ಮತ್ತೆ ಕಾವೇರಿದ ನೀರಿನ ರಾಜಕೀಯ

ಕಾವೇರಿ ಮತ್ತೆ ಕಾವೇರಿದೆ. ಅಂತರ್ರಾಜ್ಯ ನೀರಿನ ರಾಜಕೀಯಕ್ಕೆ ಮತ್ತೆ ಬೆಂಕಿ ಬಿದ್ದಿದೆ. ತಮಿಳು ನಾಡಿಗೆ ಮುಂದಿನ ಎರಡು ವಾರಗಳ ಕಾಲ ನಿತ್ಯ 3,500 ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿಯು ನೀಡಿರುವ ಸೂಚನೆಯ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಬೆನ್ನಿಗೇ, ಈ ಸೂಚನೆಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಎತ್ತಿ ಹಿಡಿದಿದೆ. ಇನ್ನೂ ಹದಿನೈದು ದಿನಗಳಲ್ಲಿ ಒಟ್ಟು 4.5 ಟಿಎಂಸಿ ನೀರನ್ನು ತಮಿಳು ನಾಡಿಗೆ ಹರಿಸಲೇಬೇಕು ಎಂದು ಪ್ರಾಧಿಕಾರ ಸೂಚನೆಯನ್ನು ನೀಡಿದೆ. ಸಮಿತಿಯ ಆದೇಶದ ವಿರುದ್ಧ ಮೇಲ್ಮನವಿಗೆ ರಾಜ್ಯ ಸರಕಾರ ತೀರ್ಮಾನಿಸಿದ ಬೆನ್ನಿಗೇ ಈ ತೀರ್ಪು ಹೊರಬಿದ್ದಿರುವುದು ಆಘಾತಕಾರಿಯಾಗಿದೆ. ಯಾವ ಕಾರಣಕ್ಕೂ ನೀರು ಬಿಡಬಾರದು ಎಂದು ವಿರೋಧ ಪಕ್ಷದಮುಖಂಡರು ಆಗ್ರಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ‘ಜಲಾನಯನ ಪ್ರದೇಶದ ಪರಿಸ್ಥಿತಿಯನ್ನು ತಮಿಳು ನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಮನವರಿಕೆ ಮಾಡಲಾಗುವುದು. ಆ ಬಳಿಕ ಅವರ ತೀರ್ಮಾನ ಏನು ಎನ್ನುವುದನ್ನು ಗಮನಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ ಈ ಮನವರಿಕೆ ತಮಿಳುನಾಡಿಗೆ ಅರ್ಥವಾಗುತ್ತದೆ ಎನ್ನಲಾಗುವುದಿಲ್ಲ. ಯಾಕೆಂದರೆ, ತಮಿಳುನಾಡಿನ ರೈತರೂ ಕಾವೇರಿ ನೀರಿಗಾಗಿ ಅಲ್ಲಿನ ಮುಖ್ಯಮಂತ್ರಿಯ ಮೇಲೆ ತೀವ್ರ ಒತ್ತಡವನ್ನು ಹಾಕುತ್ತಿದ್ದಾರೆ. ಈ ಹಿಂದೆ ಕಾವೇರಿ ನೀರನ್ನು ಹರಿಸಬೇಕು ಎಂಬ ತಮಿಳು ನಾಡಿನ ಮನವಿಯನ್ನು ಇದೇ ಸಮಿತಿ ಎರಡು ಬಾರಿ ತಿರಸ್ಕರಿಸಿತ್ತು. ಆ ಸಂದರ್ಭದಲ್ಲಿ ಅಲ್ಲಿನ ರಾಜಕೀಯ ನಾಯಕರೂ ಸ್ಥಳೀಯರಿಂದ ಸಾಕಷ್ಟು ಆಕ್ರೋಶಗಳನ್ನು ಎದುರಿಸಿದ್ದರು. ಇದೀಗ ಪ್ರಾಧಿಕಾರವೂ ನೀರು ಹಂಚುವಿಕೆಯನ್ನು ಎತ್ತಿ ಹಿಡಿದಿರುವುದರಿಂದ ಕರ್ನಾಟಕದ ರೈತರ ಸಂಕಟವನ್ನು ತಮಿಳು ನಾಡು ಮುಖ್ಯಮಂತ್ರಿ ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ. ಈ ಕಾವೇರಿದ ಸಂದರ್ಭವನ್ನು ವಿರೋಧ ಪಕ್ಷದ ನಾಯಕರೂ ತಮಗೆ ಪೂರಕವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ.
ಈ ಬಾರಿ ಮಳೆ ಭಾರೀ ಇಳಿಕೆ ಕಂಡಿದ್ದು ರಾಜ್ಯಾದ್ಯಂತ ಬರಪರಿಸ್ಥಿತಿ ನಿರ್ಮಾಣವಾಗಿದೆ. ‘ಸರಿಯಾಗಿ ಮಳೆಯಿಲ್ಲ ಎಂದಾದರೆ ಬೆಳೆ ಬೆಳೆಯಬೇಡಿ. ಬೆಳೆದು ಬಳಿಕ ಪರಿಹಾರ ಕೇಳಬೇಡಿ’ ಎನ್ನುವ ಹೇಳಿಕೆ ನೀಡುವ ಮಟ್ಟಕ್ಕೆ ರಾಜ್ಯ ಸರಕಾರ ಬಂದು ನಿಂತಿದೆ. ಕರ್ನಾಟಕವು ದೇಶದಲ್ಲೇ ಎರಡನೇ ಅತಿ ಹೆಚ್ಚು ಬರಪೀಡಿತ ಪ್ರದೇಶಗಳನ್ನು ಹೊಂದಿರುವ ರಾಜ್ಯವಾಗಿದೆ. ಈ ಬಾರಿ ಹವಾಮಾನ ವೈಪರೀತ್ಯ, ಅನಿಯಮಿತ ಮುಂಗಾರು, ಅಂತರ್ಜಲ ಮಟ್ಟ ಕುಸಿತದಿಂದ ರಾಜ್ಯದ ರೈತರ ಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಕಾವೇರಿ ಜಲಾನಯದ ಪ್ರದೇಶದಲ್ಲಿ ನಿರೀಕ್ಷಿತ ಮಳೆಯಾಗಿಲ್ಲ ಮಾತ್ರವಲ್ಲ, ಮಳೆಯಾಗುವ ಸಾಧ್ಯತೆಗಳೂ ಕಡಿಮೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಲಿದೆ. ಒಂದೆಡೆ ಕುಡಿಯುವ ನೀರಿಗೆ ತತ್ವಾರ, ಇನ್ನೊಂದೆಡೆ ರಾಜ್ಯದ ರೈತರಿಗೆ ಬೇಕಾದ ಅಗತ್ಯ ನೀರಿನ ಕೊರತೆ. ಇವುಗಳ ನಡುವೆ ತಮಿಳು ನಾಡಿಗೆ 15 ದಿನಗಳ ಕಾಲ ಪ್ರತೀ ದಿನ 3,500 ಕ್ಯೂಸೆಕ್ ನೀರು ಬಿಡಬೇಕು ಎಂದು ಒತ್ತಾಯಿಸಿದರೆ ಅದನ್ನು ಈಡೇರಿಸುವುದು ಅಸಾಧ್ಯ. ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಈಗಾಗಲೇ ಶೇ. 40ರಷ್ಟು ಕುಡಿಯುವ ನೀರಿನ ಸಂಗ್ರಹವಿದ್ದು, ಅಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ. ಇವೆಲ್ಲವನ್ನು ಪರಿಗಣಿಸಿ ಪ್ರಾಧಿಕಾರ ತನ್ನ ಆದೇಶವನ್ನು ನೀಡುವುದು ಅತ್ಯಗತ್ಯವಾಗಿತ್ತು. ಪ್ರಾಧಿಕಾ ತಮಿಳುನಾಡಿನ ಬಗ್ಗೆ ಮೃದು ನೀತಿಯನ್ನು ಹೊಂದಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ರಾಜ್ಯ ಸರಕಾರದ ಮೇಲೆ ಎರಡು ಪ್ರಮುಖ ಆರೋಪಗಳಿವೆ. ಮುಖ್ಯವಾಗಿ, ಜಲಾಶಯಗಳಿಂದ ಕದ್ದು ಮುಚ್ಚಿ ನೆರೆರಾಜ್ಯಕ್ಕೆ ನೀರು ಬಿಡಲಾಗುತ್ತಿದೆ ಎಂದು ಕೆಲವು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಪರವಾಗಿ ಸಮರ್ಥ ವಾದವನ್ನು ಮಂಡಿಸಲು ರಾಜ್ಯ ಸರಕಾರ ವಿಫಲವಾಗಿದೆ ಎಂದೂ ವಿರೋಧ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಹಾಗೆಯೇ ತಮಿಳು ನಾಡಿನ ಮುಖ್ಯಮಂತ್ರಿಗೆ ಆಹ್ವಾನ ನೀಡಿರುವ ರಾಜ್ಯ ಸರಕಾರದ ಕ್ರಮವನ್ನೂ ವಿರೋಧ ಪಕ್ಷದ ನಾಯಕರು ಖಂಡಿಸಿದ್ದಾರೆ. ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳು ನಾಡು ಮುಖ್ಯಮಂತ್ರಿಯನ್ನು ರಾಜ್ಯಕ್ಕೆ ಆಹ್ವಾನಿಸುವ ಅಗತ್ಯವಾದರೂ ಏನು ಎಂದು ಅವರು ಕೇಳುತ್ತಿದ್ದಾರೆ. ತಮಿಳುನಾಡಿಗೆ ಗುಟ್ಟಾಗಿ ಸರಕಾರ ನೀರು ಬಿಡುತ್ತಿರುವುದು ನಿಜವೇ ಆಗಿದ್ದರೆ, ಪ್ರಾಧಿಕಾರ ಪ್ರತ್ಯೇಕ ಆದೇಶವನ್ನು ನೀಡುವ ಅವಶ್ಯಕತೆ ಬೀಳುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ, ಈ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನೀರು ಬಿಡುವುದು ಯಾಕೆ ಅನಿವಾರ್ಯವಾಗಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ಆತ್ಮಾವಲೋಕನಕ್ಕೆ ಬಳಸಿಕೊಳ್ಳಬೇಕು.
ಪ್ರಾಧಿಕಾರದ ನಿರ್ಧಾರದಲ್ಲಿ ಕೇಂದ್ರ ಸರಕಾರದ ಪಾತ್ರವೂ ಎದ್ದು ಕಾಣುತ್ತದೆ. ತಮಿಳು ನಾಡು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಾಧಿಕಾರವನ್ನು ಕೇಂದ್ರ ಸರಕಾರ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪವನ್ನು ಪೂರ್ಣ ಪ್ರಮಾಣದಲ್ಲಿ ನಿರ್ಲಕ್ಷಿಸಲಾಗದು. ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಸರಕಾರವಿದ್ದು ಕಾವೇರಿ ಉಲ್ಬಣಗೊಂಡರೆ ಉಭಯ ರಾಜ್ಯಗಳು ಕಿತ್ತಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಮಿಳು ನಾಡಿನ ರಾಜಕೀಯದಲ್ಲಿ ಮೂಗು ತೂರಿಸಲು ಬಿಜೆಪಿಗೆ ಇದು ಅನುಕೂಲ ಮಾಡಿಕೊಡಲೂ ಬಹುದು. ಸಿಡಬ್ಲ್ಲ್ಯುಸಿ ಆರ್ಸಿ ಆದೇಶದ ವಿರುದ್ಧ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತವಪಡಿಸಿದ್ದಾರೆ. ‘‘ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಸಮುದ್ರದ ಪಾಲಾಗುವ ನೀರನ್ನು ಶೇಖರಿಸಲು ವ್ಯವಸ್ಥೆ ಕಲ್ಪಿಸುವುದು ಸರಕಾರದ ಕರ್ತವ್ಯವಾಗಿದೆ. ಆ ವಿಷಯದಲ್ಲಿ ನಾವು ಎಡವಿದ್ದೇವೆ. ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲು ಕಾರ್ಯಕ್ರಮ ರೂಪಿಸಬೇಕು’’ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕಾವೇರಿ ನೀರಿನ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ಈ ನೀರು ಸಂಗ್ರಹಣೆಗೆ ಈ ಹಿಂದಿನ ಜೆಡಿಎಸ್ ನೇತೃತ್ವದ ಮತ್ತು ಬಿಜೆಪಿ ನೇತೃತ್ವದ ಸರಕಾರ ಏನು ಕ್ರಮ ಕೈಗೊಂಡಿತ್ತು ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಒಂದು ರೀತಿಯಲ್ಲಿ ರೈತರ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಸರಕಾರ ಮಾತ್ರವಲ್ಲ, ಈ ಹಿಂದಿನ ಬಿಜೆಪಿ, ಜೆಡಿಎಸ್ ನಾಯಕರೂ ಅಷ್ಟೇ ಕಾರಣ. ಇವರೆಲ್ಲರಿಗೂ ಕಾವೇರಿ ವಿವಾದ ಜೀವಂತವಿರಬೇಕಾಗಿದೆ. ರೈತರ ಹಿತಾಸಕ್ತಿ ಮುಖ್ಯವಾಗಿದ್ದರೆ, ಕಾವೇರಿ ನೀರಿನ ಸಂಗ್ರಹಕ್ಕೆ ಈ ಹಿಂದೆಯೇ ಕಾರ್ಯಯೋಜನೆಗಳನ್ನು ರೂಪಿಸುತ್ತಿದ್ದರು. ಆಡಳಿತ ಪಕ್ಷವಾಗಿರುವಾಗ ಕಾವೇರಿ ವಿಷಯದಲ್ಲಿ ಬಾಯಿ ಮುಚ್ಚಿ ಕೂರುವ ನಾಯಕರಿಗೆ ವಿರೋಧ ಪಕ್ಷದಲ್ಲಿ ಕೂತಾಗ ಮಾತ್ರ ರೈತರ ನೆನಪಾಗುವುದು ವಿಪರ್ಯಾಸ
ವಾಗಿದೆ.
ರವಿವಾರ ಕಾವೇರಿ ನೀರಿಗೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆಯನ್ನು ಕರೆಯಲಾಗಿದೆ. ರಾಜ್ಯದ ಎಲ್ಲ ಪಕ್ಷಗಳ ನಾಯಕರೂ ಭಿನ್ನಾಭಿಪ್ರಾಯ ಮರೆತು ರೈತರ ಹಿತಾಸಕ್ತಿಗೆ ಪೂರಕವಾಗಿ ಸ್ಪಂದಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ಮುಖಂಡರು ರಾಜ್ಯದ ಬರ ಸ್ಥಿತಿಯನ್ನು ಕೇಂದ್ರ ಸರಕಾರದ ಗಮನಕ್ಕೆ ತರಬೇಕು. ರಾಜ್ಯದ ರೈತರ ಪರವಾಗಿ ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕು. ಹಾಗೆಯೇ ತಮಿಳು ನಾಡು ಮುಖ್ಯಮಂತ್ರಿಯ ಜೊತೆಗೆ ಮಾತುಕತೆ ನಡೆಸುವುದಕ್ಕೆ ಸರಕಾರ ಯಾವ ಕಾರಣಕ್ಕೂ ಹಿಂಜರಿಯಬಾರದು. ರೈತರಿಗೆ ಭಾಷೆ, ರಾಜ್ಯಗಳ ಗಡಿಗಳ ಹಂಗಿಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಉಭಯ ರಾಜ್ಯಗಳ ರೈತರು ಯಾವ ಕಾರಣಕ್ಕೂ ಬಲಿಪಶುಗಳಾಗಬಾರದು. ರಾಜ್ಯಕ್ಕೆ ಅಗತ್ಯ ನೀರಿನ ಸಂಗ್ರಹವಿದೆ ಎನ್ನುವುದಾದರೆ ತಮಿಳು ನಾಡಿಗೆ ನೀರು ಬಿಡಲು ಸರಕಾರ ಯಾವ ಕಾರಣಕ್ಕೂ ಹಿಂಜರಿಯಬಾರದು.






