ಸರಕಾರದ ವೈಫಲ್ಯ ಪ್ರಶ್ನಿಸುವುದು ದೇಶದ್ರೋಹವೆ?

Photo credit: PTI
ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿ ಪ್ರವಾಸಿಗರನ್ನು ಕೊಂದು ಹಾಕಿದ ಬಳಿಕ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಭಯೋತ್ಪಾದಕರ ಬೇಟೆ ಕಾರ್ಯಾಚರಣೆ ಕಾವು ಪಡೆದುಕೊಂಡಿದೆ. ಶಂಕಿತ ಉಗ್ರರ ಮನೆಗಳನ್ನು ಕೆಡವಲಾಗಿದೆ ಮಾತ್ರವಲ್ಲ, ಭಾರತದಲ್ಲಿರುವ ಪಾಕಿಸ್ತಾನಿಗಳನ್ನು ಮರಳಿ ಅವರದೇ ದೇಶಕ್ಕೆ ರವಾನಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಹಲ್ಗಾಮ್ ದಾಳಿಯ ಸೇಡು ತೀರಿಸಲು ಸಶಸ್ತ್ರ ಪಡೆಗಳಿಗೆ ಪ್ರಧಾನಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಸೂಕ್ಷ್ಮ ವಾತಾವರಣದಲ್ಲಿ ಯಾವುದೇ ರಾಜಕೀಯ ಒತ್ತಡಗಳಿಲ್ಲದೆ ಸೇನೆ ಹೆಜ್ಜೆಗಳನ್ನು ಮುಂದಿಡುವುದು ಅತ್ಯಗತ್ಯವಾಗಿದೆ. ಪಾಕಿಸ್ತಾನವನ್ನು ಯಾವ ರೀತಿಯಲ್ಲಿ ಎದುರಿಸಬೇಕು, ಯುದ್ಧ ಬೇಕೋ ಬೇಡವೋ, ಅದರ ಪರಿಣಾಮಗಳು ಏನೇನು ಎನ್ನುವುದನ್ನು ಅರಿತು ಮುಂದೆ ಹೆಜ್ಜೆ ಇಡುವುದಕ್ಕೆ ಇದು ಸೇನೆಗೆ ಅನುಕೂಲವಾಗಬಹುದು.
ಪಹಲ್ಗಾಮ್ನಲ್ಲಿ ನಡೆಸಿದ ದಾಳಿಗೆ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಿ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಇರುವ ಆಸಕ್ತಿಗಿಂತ ತನ್ನ ವೈಫಲ್ಯವನ್ನು ಪ್ರಶ್ನಿಸುತ್ತಿರುವ ಭಾರತೀಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರಕಾರ ಹೆಚ್ಚು ಆಸಕ್ತಿ ತೋರಿಸುತ್ತಿದೆ ಎನ್ನುವ ಆರೋಪ ಇದೇ ಸಂದರ್ಭದಲ್ಲಿ ಕೇಳಿ ಬರುತ್ತಿದೆ. ಭಯೋತ್ಪಾದಕರು ಪ್ರವಾಸಿಗರ ಮೇಲೆ ಬರ್ಬರ ದಾಳಿ ನಡೆಸುವುದಕ್ಕೆ ಕೇಂದ್ರ ಸರಕಾರದ ಭದ್ರತಾ ವೈಫಲ್ಯ ಪ್ರಮುಖ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಅಲ್ಲಗಳೆಯಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಕೆಲವು ಯೂಟ್ಯೂಬರ್ಗಳು, ಹೋರಾಟಗಾರರು ಈ ವೈಫಲ್ಯಗಳನ್ನು ಟೀಕಿಸುತ್ತಿದ್ದಾರೆ ಮಾತ್ರವಲ್ಲ, ಸರಕಾರದಿಂದ ಉತ್ತರಗಳನ್ನು ನಿರೀಕ್ಷಿಸುತ್ತಿದ್ದಾರೆ. ಭದ್ರತಾ ವೈಫಲ್ಯವನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆಯಾದರೂ, ಆ ವೈಫಲ್ಯಕ್ಕಾಗಿ ಯಾರ ಮೇಲೂ ಈವರೆಗೆ ಕ್ರಮ ತೆಗೆದುಕೊಂಡಿಲ್ಲ. ಸರಕಾರದ ಯಾವ ಉನ್ನತ ಸಚಿವರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರಕ್ಕೆ ಭೇಟಿ ನೀಡುವ ಧೈರ್ಯವನ್ನೂ ಈವರೆಗೆ ಪ್ರದರ್ಶಿಸಿಲ್ಲ. ಬದಲಿಗೆ ಅವರು ಬಿಹಾರ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇವನ್ನೆಲ್ಲ ಮುಂದಿಟ್ಟು ಸ್ವತಂತ್ರ ಮಾಧ್ಯಮಗಳು ಸರಕಾರವನ್ನು ಪ್ರಶ್ನಿಸುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಪ್ರಶ್ನಿಸಿದವರನ್ನೇ ದೇಶದ್ರೋಹದ ಆರೋಪದಲ್ಲಿ ಕೇಂದ್ರ ಸರಕಾರ ಬಂಧಿಸಲು ಮುಂದಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಆರೋಪದ ಮೇಲೆ ಡಾ. ಮೆಡುಸಾ ಎಂದೇ ಖ್ಯಾತಿ ಪಡೆದಿರುವ ಲಕ್ನೋ ವಿವಿಯ ಪ್ರಾಧ್ಯಾಪಕಿ ಮಾದ್ರಿ ಕಾಕೋಟಿ ಮತ್ತು ಖ್ಯಾತ ಭೋಜ್ಪುರಿ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ಉತ್ತರ ಪ್ರದೇಶದಲ್ಲಿ ಈಗಾಗಲೇ ದೇಶದ್ರೋಹ ಪ್ರಕರಣ ದಾಖಲಾಗಿದೆ. ಹಾಗೆಯೇ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ 4ಪಿಎಸ್ ಎಂಬ ಖ್ಯಾತ ಹಿಂದಿ ಯೂಟ್ಯೂಬ್ ಚಾನೆಲ್ನ್ನು ಸರಕಾರ ಬ್ಲಾಕ್ ಮಾಡಿದೆ. ಕಳೆದ ಕೆಲ ದಿನಗಳಿಂದ ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಮೋದಿ ಸರಕಾರವನ್ನು ಟೀಕಿಸುವ ಭದ್ರತಾ ವೈಫಲ್ಯ ಕುರಿತ ಪ್ರಶ್ನೆಗಳ ಹಲವಾರು ವೀಡಿಯೊಗಳನ್ನು ಈ ಚಾನೆಲ್ ಅಪ್ಲೋಡ್ ಮಾಡಿತ್ತು. ದೇಶದ ಹಲವೆಡೆ ಸರಕಾರದ ವೈಫಲ್ಯಗಳನ್ನು ಪ್ರಶ್ನಿಸಿದ ಪತ್ರಕರ್ತರು, ರಾಜಕೀಯ ಚಿಂತಕರ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ. ಸರಕಾರ ತನ್ನ ವೈಫಲ್ಯಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಬದಲು ಅದನ್ನು ಬೆಟ್ಟು ಮಾಡಿ ತೋರಿಸುತ್ತಿರುವ ಮಾಧ್ಯಮಗಳ ಮೇಲೆ ದಾಳಿ ನಡೆಸಲು ಮುಂದಾಗುತ್ತಿರುವುದು ಆತಂಕಕಾರಿಯಾಗಿದೆ. ಇದೇ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ನಮ್ಮದೇ ದೇಶದ ನಾಗರಿಕರ ಮೇಲೆ ಧರ್ಮದ ಆಧಾರದಲ್ಲಿ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದಕರು ಧರ್ಮ ಕೇಳಿ ದಾಳಿ ನಡೆಸಿದಂತೆಯೇ, ಇವರೂ ದೇಶದೊಳಗೆ ಧರ್ಮ ಕೇಳಿ ಹಲ್ಲೆ ನಡೆಸುತ್ತಿದ್ದಾರೆ. ಪಹಲ್ಗಾಮ್ ದಾಳಿ ದೇಶದೊಳಗಿರುವ ಈ ಭಯೋತ್ಪಾದಕರಿಗೆ ಒಂದು ನೆಪ ಮಾತ್ರ. ದೇಶದ ಆಂತರಿಕ ಭದ್ರತೆಯನ್ನು, ಮತೀಯ ಸೌಹಾರ್ದವನ್ನು ವಿಚ್ಛಿದ್ರಗೊಳಿಸುವುದು ಇವರ ಗುರಿ. ಸರಕಾರದ ಮಾತ್ರ ಇದನ್ನು ಕಂಡೂ ಕಾಣದಂತಿದೆ.
ಪಹಲ್ಗಾಮ್ ದಾಳಿಯಲ್ಲಿ ಸರಕಾರದ ವೈಫಲ್ಯಗಳನ್ನು ಎತ್ತಿ ಹಿಡಿದರೆ ಅದು ಭಯೋತ್ಪಾದಕರಿಗೆ, ಪಾಕಿಸ್ತಾನಕ್ಕೆ ಸಹಾಯ ಮಾಡಿದಂತಾಗುತ್ತದೆ ಎಂದು ವಾದಿಸುವ ಕೇಂದ್ರ ಸರಕಾರ ಮತ್ತು ಬಿಜೆಪಿ ವಕ್ತಾರರು ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ಹಿಂದೆ, 2008ರಲ್ಲಿ ಮುಂಬೈ ಮೇಲೆ ದಾಳಿ ನಡೆದಾಗ, ಮುಂಬೈ ದಾಳಿಗೆ ಸಂಬಂಧಿಸಿ ಭದ್ರತಾ ವೈಫಲ್ಯದ ಹೊಣೆ ಹೊತ್ತು ಅಂದಿನ ಗೃಹಸಚಿವ ಶಿವರಾಜ್ ಪಾಟೀಲ್ ಮತ್ತು ಭದ್ರತಾ ಸಲಹೆಗಾರರು ರಾಜೀನಾಮೆ ನೀಡಿದ್ದರು. ಇಷ್ಟಾದರೂ ಅಂದಿನ ಬಿಜೆಪಿ ನಾಯಕರು, ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಿರಲಿಲ್ಲ. ಬದಲಿಗೆ, ಮುಂಬೈ ದಾಳಿಯನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನೋಡಿದರು. ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ಕೇಂದ್ರ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿ ಪತ್ರಿಕೆಗಳಿಗೆ ದೊಡ್ಡ ಪ್ರಮಾಣದ ಜಾಹೀರಾತುಗಳನ್ನು ನೀಡಿದರು. ಹಾಗೆಯೇ, ಅಂದಿನ ದಾಳಿಯಲ್ಲಿ ಕೇಸರಿ ಭಯೋತ್ಪಾದನೆಯನ್ನು ಪತ್ತೆ ಹಚ್ಚಿದ್ದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ತಂಡ ಸಾಮೂಹಿಕ ಹತ್ಯೆಗೀಡಾಗಿತ್ತು. ಈ ದಾಳಿಯನ್ನು ಪ್ರತ್ಯೇಕವಾಗಿ ತನಿಖೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಾಗ, ತನಿಖೆ ನಡೆಯದಂತೆ ನೋಡಿಕೊಂಡಿದ್ದು ಬಿಜೆಪಿ ನಾಯಕರೇ. ತನಿಖೆಗೆ ಒತ್ತಾಯಿಸಿದ ಅಂತಿನ ಸಚಿವ ಅಂತುಳೆ ರಾಜೀನಾಮೆ ನೀಡಬೇಕಾಯಿತು. ಇದೀಗ ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿ ಗೃಹ ಸಚಿವರಾಗಲಿ, ಭದ್ರತಾ ಸಲಹೆಗಾರರಾಗಲಿ ರಾಜೀನಾಮೆ ನೀಡಿಲ್ಲ. ಕನಿಷ್ಠ ದುರಂತಕ್ಕಾಗಿ ದೇಶದ ಕ್ಷಮೆಯನ್ನೂ ಯಾಚಿಸಿಲ್ಲ. ಬದಲಿಗೆ, ಅವರ ವೈಫಲ್ಯವನ್ನು ಬೆಟ್ಟು ಮಾಡಿ ತೋರಿಸಿದವರನ್ನು ದಮನಿಸುವ ಕೆಲಸ ನಡೆಸುತ್ತ್ತಿದೆ. ಇದು ಖಂಡನೀಯವಾಗಿದೆ. ಎಲ್ಲಿಯವರೆಗೆ ಕೇಂದ್ರ ಸರಕಾರ ತನ್ನ ತಪ್ಪುಗಳನ್ನು, ವೈಫಲ್ಯಗಳನ್ನು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ತನ್ನ ಗುರಿ ತಲುಪುವುದು ಕಷ್ಟಸಾಧ್ಯವಾಗಿದೆ.