ಬಿಜೆಪಿಯ ಬಳ್ಳಾರಿ ಪಾದಯಾತ್ರೆ ದಿಲ್ಲಿ ಯಾತ್ರೆಯಾಗಿ ಬದಲಾಗಲಿ

ರಾಜ್ಯದಲ್ಲಿ ವಿರೋಧ ಪಕ್ಷವೆನ್ನುವುದು ಅಸ್ತಿತ್ವದಲ್ಲಿದೆ ಎನ್ನುವುದನ್ನು ಸಾಬೀತು ಪಡಿಸುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಳ್ಳಾರಿ ಪಾದಯಾತ್ರೆಯ ಮೂಲಕ ಭಾಗಶಃ ಯಶಸ್ವಿಯಾಗಿದ್ದಾರೆ. ಬಳ್ಳಾರಿ ಪಾದಯಾತ್ರೆ ಎಂದಾಗ ನಮಗೆ ನೆನಪಾಗುವುದು, ಒಂದಾನೊಂದು ಕಾಲದಲ್ಲಿ ಗಣಿರೆಡ್ಡಿಗಳ ಭ್ರಷ್ಟಾಚಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಯಾತ್ರೆ. ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟ ಆಡಳಿತವನ್ನು ಕಿತ್ತು ಹಾಕಲು ಅದು ಪರೋಕ್ಷ ಕಾರಣವಾಯಿತು. ಏದುಸಿರು ಬಿಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಅದು ಮರು ಜೀವ ನೀಡಿತು. ಗಣಿಗಾರಿಕೆಯ ಮೂಲಕ ಇಡೀ ಬಳ್ಳಾರಿಯನ್ನು ಚಿಂದಿ ಮಾಡಿ ಹಾಕಿದ್ದ, ಆ ಭ್ರಷ್ಟ ಹಣದ ಬಲದಲ್ಲಿ ಆಪರೇಷನ್ ಕಮಲದ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದ್ದ ಬಿಜೆಪಿಗೆ ಬಳ್ಳಾರಿ ಯಾತ್ರೆ ಸರಿಯಾದ ಪಾಠವನ್ನೇ ಕಲಿಸಿತ್ತು. ಇಂದಿಗೂ ಬಳ್ಳಾರಿಯಾತ್ರೆ ಎಂದಾಗ ನೆನಪಾಗುವುದು ಸಿದ್ದರಾಮಯ್ಯ ಅವರೇ.
ಇದೀಗ ಮರಳಿ ಅಧಿಕಾರ ಹಿಡಿಯುವುದಕ್ಕೆ ಬಿಜೆಪಿಯೂ ಅದೇ ಬಳ್ಳಾರಿ ಯಾತ್ರೆಯನ್ನು ನೆಚ್ಚಿಕೊಳ್ಳಲು ಮುಂದಾಗಿದೆ. ಆದರೆ ಬಿಜೆಪಿಯ ಬಳ್ಳಾರಿ ಪಾದಯಾತ್ರೆಯ ಪದ ಮೊದಲ ಹೆಜ್ಜೆಯಲ್ಲೇ ಕುಸಿದಿದೆ. ಸಚಿವ ಸಂಪುಟದಲ್ಲಿ ನಾಗೇಂದ್ರ ಅವರ ರಾಜೀನಾಮೆಯನ್ನು ಒತ್ತಾಯಿಸಿ ಬಿಜೆಪಿ ಬಳ್ಳಾರಿ ಯಾತ್ರೆಯನ್ನು ಘೋಷಿಸಿತ್ತು. ಪಾದಯಾತ್ರೆ ಆರಂಭಕ್ಕೆ ಮುನ್ನವೇ ನಾಗೇಂದ್ರ ಅವರು ರಾಜೀನಾಮೆ ನೀಡಿರುವುದರಿಂದ, ಯಾತ್ರೆ ಪ್ರಸ್ತುತತೆಯನ್ನು ಕಳೆದುಕೊಂಡಿತ್ತು. ಈ ಪಾದಯಾತ್ರೆಗೆ ಬಿಜೆಪಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದುದರಿಂದಾಗಿ ಅದನ್ನು ಮುಂದುವರಿಸಲೇ ಬೇಕಾದ ಅನಿವಾರ್ಯತೆಗೆ ಬಿಜೆಪಿ ನಾಯಕರು ಸಿಲುಕಿಕೊಂಡರು. ಕಾಂಗ್ರೆಸ್ ಸರಕಾರವನ್ನು ವಿರೋಧಿಸಲು ಬಿಜೆಪಿ ನಾಯಕರ ಬಳಿ ಯಾವುದೇ ಪರ್ಯಾಯ ಕಾರ್ಯ ಯೋಜನೆಗಳಿಲ್ಲದೆ ಇರುವುದನ್ನೂ ಇದು ಸ್ಪಷ್ಟ ಪಡಿಸಿತ್ತು. ಇದೀಗ ಉತ್ತರ ಕರ್ನಾಟಕದ ಬರ, ಕಾಂಗ್ರೆಸ್ನ ಭ್ರಷ್ಟಾಚಾರ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಅದು ಬಳ್ಳಾರಿ ಪಾದಯಾತ್ರೆಯನ್ನು ಮುಂದುವರಿಸಿದೆ. ಬರ, ಭ್ರಷ್ಟಾಚಾರ ಇತ್ಯಾದಿಗಳಿಗಾಗಿ ಬಳ್ಳಾರಿಯ ಕಡೆಗೆ ಯಾಕೆ ಪಾದಯಾತ್ರೆ ಹೊರಟಿದ್ದೀರಿ ಎನ್ನುವ ಪ್ರಶ್ನೆಗೆ ಬಿಜೆಪಿಯ ನಾಯಕರಲ್ಲೂ ಉತ್ತರವಿಲ್ಲ. ಒಂದು ರೀತಿಯಲ್ಲಿ, ಆಟದಲ್ಲಿ ಸೋಲು ಘೋಷಣೆಯಾಗಿದ್ದರೂ ಆಡಿ ಮುಗಿಸಲೇ ಬೇಕು ಎನ್ನುವ ಕಾರಣಕ್ಕಾಗಿ ಬಳ್ಳಾರಿ ಪಾದಯಾತ್ರೆಯನ್ನು ಬಿಜೆಪಿ ನಾಯಕರು ಮುಂದುವರಿಸಿದಂತಿದೆ.
ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವುದರೊಂದಿಗೆ ಸರಕಾರ ತನ್ನ ತಪ್ಪನ್ನು ಈಗಾಗಲೇ ತಿದ್ದಿಕೊಂಡಿದೆ. ಸಚಿವ ನಾಗೇಂದ್ರ ಗುರುತಿಸಿಕೊಂಡಿರುವುದು ವಾಲ್ಮೀಕಿ ನಿಗಮ ಹಗರಣದಲ್ಲಿ. ಆದರೆ ಇಡೀ ಬಳ್ಳಾರಿಯನ್ನು ನುಂಗಿ ನೊಣೆ ಹಾಕಿದ ರೆಡ್ಡಿ ಸಹೋದರರಿಗೆ ಹೋಲಿಸಿದರೆ ನಾಗೇಂದ್ರ ಅವರ ಹಗರಣ ತೀರಾ ಸಣ್ಣದು. ವಿಪರ್ಯಾಸವೆಂದರೆ, ಬಿಜೆಪಿಯ ಬಳ್ಳಾರಿ ಯಾತ್ರೆಯಲ್ಲಿ ಅದೇ ರೆಡ್ಡಿ ಸಹೋದರರು ನಿರ್ಣಾಯಕ ಪಾತ್ರ ವಹಿಸಿರುವುದು. ಭ್ರಷ್ಟಾಚಾರದ ಗುಗ್ಗುರುಗಳೆಂದೇ ಖ್ಯಾತಿ ವೆತ್ತ ರೆಡ್ಡಿ ಸಹೋದರರನ್ನು ಜೊತೆಗಿಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ ಎನ್ನುವುದೇ ದೊಡ್ಡ ವ್ಯಂಗ್ಯವಾಗಿದೆ. ಬಳ್ಳಾರಿ-ಭ್ರಷ್ಟಾಚಾರ ಎಂದಾಗ ರಾಜ್ಯದ ಕಣ್ಣ ಮುಂದೆ ಬರುವುದು ರೆಡ್ಡಿ ಸಹೋದರರ ಹಗರಣಗಳು. ಬಳ್ಳಾರಿಯನ್ನು ಗುರಿ ಮಾಡಿಕೊಂಡಿರುವ ಈ ಯಾತ್ರೆ ರೆಡ್ಡಿ ಸಹೋದರರ ಕಾರಣಗಳಿಂದಲೇ ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿವೆ.
ಬರ ನಿರ್ವಹಣೆಯ ವೈಫಲ್ಯವನ್ನು ಬಿಜೆಪಿ ಇದೀಗ ಪ್ರಧಾನವಾಗಿ ಮುಂದಿಟ್ಟಿದೆ. ಹಾಗೆಯೇ ಗೃಹ ಲಕ್ಷ್ಮಿ ಹಣ ಪಾವತಿಯಾಗದ ಬಗ್ಗೆಯೂ ತನ್ನ ಆಕ್ಷೇಪಗಳನ್ನು ಎತ್ತಿದೆ. ಇದೇ ಸಂದರ್ಭದಲ್ಲಿ, ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಬಳಕೆಯಾಗ ಬೇಕಾದ ಹಣವನ್ನು ಸರಕಾರ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವ ಬಗ್ಗೆಯೂ ಬಿಜೆಪಿ ಆರೋಪ ಮಾಡುತ್ತಿದೆ. ಬರ ನಿರ್ವಹಣೆಯಲ್ಲಿ ಕೇಂದ್ರ ಸರಕಾರದ ಸಹಕಾರವೂ ಅತ್ಯಗತ್ಯ. ಕೇಂದ್ರ ಸರಕಾರ ಬಜೆಟ್ನಲ್ಲಿ ಈ ಹಿಂದೆ ಘೋಷಿಸಿದ್ದ ಅನುದಾನ ಸೇರಿದಂತೆ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನ ಹಂಚಿಕೆಯ ಪಾಲನ್ನು ತಕ್ಷಣ ಒದಗಿಸಿ ಎಂದು ರಾಜ್ಯದ ಮುಖ್ಯಮಂತ್ರಿ ನೀತಿ ಆಯೋಗದ ಮುಂದೆ ಬೇಡಿಕೆಯಿಟ್ಟಿದ್ದಾರೆ.
ಬರ ಪರಿಹಾರ ನೀಡುವ ಸಂದರ್ಭದಲ್ಲಿ ಈ ಹಿಂದೆ ಯಡಿಯೂರಪ್ಪ ಸರಕಾರದ ಅವಧಿಯಲ್ಲೂ ಕೇಂದ್ರ ಸರಕಾರ ಅಸಹಕಾರವನ್ನು ವ್ಯಕ್ತಪಡಿಸಿತ್ತು. ರಾಜ್ಯದ ಬರ ಸಂತ್ರಸ್ತರಿಗೆ ನೆರವಾಗಬೇಕು ಎಂದು ಯಡಿಯೂರಪ್ಪ ಎರಡೆರಡು ಬಾರಿ ದಿಲ್ಲಿ ಪ್ರವಾಸ ಮಾಡಿದಾಗಲೂ, ಅವರನ್ನು ಕೇಂದ್ರದ ನಾಯಕರು ಭೇಟಿ ಮಾಡಿರಲಿಲ್ಲ. ಸ್ವತಃ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರೇ ರಾಜ್ಯದ ಖಜಾನೆಯಲ್ಲಿ ಹಣವಿದೆ. ಕೇಂದ್ರ ಸರಕಾರ ಪರಿಹಾರ ಬಿಡುಗಡೆ ಮಾಡುವ ಅಗತ್ಯವಿಲ್ಲ ಎಂಬಂತಹ ಹೇಳಿಕೆ ನೀಡಿ ಯಡಿಯೂರಪ್ಪ ಅವರಿಗೆ ಮುಜುಗರ ಉಂಟು ಮಾಡಿದ್ದರು. ಬರ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯವನ್ನು ಟೀಕಿಸುವ ಸಂದರ್ಭದಲ್ಲಿ, ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರಕಾರದ ಪಕ್ಷ ಪಾತ ನೀತಿಯನ್ನು ಬಿಜೆಪಿ ನಾಯಕರು ಗಮನಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ಪಾದಯಾತ್ರೆ ಬಳ್ಳಾರಿಯಿಂದ ನೇರವಾಗಿ ಹೊಸದಿಲ್ಲಿಯ ಕಡೆಗೆ ತಿರುಗುವ ಅಗತ್ಯವಿದೆ. ಬಳ್ಳಾರಿ ಪಾದಯಾತ್ರೆ ದಿಲ್ಲಿ ಪಾದಯಾತ್ರೆಯಾಗಿ ಬದಲಾದಾಗ ಮಾತ್ರ ರಾಜ್ಯದ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಬಹುದಾಗಿದೆ. ಬರ ಪರಿಹಾರದ ಹೆಸರಿನಲ್ಲಿ ನಷ್ಟಕ್ಕೊಳಗಾಗಿರುವ ರೈತರಿಗೆ ಮೂರು ಕಾಸು ಕೊಟ್ಟು ಈ ಹಿಂದೆ ಸರಕಾರ ಕೈ ತೊಳೆದುಕೊಳ್ಳುತ್ತಿತ್ತು. ಈ ಬಾರಿ, ಸರಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಪರೋಕ್ಷವಾಗಿ ಬರ ಪರಿಹಾರದಿಂದ ತತ್ತರಿಸಿರುವ ಬಹಳಷ್ಟು ರೈತರಿಗೆ ಸಹಾಯಕ್ಕೆ ಬಂದಿದೆ ಎನ್ನುವುದನ್ನು ಬಿಜೆಪಿ ನಾಯಕರು ಗಮನಿಸಬೇಕು. ಗೃಹ ಲಕ್ಷ್ಮಿಯಿಂದ ಈ ವರೆಗೆ ರೈತರಿಗೆ ಸಂದಿರುವ ಹಣ, ಶಕ್ತಿ ಯೋಜನೆಯಿಂದ ಗ್ರಾಮೀಣ ಮಹಿಳೆಯರು ಪಡೆದ ಶಕ್ತಿ ಪರೋಕ್ಷವಾಗಿ ಬರ, ನಿರುದ್ಯೋಗದಿಂದ ತತ್ತರಿಸಿದ ಗ್ರಾಮೀಣರಿಗೆ ಸಣ್ಣ ಸಾಂತ್ವನವನ್ನು ನೀಡಿದೆ. ಈ ಕಾರಣಕ್ಕಾಗಿಯೇ ಇಂದು ಬಿಜೆಪಿಯ ಹೋರಾಟ ಜನಸ್ಪಂದನವನ್ನು ಪಡೆಯುತ್ತಿಲ್ಲ. ಈ ಪಾದಯಾತ್ರೆಯಲ್ಲಿ ಜನರ ಆಕ್ರೋಶ ಕಾಣಿಸಿಲ್ಲ. ಬಿಜೆಪಿಯ ರಾಜಕೀ ಯ ಅಗತ್ಯವಷ್ಟೇ ಪ್ರತಿಭಟನೆಯಲ್ಲಿ ಎದ್ದು ಕಾಣುತ್ತಿದೆ. ಸದ್ಯಕ್ಕೆ ಈ ಪಾದಯಾತ್ರೆಯ ಮೂಲಕ ವಿಜಯೇಂದ್ರ ಅವರ ವರ್ಚಸ್ಸು ಬಿಜೆಪಿಯೊಳಗೆ ಹಿಗ್ಗಿದರೆ ಅದೇ ಬಹುದೊಡ್ಡ ಯಶಸ್ಸು. ಪಾದಯಾತ್ರೆಯ ಆರಂಭದಲ್ಲೇ ಮಿತ್ರ ಪಕ್ಷವಾಗಿರುವ ಜೆಡಿಎಸ್ ಮುನಿಸಿ ಕೂತಿದೆ. ಬಿಜೆಪಿಯ ಇತರ ನಾಯಕರು, ಈ ಪಾದಯಾತ್ರೆಯ ಲಾಭವನ್ನು ಎಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರರು ತಮ್ಮದಾಗಿಸಿಕೊಳ್ಳುತ್ತಾರೋ ಎನ್ನುವ ಆತಂಕದಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಬಳ್ಳಾರಿ ತಲುಪುವ ಮೊದಲೇ ಪಾದಯಾತ್ರೆಯ ಕಾಲು ಸೋತರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.






