ಒಳಮೀಸಲಾತಿ: ನಮ್ಮ ಗುರುತು ನಮಗೆ ಉರುಳಾಗದಿರಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯಾದ್ಯಂತ ಒಳಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆಗಳು ಆರಂಭಗೊಂಡಿವೆ. ಈ ಸಮೀಕ್ಷೆ ಅತಿ ಶೀಘ್ರ ಮುಗಿದು ಒಳ ಮೀಸಲಾತಿ ಜಾರಿಗೊಳ್ಳಬೇಕು ಮತ್ತು ಎಲ್ಲ ಜಾತಿಗಳು ತಮ್ಮ ಅರ್ಹತೆಗನುಸಾರವಾಗಿ ಸರಕಾರದ ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನುವುದು ಎಲ್ಲರ ಆಗ್ರಹವಾಗಿದೆ. ಒಳ ಮೀಸಲಾತಿ ಶೀಘ್ರದಲ್ಲಿ ಜಾರಿಗೊಳ್ಳಬೇಕಾದರೆ ಪರಿಶಿಷ್ಟ ಜಾತಿಯೊಳಗಿನ ಸಮೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೆ ಮುಗಿಯಬೇಕು. ಒಮ್ಮೆ ಸಮೀಕ್ಷೆ ಪೂರ್ತಿಯಾಯಿತು ಎಂದಾದರೆ, ಅದರ ಬಗ್ಗೆ ಎಲ್ಲರೂ ಒಮ್ಮತದ ಅಭಿಪ್ರಾಯವನ್ನು ಹೊಂದಿರಬೇಕು. ಸಮೀಕ್ಷೆ ಪೂರ್ತಿಯಾದ ಬಳಿಕ ಮತ್ತೆ ಭಿನ್ನಮತಗಳು ಭುಗಿಲೆದ್ದು ದಲಿತ ಸಮುದಾಯದ ಬೇರೆ ಬೇರೆ ಗುಂಪುಗಳು ಬೀದಿಗಿಳಿದರೆ ಒಳ ಮೀಸಲಾತಿ ಜಾರಿ ಕಷ್ಟವಾಗಬಹುದು. ಈಗಾಗಲೇ ವಿವಿಧ ಸಂಘಟನೆಗಳು ತಮ್ಮ ತಮ್ಮ ಜಾತಿ ಗುರುತುಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಿವೆ. ರಾಜ್ಯದಲ್ಲಿ ಒಂದೇ ಜಾತಿಗೆ ಸಂಬಂಧ ಪಟ್ಟವರು ಬೇರೆ ಬೇರೆ ಹೆಸರುಗಳಿಂದ, ಬೇರೆ ಬೇರೆ ಗುಂಪುಗಳಿಂದ ಗುರುತಿಸಲ್ಪಡುತ್ತಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಸಮೀಕ್ಷೆಯ ದಿಕ್ಕು ತಪ್ಪಿಸುವ ಸಾಧ್ಯತೆಗಳಿವೆ ಎನ್ನುವುದು ಕೆಲವು ದಲಿತ ಸಂಘಟನೆಗಳ ಆತಂಕವಾಗಿದೆ. ದಲಿತ ಸಮುದಾಯದೊಳಗಿರುವ ಎಷ್ಟೋ ಜನರಿಗೆ ತಮ್ಮ ಜಾತಿ ಯಾವುದು ಎನ್ನುವುದರ ಬಗ್ಗೆಯೇ ಗೊಂದಲಗಳಿವೆ. ತಮ್ಮ ಜಾತಿಯನ್ನು ಬಹಿರಂಗ ಪಡಿಸುವುದರ ಬಗ್ಗೆ ಕೀಳರಿಮೆಗಳಿವೆ. ಈಗಾಗಲೇ ಆದಿ ದ್ರಾವಿಡ, ಆದಿ ಕರ್ನಾಟಕ ಮೊದಲಾದ ಹೆಸರುಗಳಿಂದ ಗುರುತಿಸಲ್ಪಡುತ್ತಿರುವವರೆಲ್ಲ ತಮ್ಮ ಮೂಲ ಉಪಜಾತಿಗಳ ಮೂಲಕ ಹೊಸದಾಗಿ ಗುರುತಿಸಲು ಮುಂದಾಗಬೇಕಾಗಿದೆ. ಹಲವರಿಗೆ ಇದರಲ್ಲಿ ಹಲವು ತೊಡಕುಗಳು ಕಾಣುತ್ತಿವೆ. ಈ ಗೊಂದಲಗಳನ್ನು ರಾಜಕೀಯ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ.
ಇತರ ಜಾತಿಗಳ ಅಂಕಿಅಂಶಗಳನ್ನು ಸುಲಭದಲ್ಲಿ ಸಂಗ್ರಹಿಸಿದಂತೆ ದಲಿತ ಸಮುದಾಯದ ಜಾತಿಗಳ ಡೇಟಾಗಳನ್ನು ಸಂಗ್ರಹಿಸುವುದು ಸಾಧ್ಯವಿಲ್ಲ. ಇದು ಅತ್ಯಂತ ತಾಳ್ಮೆಯಿಂದ ನಿಭಾಯಿಸಬೇಕಾದ ಸೂಕ್ಷ್ಮ ಕೆಲಸವಾಗಿದೆ. ಆದರೆ ಒಳ ಮೀಸಲಾತಿ ಜಾರಿಗೊಳಿಸುವುದನ್ನು ಮುಂದೂಡಲು ಇದನ್ನು ನೆಪವಾಗಿ ಬಳಸಿಕೊಳ್ಳಬಾರದು. ಎಲ್ಲರೂ ತಮ್ಮ ತಮ್ಮ ಉಪಜಾತಿಗಳನ್ನು, ಮೂಲ ಜಾತಿಗಳನ್ನು ನಮೂದಿಸಿ ಎನ್ನುವ ಕರೆಯನ್ನು ಹಲವು ಸಂಘಟನೆಗಳು ನೀಡಿವೆ. ಆದರೆ ಇದು ಎಷ್ಟರಮಟ್ಟಿಗೆ ಸಾಧ್ಯವಾಗಬಹುದು ಎನ್ನುವುದರ ಬಗ್ಗೆ ಅನುಮಾನಗಳಿವೆ. ಇದು ಸಾಧ್ಯವಾಗದೇ ಇದ್ದರೆ, ಒಳಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಕಷ್ಟವಾಗಬಹುದು. ಮುಂದಿನ ದಿನಗಳಲ್ಲಿ ಮತ್ತೆ ಕೆಲವು ಜಾತಿ ಸಂಘಟನೆಗಳು ಒಳಮೀಸಲಾತಿಗೆ ಹೊಸ ಸಮೀಕ್ಷೆಯನ್ನು ನಡೆಸಬೇಕು ಎಂದು ಒತ್ತಡಗಳನ್ನು ಹೇರುವ ಸಾಧ್ಯತೆಗಳಿವೆ. ಈ ಕಾರಣದಿಂದ ಜಾತಿ ಸಮೀಕ್ಷೆಗಳನ್ನು ನಡೆಸುವಾಗ, ಜಾತಿಗಳನ್ನು ಉಲ್ಲೇಖಿಸುವಾಗ ಕೆಲವು ನಿರ್ದಿಷ್ಟ ಜಾತಿಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅವರ ಆತಂಕಗಳಿಗೆ ಕಿವಿಯಾಗಬೇಕಾಗಿದೆ.
ಮುಖ್ಯವಾಗಿ ಜಾತಿ ಗುರುತುಗಳು ಮೇಲ್ಜಾತಿಯ ಜನರಿಗೆ ಒಂದು ‘ಪದವಿ’ಯಾಗಿದೆ. ಆದುದರಿಂದ ಅವರು ಅದನ್ನು ತಮ್ಮ ಹೆಸರಿನ ಜೊತೆಗೇ ಹೆಮ್ಮೆಯಿಂದಲೂ, ಆತ್ಮವಿಶ್ವಾಸದಿಂದಲೂ ಧರಿಸಿಕೊಂಡಿರುತ್ತಾರೆ. ಆದರೆ ದಲಿತರ ಪಾಲಿಗೆ ಜಾತಿ ಗುರುತು ಅವರಲ್ಲಿ ಕೀಳರಿಮೆಯನ್ನು ತುಂಬಿದೆ. ಅವರು ಅದನ್ನು ಬಹಿರಂಗವಾಗಿ ತಮ್ಮ ಹೆಸರಿನ ಜೊತೆಗೆ ಪ್ರದರ್ಶಿಸುವ ಬದಲು, ಎಲ್ಲಿ, ಹೇಗೆ ಮುಚ್ಚಿಡಬಹುದು ಎನ್ನುವ ಪ್ರಯತ್ನ ನಡೆಸಿದ್ದೇ ಹೆಚ್ಚು. ಜಾತಿಯ ಹೆಸರಿನ ಜೊತೆ ಜೊತೆಗೇ ಅಂಟಿಕೊಂಡಿರುವ ಕಳಂಕಗಳು, ಅವಮಾನಗಳನ್ನು ಕಿತ್ತೆಸೆಯುವ ಭರದಲ್ಲಿ ಆ ಹೆಸರನ್ನೇ ಕಳಚಿಕೊಳ್ಳುವ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಅನೇಕರು ತಮ್ಮ ಉಪ ಜಾತಿಗಳ ಹೆಸರನ್ನು ಕೈ ಬಿಟ್ಟು ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ಸಾರ್ವಜನಿಕವಾಗಿ ಗುರುತಿಸಲು ಇದೂ ಒಂದು ಕಾರಣ. ಇದೀಗ ಈ ನೆಲಮೂಲದ ಜೊತೆಗೆ ಹೊಂದಿರುವ ಕರುಳ ಸಂಬಂಧವನ್ನು ಮುಂದಿಟ್ಟುಕೊಂಡು ತಮ್ಮ ಜಾತಿ ಹೆಸರನ್ನು ಮರು ಸ್ಥಾಪಿಸಲು ಕೆಲವರು ಪ್ರಯತ್ನಿಸುತ್ತಿದ್ದಾರಾದರೂ, ಅದು ಅಷ್ಟು ಸುಲಭದ ಕೆಲಸವೇನೂ ಅಲ್ಲ. ‘ಹೊಲ’ದ ಒಡೆಯನೇ ಹೊಲೆಯ ಎನ್ನುವುದು ಹೊಲೆಯ ಸಮುದಾಯದ ಹೆಗ್ಗಳಿಕೆಯಾದರೂ, ಈ ಸಮಾಜ ಹೊಲೆಯ ಎನ್ನುವ ಪದವು ‘ಹೊಲಸಿನಿಂದ’ ಹುಟ್ಟಿತು ಎಂದು ನಂಬಿಸುತ್ತಾ ಬಂದಿದೆ. ಆದುದರಿಂದಲೇ, ಸಾಮಾಜಿಕವಾಗಿ ಜಾಗೃತಗೊಂಡ ಒಂದು ತಲೆಮಾರು ತಮ್ಮನ್ನು ತಾವು ಹೊಲೆಯ ಎಂದು ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತವೆ. ಒಂದು ಕಾಲದಲ್ಲಿ ಮಾದಿಗ, ಹೊಲೆಯ ಎಂದು ಕರೆಯುವುದು ಕೂಡ ಅಪರಾಧವೆಂದು ಭಾವಿಸಲಾಗಿತ್ತು. ಇದೀಗ ನಿಮ್ಮನ್ನು ನೀವು ಹೊಲೆಯ, ಮಾದಿಗ ಎಂದು ಗುರುತಿಸಿಕೊಳ್ಳಿ ಎಂದು ಸಂಘಟನೆಗಳು ಕರೆ ನೀಡುತ್ತಿವೆ. ಆದರೆ ಇಂದಿಗೂ ಹೊಲೆಯ, ಮಾದಿಗ ಎಂದು ಗುರುತಿಸಿಕೊಳ್ಳಲು ಹಿಂಜರಿಯುವ ಪರಿಶಿಷ್ಟ ಜಾತಿಯ ಜನರಿದ್ದಾರೆ. ಹಾಗೆಯೇ ಪರಿಶಿಷ್ಟ ಜಾತಿಗಳಲ್ಲಿ ತಮ್ಮ ತಮ್ಮ ಅಸ್ಮಿತೆಗಳನ್ನು ಪ್ರಕಟ ಪಡಿಸುವ ಬದಲು ಮುಚ್ಚಿಡುವುದನ್ನು ಅಪೇಕ್ಷೆ ಪಡುವವರ ಸಂಖ್ಯೆಯೂ ಬಹುದೊಡ್ಡದಿದೆ. ಅಲ್ಪಸ್ವಲ್ಪ ವಿದ್ಯಾವಂತರಾಗಿರುವ ಪರಿಶಿಷ್ಟ ಜಾತಿಗಳ ಯುವಕರ ಮಧ್ಯೆಯಂತೂ ತಮ್ಮ ಗುರುತಿನ ಬಗ್ಗೆ ತೀರಾ ಗೊಂದಲಗಳಿವೆ. ಇದಕ್ಕಾಗಿ ಅವರನ್ನು ಖಂಡಿತವಾಗಿಯೂ ಹೊಣೆ ಮಾಡುವಂತಿಲ್ಲ. ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆ ಮಾಡಿಕೊಂಡು ಬಂದಿರುವ, ಇನ್ನೊಬ್ಬರ ಜಾತಿಗಳನ್ನು ಕೀಳು ಎಂದು ತುಳಿಯುತ್ತಲೇ, ಸಮಾಜದಲ್ಲಿ ಮೇಲಿನ ಜಾತಿಗಳಾಗಿ ಸಕಲ ಸೌಲಭ್ಯಗಳನ್ನು ಪಡೆಯುತ್ತಾ ಬಂದಿರುವ ಜನರೇ ಅದಕ್ಕೆ ಹೊಣೆಗಾರರು.
ನಗರ ಪ್ರದೇಶಗಳಲ್ಲಿ ತಮ್ಮ ಜಾತಿಯನ್ನು ಪ್ರಕಟ ಪಡಿಸಲು ದಲಿತರಿಗೆ ಬೇರೆಯದೇ ಆದ ಸಮಸ್ಯೆಗಳಿವೆ. ಇಲ್ಲಿ ತಮ್ಮ ನಿಜವಾದ ಜಾತಿಗಳನ್ನು ಹೇಳಿಕೊಂಡರೆ ಬಾಡಿಗೆಗೆ ಮನೆಗಳೇ ದೊರೆಯುವುದಿಲ್ಲ. ಆದುದರಿಂದ ತಮ್ಮ ನಿಜವಾದ ಜಾತಿಗಳನ್ನು ಮುಚ್ಚಿಟ್ಟುಕೊಂಡು ಮನೆಗಳನ್ನು ಪಡೆಯಬೇಕಾಗುತ್ತದೆ. ಇದೀಗ ಒಳ ಮೀಸಲಾತಿ ಸಮೀಕ್ಷೆಯ ಸಂದರ್ಭದಲ್ಲಿ ತಮ್ಮ ಜಾತಿಗಳನ್ನು ಅವರ ಮುಂದೆ ಹೇಳಿಕೊಂಡರೆ, ಎಲ್ಲಿ ತಮ್ಮ ಪರಿಸರದ ಜನರಿಗೆ ತಮ್ಮ ಜಾತಿಗೊತ್ತಾಗಿ ಬಿಡುತ್ತದೋ ಎನ್ನುವ ಆತಂಕ ಕೆಲವರನ್ನು ಕಾಡುತ್ತಿದೆ. ಈ ಆತಂಕವನ್ನು ಅವರು ಈಗಾಗಲೇ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ಸಮೀಕ್ಷೆಯ ಸಂದರ್ಭದಲ್ಲಿ ತಮ್ಮ ನಿಜವಾದ ಜಾತಿಯನ್ನು ಹೇಳಿಕೊಳ್ಳದೇ ಇರುವ ಸಾಧ್ಯತೆಗಳಿವೆ. ಅಥವಾ ಸಮೀಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ಒಳ ಮೀಸಲಾತಿ ಸಮೀಕ್ಷೆಯ ಹಂತ ಇನ್ನಷ್ಟು ವಿಸ್ತರಣೆಗೊಳ್ಳಬೇಕು. ಅದು ಸಾಧ್ಯವಾದಷ್ಟು ಗುಟ್ಟಾಗಿರಬೇಕು. ಇದಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಸಮೀಕ್ಷೆಗಳು ಮುಗಿದ ಬಳಿಕವೂ, ಆಯಾ ಸಮುದಾಯಗಳಿಂದ ಆಕ್ಷೇಪಗಳು ಕೇಳಿ ಬಂದರೆ ಅದಕ್ಕೆ ಕಿವಿಯಾಗುವ ತಾಳ್ಮೆ ಸರಕಾರಕ್ಕಿರಬೇಕು. ಸಮೀಕ್ಷೆ, ಸಂಗ್ರಹಿಸಿದ ಡೇಟಾಗಳು ಪರಿಪೂರ್ಣವಾಗಿದೆ ಎನ್ನುವುದು ಮನವರಿಕೆಯಾದ ಬಳಿಕವೇ ಒಳಮೀಸಲಾತಿಯನ್ನು ಜಾರಿಗೊಳಿಸಲು ಮುಂದಾಗಬೇಕು. ಆತುರದ ಯಾವುದೇ ನಿರ್ಧಾರ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಬಹುದು. ದಲಿತರ ಪಾಲಿಗೆ ಅವರ ಗುರುತುಗಳು ಅವರ ಕೊರಳಿಗೆ ಉರುಳಾಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ.