಹಾಕಬೇಕು. ಇದು ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ಮೂಲಕ ಮಾತ್ರ ಸಾಧ್ಯ. ಬಿಹಾರದ ಸಮೀಕ್ಷೆಯನ್ನೇ ತೆಗೆದುಕೊಳ್ಳೋಣ. ಇದರ ಪ್ರಕಾರ, ಬಿಹಾರದಲ್ಲಿ ಶೇ. 2.8ರಷ್ಟಿರುವ ಬ್ರಾಹ್ಮಣ ಭೂಮಿಹಾರ ಜನರು ಶೇ. 39ರಷ್ಟು ಭೂಮಿಯನ್ನು ಹೊಂದಿದ್ದರೆ, ಶೇ. 16ರಷ್ಟಿರುವ ಯಾದವರು ಶೇ. 7ರಷ್ಟು ಭೂಮಿಯನ್ನು ಹೊಂದಿದ್ದಾರೆ. ಶೇ. 5.2ರಷ್ಟಿರುವ ಪಾಸ್ವಾನರು ಶೇ. 1ರಷ್ಟು ಭೂಮಿಯನ್ನು ಹೊಂದಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಅಗಾಧವಾಗಿರುವ ಅಸಮಾನತೆಯನ್ನು ಸಮೀಕ್ಷೆಯು ಬಹಿರಂಗಪಡಿಸಿದೆ. ಈ ವಾಸ್ತವ ಬಹಿರಂಗವಾಗಬಾರದು ಎನ್ನುವ ಒಂದೇ ಕಾರಣಕ್ಕೆ ಸಣ್ಣ ಸಂಖ್ಯೆಯಲ್ಲಿರುವ ಮೇಲ್ಜಾತಿಗಳು ಜಾತಿಗಳಿಗೆ ಸಂಬಂಧಿಸಿ ಸಮೀಕ್ಷೆ ನಡೆಯದಂತೆ ತಡೆಯೊಡ್ಡುತ್ತಿದೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಯಾವ ಯಾವ ಜಾತಿಗಳು ಎಷ್ಟೆಷ್ಟು ಪಾಲನ್ನು ತನ್ನದಾಗಿಸಿಕೊಂಡಿವೆ ಎನ್ನುವುದು ಬಯಲಾದಾಗ ಮಾತ್ರ, ಭಾರತದ ನಿಜಸ್ವರೂಪ ನಮಗೆ ದಕ್ಕಬಹುದಾಗಿದೆ. ಈ ಹಿನ್ನೆಲೆಯಲ್ಲಿ, ದೇಶಾದ್ಯಂತ ಈ ಸಮೀಕ್ಷೆ ನಡೆಸಲು ಕೇಂದ್ರದ ಮೇಲೆ ಒತ್ತಡಗಳನ್ನು ಹೇರಬೇಕಾಗಿದೆ.