ದೇವನಹಳ್ಳಿ: ಬಾಡದಿರಲಿ ರೈತರ ಬಳ್ಳಿ

ದೇವನಹಳ್ಳಿ ಹಳೆ ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡಿರುವ ‘ದೇವನಹಳ್ಳಿ ಚಲೋ’ ಪ್ರತಿಭಟನೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿ ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಮಿ ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ರಾಜ್ಯ ಸರಕಾರದ ನಡೆಯ ವಿರುದ್ದ ಪ್ರತಿಭಟನೆ ತೀವ್ರಗೊಂಡಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಆರಂಭಗೊಂಡ ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಇದೀಗ ಕಾಂಗ್ರೆಸ್ ಸರಕಾರ ಬಂದ ಬಳಿಕವೂ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಮೂರು ವರ್ಷಗಳಿಂದ ಇಲ್ಲಿನ ರೈತರು ಈ ಸ್ವಾಧೀನದ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬರುತ್ತಿದ್ದಾರೆ. ಆದರೆ ಸರಕಾರ ಈ ಪ್ರತಿಭಟನೆಯ ಕಡೆಗೆ ತಿರುಗಿಯೂ ನೋಡಿಲ್ಲ. ಬುಧವಾರ ಪ್ರತಿಭಟನಾ ಕಾರರು "ಪ್ರಾಣ ಬಿಡುತ್ತೇವೆ ಆದರೆ ಭೂಮಿ ಮಾರುವುದಿಲ್ಲ' ಎಂಬ ಪ್ರತಿಜ್ಞೆಯನ್ನು ಸಾಮೂಹಿಕವಾಗಿ ಮಾಡಿ ಸರಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದರ ಬೆನ್ನಿಗೇ ಸಂಜೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಈ ಬಂಧನದ ವಿರುದ್ದ ವ್ಯಾಪಕ ಖಂಡನೆಗಳು ವ್ಯಕ್ತವಾಗಿವೆ ಮಾತ್ರವಲ್ಲ, ಪ್ರತಿಭಟನೆ ಇನ್ನಷ್ಟು ಕಾವನ್ನು ಪಡೆದಿದೆ. ಸರಕಾರದ ಧೋರಣೆಯ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಇದೀಗ ವಿವಿಧ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದಾರೆ.
ಕೆಐಎಡಿಬಿ ಭೂಸ್ವಾಧೀನವನ್ನು ವಿರೋಧಿಸಿ, ತಮ್ಮ ಫಲವತ್ತಾದ ಕೃಷಿ ಭೂಮಿ ಉಳಿವಿಗಾಗಿ, ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು 4 ಎಪ್ರಿಲ್ 2022ರಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಕಳೆದ ಡಿಸೆಂಬರ್ ಹೊತ್ತಿಗೆ 1,000 ದಿನಗಳನ್ನು ಪೂರೈಸಿತ್ತು. ಧರಣಿ ಪ್ರಾರಂಭವಾದಾಗ ರಾಜ್ಯವನ್ನು ಆಳುತ್ತಿದ್ದುದು ಬಿಜೆಪಿ ನೇತೃತ್ವದ ಸರಕಾರ. ಬಿಜೆಪಿ ಅಂದು ರೈತರ ಈ ಪ್ರತಿಭಟನೆಯನ್ನು ಸಂಪೂರ್ಣ ನಿರ್ಲಕ್ಷಿಸಿತ್ತು ಮಾತ್ರವಲ್ಲ, ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ ಎಂದು ವಾದಿಸಿತ್ತು. ಆಗ ಕಾಂಗ್ರೆಸ್ನ ಹಲವು ನಾಯಕರು ರೈತರ ಪರವಾಗಿ ಹೇಳಿಕೆಗಳನ್ನು ನೀಡಿದ್ದರು. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದಿದೆ. ಆದರೆ, ರೈತರ ಬೇಡಿಕೆಗಳು ಮಾತ್ರ ಈಡೇರಿಲ್ಲ. ಪ್ರತಿಭಟನೆಗೆ 1000 ದಿನಗಳು ಪೂರ್ತಿಯಾದಾಗ ರೈತರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು. ಅವರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಆ ಭರವಸೆಗಳೆಲ್ಲ ಹುಸಿಯಾಗಿವೆ. ಹಿಂದಿನ ಬಿಜೆಪಿ ಸರಕಾರದ ಈ ಕ್ರಮದ ವಿರುದ್ದ ರೈತರು ಹೋರಾಟ ನಡೆಸುತ್ತಿದ್ದಾಗ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಈ ರೈತರೊಂದಿಗೆ ದನಿಗೂಡಿಸಿದ್ದರು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಕ್ಷಣ ಈ ಜನರಿಗೆ ನೀಡಿದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ಮರೆತು ಬಿಟ್ಟಿದ್ದಾರೆ.ಇತ್ತ ಬಿಜೆಪಿ ನಾಯಕರೂ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಯಾಕೆಂದರೆ, ಈ ಭೂಸ್ವಾಧೀನದ ನಿಜವಾದ ಖಳನಾಯಕ ಹಿಂದಿನ ಬಿಜೆಪಿ ಸರಕಾರವೇ ಆಗಿದೆ.
ಸರಕಾರ ಬೆಂಗಳೂರಿನ ಅಭಿವೃದ್ಧಿಯನ್ನು ಮುಂದಿಟ್ಟು ದೇವನ ಹಳ್ಳಿ ಭೂಸ್ವಾಧೀನವನ್ನು ಸಮರ್ಥಿಸಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಸರಕಾರದ ಕ್ರಮವನ್ನು ವಿರೋಧಿಸುವುದಕ್ಕೆ ರೈತರೂ ಸಕಾರಣಗಳನ್ನು ನೀಡಿದ್ದಾರೆ. ಈ ಭೂಸ್ವಾಧೀನದಿಂದ ರೈತರ ಮೇಲೆ ಮಾತ್ರವಲ್ಲ, ಒಟ್ಟು ಕೃಷಿ ಮತ್ತು ಅದಕ್ಕೆ ಪೂರಕವಾದ ಆರ್ಥಿಕ ವ್ಯವಹಾರಗಳ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಧಿಸೂಚನೆಯ ಪ್ರಕಾರ ದೇವನಹಳ್ಳಿ ತಾಲೂಕಿನ, ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪ ನಹಳ್ಳಿ, ಚೀಮಾಚನಹಳ್ಳಿ, ಮಟ್ಟಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಶೋತ್ರಿಯ ತೆಲೋಹಳ್ಳಿ ಮತ್ತು ಹ್ಯಾಡಾಳ ಈ 13 ಗ್ರಾಮಗಳ 1,777 ಎಕರೆ ಕೃಷಿಭೂಮಿ ಸ್ವಾಧೀನಕ್ಕೆ ನೋಟಿಸ್ ನೀಡಲಾಗಿದೆ. ಈ ಭೂಮಿಯಲ್ಲಿ ಸುಮಾರು 900ರಿಂದ 1,000 ಟನ್ ರಾಗಿ ಮತ್ತಿತರ ಆಹಾರ ಧಾನ್ಯಗಳು, 2,000 ಟನ್ ದ್ರಾಕ್ಷಿ, 100ರಿಂದ 150 ಟನ್ ಮಾವು ಮುಂತಾದ ಹಣ್ಣಿನ ಬೆಳೆಗಳು, ಹೂವು, ತರಕಾರಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಇವು ಇಲ್ಲಿನ ಜನರಿಗೆ ಆಹಾರ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಿವೆ. ಇದೇ ಹಳ್ಳಿಗಳಲ್ಲಿ ಪ್ರತಿದಿನ 6,000ದಿಂದ 8,000 ಲೀಟರ್ ಹಾಲಿನ ಉತ್ಪಾದನೆಯಾಗುತ್ತಿದೆ ಮತ್ತು ಉತ್ತಮ ಗುಣಮಟ್ಟದ ರೇಷ್ಮೆಗೂಡು ಮತ್ತು ಬೆಂಗಳೂರು ಬ್ಲೂ ದ್ರಾಕ್ಷಿ ಉತ್ಪಾದನೆ ಕೂಡ ಇಲ್ಲಿನ ವಿಶೇಷವಾಗಿದೆ. ಕೃಷಿ ಕೌಶಲ್ಯಗಳು ಸುಮಾರು 6,000 ಜನರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿವೆ. ಹೀಗೆ ಉದ್ಯೋಗ ಪಡೆದವರಲ್ಲಿ ಬಡ ರೈತರು, ಕೃಷಿ ಕೂಲಿ ಕಾರ್ಮಿಕರು, ಕೃಷಿ ಪೂರಕ ಕೌಶಲ್ಯ ಹೊಂದಿರುವ ಅನಕ್ಷರಸ್ಥರು ಹೆಚ್ಚಾಗಿದ್ದಾರೆ. ಈ ಸ್ವಾಧೀನ ಪ್ರಕ್ರಿಯೆಯಲ್ಲಿ 387 ಕುಟುಂಬಗಳು ಸಂಪೂರ್ಣ ಭೂ ರಹಿತರಾಗಲಿದ್ದು, ಈ ಕುಟುಂಬಗಳಿಗೆ ಸೇರಿದ 2,989 ಜನರು ಭೂ ರಹಿತರಾಗಲಿದ್ದಾರೆ. ಇಲ್ಲಿನ ಸ್ಥಳೀಯ ರೈತರ ಭರವಸೆ ಮತ್ತು ಸಾಮರ್ಥ್ಯ ಕೃಷಿಯೇ ಆಗಿದ್ದು, ಇಂದಿಗೂ ಕೂಡ ಇದೇ ಕೃಷಿಯನ್ನು ನಂಬಿಕೊಂಡು ಕನಿಷ್ಠ 6,000 ಜನ ಬದುಕುತ್ತಿದ್ದಾರೆ.
ಕೈಗಾರಿಕಾ ಉದ್ದೇಶಕ್ಕೆ ರೈತರ ಭೂಸ್ವಾಧೀನ ಎನ್ನುವ ನೀತಿ ಬಹುತೇಕ ಭ್ರಷ್ಟಾಚಾರ ಮತ್ತು ಕಾರ್ಪೊರೇಟ್ ಓಲೈಕೆಗಾಗಿ ಕುಖ್ಯಾತಿಯನ್ನು ಪಡೆದಿದೆ. ಕೈಗಾರಿಕೀಕರಣ ಅಂದರೆ ದೊಡ್ಡ ಕಂಪೆನಿಗಳಿಗೆ ಹೂಡಿಕೆಗೆ ಅವಕಾಶ ನೀಡುವುದು, ಅವರಿಗೆ ಬೇಕಾದ ಜಮೀನು, ಮತ್ತಿತರ ಸೌಲಭ್ಯಗಳನ್ನು ನಾಮಕಾವಾಸ್ತೆ ಬೆಲೆಗೆ, ಎಷ್ಟೋ ಬಾರಿ ಉಚಿತವಾಗಿ ನೀಡುವ ನೀತಿ ಅಷ್ಟೆ. ಈ ಹಿಂದೆ ತಮಿಳುನಾಡಿನಲ್ಲಿ ಸಣ್ಣ ಪುಟ್ಟ ನಗರಗಳಲ್ಲಿ ಕಿರು ಕೈಗಾರಿಕಾ ವಲಯಗಳನ್ನು ಸೃಷ್ಟಿಸಿ ಅಲ್ಲಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಟ್ಟ ಮಾದರಿಯನ್ನು ಕರ್ನಾಟಕ ಅನುರಿಸಿತ್ತು. ದೇವರಾಜ ಅರಸು ಕಾಲದಲ್ಲಿ ಇಂತಹ ಕೈಗಾರಿಕಾ ವಸಾಹತುಗಳನ್ನು ಸೃಷ್ಟಿಸಲಾಯಿತು. ಇವೆಲ್ಲಾ ಕೆಲವೇ ಸಾವಿರ ಚದರಡಿಗಳ ನಿರ್ಮಿತಿಗಳು. ಇವು ಸ್ಥಳೀಯ ಉದ್ಯಮಶೀಲತೆಯನ್ನು ಬೆಳೆಸಿದ ಉದಾಹರಣೆ ರಾಜ್ಯದುದ್ದಕ್ಕೂ ಸಿಗುತ್ತದೆ. ಆದರೆ ಜಾಗತೀಕರಣದ ಬಳಿಕ ದೊಡ್ಡ ಕಾರ್ಪೊರೇಟ್ ಉದ್ಯಮಪತಿಗಳನ್ನು ಸಾವಿರಾರು ಕೋಟಿ ಹೂಡಿಕೆ ಮಾಡುವಂತೆ ಸ್ವಾಗತಿಸಿ ಅವರಿಗೆ ಸಾವಿರಾರು ಎಕರೆ ಜಮೀನು ನೀಡುವ ಹೊಸ ನೀತಿ ಜಾರಿಗೆ ಬಂತು. ಒಪ್ಪಂದ ಪತ್ರದಲ್ಲಿ ಸ್ಥಳೀಯರಿಗೆ ಉದ್ಯೋಗ, ನೂರಾರು ಉದ್ಯೋಗ ಸೃಷ್ಟಿ ಎಂದೆಲ್ಲಾ ದಾಖಲೆಯಲ್ಲಿದ್ದರೂ ಅಧಿಕೃತವಾಗಿ ಜಾರಿಗೆ ಬರುವಾಗ ಸ್ಥಳೀಯರು ನಿರಾಶ್ರಿತರಾಗಿ ಬಿಡುತ್ತಿದ್ದರು. ಹೆಚ್ಚೆಂದರೆ ಡ್ರೈವರು, ಕಸ ಗುಡಿಸೋದು, ಜವಾನ ಇತ್ಯಾದಿ ಉದ್ಯೋಗಗಳಷ್ಟೇ ಸ್ಥಳೀಯರಿಗೆ ದಕ್ಕಿದ್ದು. ಇನ್ನೊಂದೆಡೆ ಹೀಗೆ ಜಮೀನು ಪಡೆದು ವರ್ಷಗಟ್ಟಲೆ ಆದರೂ ಏನನ್ನೂ ಆರಂಭಿಸದೆ ಜಮೀನು ಅಡವಿಟ್ಟು ಕಾಸು ತಿರುಗಿಸಿದ ಉದಾಹರಣೆಗಳು ಇವೆ. ಇನ್ನೊಂದೆಡೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮವು ಭೂ ಬ್ಯಾಂಕ್ ಸೃಷ್ಟಿ ಮಾಡುತ್ತಾ ಹೋಗಿದೆ. ಭವಿಷ್ಯದಲ್ಲಿ ಉದ್ಯಮಿಗಳಿಗೆ ಬೇಕಾದ ಭೂಮಿಯನ್ನು ಈಗಾಗಲೇ ವಶಪಡಿಸಿ ದಾಸ್ತಾನು ಮಾಡಿ ಇಡುವ ಯೋಜನೆ! ಈ ಯೋಜನೆಯಂತೆ ವಶಪಡಿಸಿಕೊಂಡ ಜಮೀನಿನ ಅರ್ಧಕ್ಕರ್ಧ ಪ್ರದೇಶಕ್ಕೆ ಇಂದಿಗೂ ಬೇಡಿಕೆ ಇಲ್ಲ. ಜಮೀನು ಪಡಕೊಂಡ ಉದ್ಯಮಪತಿಗಳು ಉದ್ಯಮ ಆರಂಭಿಸಿಲ್ಲ ಎಂದು ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನೋಟಿಸ್ ನೀಡಲಾಗಿತ್ತು. ಅಷ್ಟೇಕೆ ಇದುವರೆಗೆ ಈ ಬೋರ್ಡು ತಾನು ವಶಪಡಿಸಿಕೊಂಡ ಜಮೀನಿನಲ್ಲಿ ಸಾವಿರಾರು ಎಕರೆಗಳನ್ನು ಭೂಸ್ವಾಧೀನದಿಂದ ಕೈಬಿಟ್ಟಿದೆ.( ಅಂದಾಜು 25 ಸಾವಿರ ಎಕರೆ!) ಜಿಲ್ಲಾ ಕೇಂದ್ರಗಳಲ್ಲಿ ಈ ರೀತಿಯ ಭೂಸ್ವಾಧೀನ ಮೂಲಕ ಕೈಗಾರಿಕಾಭಿವೃದ್ಧಿ ಎಂದು ಘೋಷಿತವಾದರೂ ಬಹುತೇಕ ಜಿಲ್ಲೆಗಳಲ್ಲಿ ಯಾವುದೇ ಗಮನಾರ್ಹ ಹೂಡಿಕೆಯಾಗಿಯೇ ಇಲ್ಲ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಮಂಡಳಿ ಈವರೆಗೆ ಸ್ವಾಧೀನ ಪಡಿಸಿಕೊಂಡ ಭೂಮಿ, ಅಲ್ಲಿ ಸ್ಥಾಪನೆಯಾದ ಕೈಗಾರಿಕೆಗಳು, ಈ ಕೈಗಾರಿಕೆಗಳ ಮಾಲಕರಲ್ಲಿ ಸ್ಥಳೀಯರೆಷ್ಟು, ಹೊರಗಿನವರೆಷ್ಟು, ಸ್ಥಳೀಯರಿಗೆ ಸಿಕ್ಕಿದ ಉದ್ಯೋಗಳು, ಸ್ಥಳೀಯ ಆರ್ಥಿಕತೆಗೆ ಇವುಗಳು ನೀಡಿದ ಕೊಡುಗೆಗಳ ಬಗ್ಗೆ ಮೌಲ್ಯಮಾಪನ ನಡೆಯಬೇಕು.
ದೇವನಹಳ್ಳಿಯ ಚನ್ನರಾಯಪಟ್ಟಣ ಪ್ರದೇಶದ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. ಸರಕಾರ ಈ ಭೂಸ್ವಾಧೀನದ ಬಗ್ಗೆ ತಳೆದಿರುವ ದ್ವಂದ್ವ ನಿಲುವನ್ನು ಇನ್ನಾದರೂ ಕೈ ಬಿಡಬೇಕು. ಕೈಗಾರಿಕೋದ್ಯಮಗಳಿಗೆ ಸಂಬಂಧಿಸಿ ಸರಕಾರ ತನ್ನ ನೀತಿಯನ್ನೇ ಬದಲಿಸಿಕೊಳ್ಳದೆ ಇಂತಹ ಭೂಸ್ವಾಧೀನ ಪ್ರಕ್ರಿಯೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ಇಂದು ದೇವನಹಳ್ಳಿಯ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಇನ್ನಾವುದೋ ಪ್ರದೇಶದ ರೈತರ ಭೂಮಿಯ ಮೇಲೆ ಅದು ಕಣ್ಣು ಹಾಕಬೇಕಾಗುತ್ತದೆ. ಅಲ್ಲಿಯೂ ಇದೇ ಸಮಸ್ಯೆ ಆರಂಭವಾಗುತ್ತದೆ. ಬೆಂಗಳೂರಿನ ಅಭಿವೃದ್ಧಿಯೆಂದರೆ, ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಿ, ಆ ಭೂಮಿಯ ಮೇಲೆ ಬೃಹತ್ ಕಾರ್ಪೊರೇಟ್ಗಳು ಹಕ್ಕು ಸಾಧಿಸುವುದಲ್ಲ. ಇಲ್ಲಿನ ರೈತರು, ಕಾರ್ಮಿಕರು ಕೂಡ ಆ ಅಭಿವೃದ್ಧಿಯ ಭಾಗವಾಗಿ ಬೆಳೆಯಬೇಕು. ಅಂತಹದೊಂದು ದೂರದೃಷ್ಟಿಯುಳ್ಳ ಅಭಿವೃದ್ಧಿಯ ಕಡೆಗೆ ನಾಡನ್ನು ಮುನ್ನಡೆಸುವ