ಸೋನು ನಿಗಮ್ ಎನ್ನುವ ಉತ್ತರದ ಕತ್ತೆ!

PC: screengrab/instagram.com/sonunigamofficial
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹಾಡು, ಸಂಗೀತ ಭಾಷೆಯ ಗೋಡೆಗಳನ್ನು ಒಡೆದು ಮನಸ್ಸುಗಳನ್ನು ಬೆಸೆಯುತ್ತವೆ ಎನ್ನುವ ಮಾತಿದೆ. ನೂರಾರು ಭಾಷೆಗಳ ತವರಾಗಿರುವ ಭಾರತದಲ್ಲಿ ಭಾಷೆಯ ಗಡಿಗಳಾಚೆಗೆ ಜನರನ್ನು ಒಂದಾಗಿ ಬೆಸೆದಿರುವುದು ಸಂಗೀತವಾಗಿದೆ. ಕರ್ನಾಟಕದ ಗಂಗೂಬಾಯ್ ಹಾನಗಲ್, ಭೀಮ್ಸೇನ್ ಜೋಷಿ ಎಂದರೆ ಇಡೀ ದೇಶ ತಲೆದೂಗುತ್ತದೆ. ಉತ್ತರ ಪ್ರದೇಶದ ಬಿಸ್ಮಿಲ್ಲಾಖಾನ್ ಅವರು ಉತ್ತರ ಭಾರತದಲ್ಲಿ ಎಷ್ಟು ಜನಪ್ರಿಯರೋ ಅಷ್ಟೇ ದಕ್ಷಿಣ ಭಾರತದಲ್ಲೂ ಜನಪ್ರಿಯರು. ಎ. ಆರ್. ರೆಹಮಾನ್ ಅವರು ತಮಿಳುನಾಡಿನಿಂದ ಹೊರಹೊಮ್ಮಿದ ಪ್ರತಿಭೆಯಾದರೂ, ತಮ್ಮ ಸಂಗೀತ ಸಾಧನೆಯಿಂದ ವಿಶ್ವಮಟ್ಟದಲ್ಲಿ ಜನಮನ್ನಣೆಯನ್ನು ಪಡೆದಿದ್ದಾರೆ. ಲತಾ ಮಂಗೇಶ್ಕರ್ ಹಾಡಿದ್ದು ಹಿಂದಿಯಲ್ಲೇ ಆಗಿದ್ದರೂ, ಆಕೆಯನ್ನು ಹೃದಯದಲ್ಲಿಟ್ಟು ಪ್ರೀತಿಸುವ ಸಾವಿರಾರು ಅಭಿಮಾನಿಗಳು ಕರ್ನಾಟಕದಲ್ಲಿದ್ದಾರೆ. ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿರುವ ಎಸ್. ಪಿ. ಬಾಲಸುಬ್ರಹ್ಮಣ್ಯನ್ ಅವರು ಆಂಧ್ರದವರಾದರೂ, ಕನ್ನಡದಲ್ಲಿ ಕನ್ನಡಿಗರಾಗಿ, ಮಲಯಾಳಂನಲ್ಲಿ ಮಲಯಾಳಿಗರಾಗಿ, ತಮಿಳಿನಲ್ಲಿ ತಮಿಳಿಗರಾಗಿ ಗುರುತಿಸಲ್ಪಡುತ್ತಿರುವವರು. ಆದರೆ ದುರದೃಷ್ಟವಶಾತ್, ಇತ್ತೀಚಿನ ದಿನಗಳಲ್ಲಿ ರಾಜಕೀಯದ ವಿಷಗಾಳಿ ಈ ಗಾಯನಲೋಕವನ್ನೂ ಕಲುಷಿತಗೊಳಿಸುತ್ತಿದೆ. ಪರಿಣಾಮವಾಗಿ, ಗಾಯಕರೂ ತಮ್ಮ ಮಧುರ ಹಾಡುಗಳ ಬದಲಿಗೆ ರಾಜಕೀಯ ಕರ್ಕಶ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಜನರನ್ನು ಭಾಷೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಒಡೆಯುವುದಕ್ಕೆ ಸಂಗೀತಗಾರರೇ ಕಾರಣರಾಗುತ್ತಿದ್ದಾರೆ.
‘ಕನ್ನಡದಲ್ಲಿ ಹಾಡಲು ಒತ್ತಾಯಿಸಿದ ಅಭಿಮಾನಿಗಳನ್ನು ಭಯೋತ್ಪಾದಕರಿಗೆ ಹೋಲಿಸಿದ’ ಆರೋಪದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಮಾರಂಭವೊಂದರಲ್ಲಿ ಈತ ಹಾಡುತ್ತಿದ್ದಾಗ ಅಭಿಮಾನಿಗಳು ‘ಕನ್ನಡ... ಕನ್ನಡ...’ ಎಂದು ಕೂಗಿದ್ದು ಈತನಿಗೆ ‘ಭಯೋತ್ಪಾದನೆ’ಯಂತೆ ಕಂಡಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಅದೇ ಸಭೆಯಲ್ಲಿ ‘‘ಪಹಲ್ಗಾಮ್ನಲ್ಲಿ ಇದೇ ಕಾರಣಕ್ಕೆ ದಾಳಿ ನಡೆಯಿತು’ ಎಂದು ಹೇಳಿ ತನ್ನ ಒಳಗಿನ ವಿಷವನ್ನು ಜನರ ಮುಂದೆ ಕಕ್ಕಿಬಿಟ್ಟರು. ಕನ್ನಡದಲ್ಲಿ ಹಾಡಲು ಒತ್ತಾಯಿಸಿದ ಕನ್ನಡಾಭಿಮಾನಿ ಈತನ ಪಾಲಿಗೆ ಪಹಲ್ಗಾಮಿನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ ಉಗ್ರಗಾಮಿಯಂತೆ ಕಂಡಿದ್ದ. ‘ಮುಂಗಾರು ಮಳೆಯೇ ...’ ಸೇರಿದಂತೆ ಒಂದಿಷ್ಟು ಕನ್ನಡ ಹಾಡುಗಳನ್ನು ಹಾಡಿದ ಕಾರಣಕ್ಕಾಗಿಯೇ ಈತನನ್ನು ಅಗಾಧವಾಗಿ ಪ್ರೀತಿಸಿದ್ದ ಕನ್ನಡಿಗರನ್ನು ಭಯೋತ್ಪಾದಕರು ಎಂದು ಕರೆದಿರುವುದು ಸರ್ವ ಕನ್ನಡಿಗರನ್ನೂ ಆಘಾತಕ್ಕೆ ತಳ್ಳಿದೆ. ಇವರೊಳಗಿರುವ ಹಿಂದಿಯ ಕುರಿತ ಮೇಲರಿಮೆಯೇ ಕನ್ನಡಿಗರನ್ನು ಭಯೋತ್ಪಾದಕರೆಂದು ಕರೆಯಲು ಕುಮ್ಮಕ್ಕು ನೀಡಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತನ್ನ ಮಾತುಗಳನ್ನು ಬಳಿಕವೂ ಸಮರ್ಥಿಸಿಕೊಂಡಿದ್ದಾರೆ. ‘ಕನ್ನಡ ಕನ್ನಡ’ ಎಂದು ಕೂಗಿದ ಅಭಿಮಾನಿಗಳನ್ನು ವ್ಯಂಗ್ಯ ಮಾಡಿ ಇನ್ನೊಂದು ವೀಡಿಯೊವನ್ನು ಹರಿಯಬಿಟ್ಟಿದ್ದು, ‘‘ಅವರು ನನ್ನನ್ನು ಕನ್ನಡ ಹಾಡು ಹಾಡಲು ಬೆದರಿಸಿದ್ದರು’’ ಎಂದು ಸುಳ್ಳೇ ಆರೋಪ ಹೊರಿಸಿದ್ದಾರೆ. ಸೋನು ನಿಗಮ್ ಕರ್ನಾಟಕದಲ್ಲಿ ಚಿರಪರಿಚಿತರಾಗಿದ್ದು ‘ಮುಂಗಾರು ಮಳೆ’ ಸಿನೆಮಾದಲ್ಲಿ ಕನ್ನಡ ಹಾಡುಗಳನ್ನು ಹಾಡಿದ ಬಳಿಕ. ತಪ್ಪು ತಪ್ಪು ಕನ್ನಡ ಉಚ್ಚಾರ ಮಾಡಿದರೂ, ಹಿಂದಿ ಭಾಷಿಗನಾಗಿರುವ ಗಾಯಕನೊಬ್ಬ ತನ್ನ ಜೇನು ಧ್ವನಿಯಲ್ಲಿ ಕನ್ನಡ ಹಾಡುಗಳನ್ನು ಹಾಡಿದ್ದಾನಲ್ಲ ಎನ್ನುವ ಸಹೃದಯತೆಯಿಂದ ಈತನನ್ನು ಕನ್ನಡಿಗರು ಹಚ್ಚಿಕೊಂಡಿದ್ದರು. ಕನ್ನಡ ಸಿನೆಮಾಗಳಲ್ಲಿ ಹಾಡುವಂತೆ ಯಾರೂ ಈತನನ್ನು ಬಲವಂತ ಪಡಿಸಿರಲಿಲ್ಲ. ಹಿಂದಿಯಲ್ಲಿ ತನ್ನ ಜನಪ್ರಿಯತೆ ಕುಸಿದಿದ್ದ ಕಾರಣ, ಹಣದ ಆಸೆಗಾಗಿ ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಹಾಡಿದ್ದಾರೆಯೇ ಹೊರತು, ಕನ್ನಡದ ಮೇಲಿನ ಪ್ರೀತಿಯಿಂದಲೋ, ಕನ್ನಡವನ್ನು ಉದ್ಧರಿಸುವ ದೃಷ್ಟಿಯಿಂದಲೋ ಅಲ್ಲ. ಕನ್ನಡ ಸಿನೆಮಾಗಳಲ್ಲಿ ಈತ ಕನ್ನಡ ಹಾಡುಗಳನ್ನು ಹಾಡದೇ ಇದ್ದಿದ್ದರೆ ಮೊನ್ನೆ ಬೆಂಗಳೂರಿನಲ್ಲಿ ಈತನನ್ನು ಕನ್ನಡ ಹಾಡು ಹಾಡಲು ಒತ್ತಾಯಿಸುವ ಪ್ರಮೇಯವೇ ಬರುತ್ತಿರಲಿಲ್ಲ.
ಎಲ್ಲೋ ದಿಲ್ಲಿ ಅಥವಾ ಇನ್ನಿತರ ರಾಜ್ಯಗಳಲ್ಲಿ ಈತನಿಗೆ ಕನ್ನಡದಲ್ಲಿ ಹಾಡುವ ಒತ್ತಾಯ ಬಂದಿದ್ದರೆ ಒತ್ತಾಯಿಸಿದವರನ್ನು ಭಾಷಾಂಧರು ಎಂದು ಕರೆಯಬಹುದಿತ್ತು. ಕರ್ನಾಟಕದಲ್ಲಿ ಅದೂ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಹಿಂದಿ ಹಾಡುಗಳ ನಡುವೆ ಕನ್ನಡ ಹಾಡುಗಳನ್ನು ಹಾಡಲು ಬೇಡಿಕೆಯಿಟ್ಟರೆ ಅದು ಭಯೋತ್ಪಾದನೆಯಾಗುವುದು ಹೇಗೆ? ಇಷ್ಟಕ್ಕೂ ಕನ್ನಡವೆನ್ನುವುದು ಪಾಕಿಸ್ತಾನಿ ಭಾಷೆಯೇ? ಭಾರತದ ಇತರ ಎಲ್ಲ ಪ್ರಾದೇಶಿಕ ಭಾಷೆಗಳಂತೆಯೇ ಸಂವಿಧಾನದಲ್ಲಿ ಸ್ಥಾನಮಾನವನ್ನು ಪಡೆದಿದೆ ಮಾತ್ರವಲ್ಲ, ಅದು ಕರ್ನಾಟಕದ ರಾಜ್ಯಭಾಷೆಯಾಗಿದೆ. ಕನ್ನಡ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲ, ಇದರ ಪ್ರಾಚೀನತೆಯನ್ನು ಮನಗಂಡು ಕೇಂದ್ರ ಸರಕಾರ ಕನ್ನಡಕ್ಕೆ ‘ಶಾಸ್ತ್ರೀಯ ಸ್ಥಾನಮಾನ’ವನ್ನು ನೀಡಿದೆ. ಕೇಳುಗರು ಕೇಳುವ ಮುನ್ನವೇ ಕನ್ನಡ ಹಾಡುಗಳನ್ನು ಹಾಡುವ ಮೂಲಕ ನೆರೆದವರನ್ನು ಖುಷಿ ಪಡಿಸುವುದು ಸೋನುನಿಗಮ್ ಕರ್ತವ್ಯವಾಗಿತ್ತು. ಯಾಕೆಂದರೆ ಆ ಸಮಾರಂಭಕ್ಕೆ ಆತ ಹಣ ಪಡೆದು ಜನರನ್ನು ಮನರಂಜಿಸಲು ಬಂದಿದ್ದರು. ದೇಶಪ್ರೇಮದ ಬಗ್ಗೆ ಭಾಷಣ ಮಾಡಲೋ, ಭಯೋತ್ಪಾದನೆಯ ಬಗ್ಗೆ ವಿವರಣೆ ನೀಡಲೋ ಆತನನ್ನು ಸಂಘಟಕರು ಕರೆಸಿರಲಿಲ್ಲ.
ಕರ್ನಾಟಕದೊಳಗೇ ಕನ್ನಡ ಮಾತನಾಡಿದ ಕಾರಣಕ್ಕಾಗಿ ಹಲ್ಲೆಗೊಳಗಾಗುವಂತಹ ಸ್ಥಿತಿ ಇಂದು ಕನ್ನಡಿಗರದ್ದಾಗಿದೆ. ‘ಕನ್ನಡ ಮಾತನಾಡಿದವರನ್ನು’ ಹೀನಾಯವಾಗಿ ನೋಡುವುದು, ನಿಂದಿಸುವುದು, ಹಿಂದಿ ಮಾತನಾಡಲು ಒತ್ತಾಯಿಸುವುದು ನಿರಂತರವಾಗಿ ನಡೆಯುತ್ತಿವೆ. ಇತ್ತೀಚೆಗೆ ವಾಯುಪಡೆ ಅಧಿಕಾರಿಯೊಬ್ಬ ಕನ್ನಡಿಗ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವುದು ಮಾತ್ರವಲ್ಲ, ‘ಕನ್ನಡದಲ್ಲಿ ಮಾತನಾಡದೇ ಇದ್ದುದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ’ ಎಂದು ಕನ್ನಡಿಗನ ಮೇಲೆಯೇ ದೂರು ನೀಡಿದ್ದ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಂತಹದೇ ಕೃತ್ಯವೊಂದು ಇದೀಗ ಗಾಯಕ ಸೋನು ನಿಗಮ್ರಿಂದ ನಡದಿದೆ. ಕನ್ನಡದಲ್ಲಿ ಹಾಡಲು ಬೇಡಿಕೆಯಿಟ್ಟ ಕಾರಣಕ್ಕೆ ಕನ್ನಡಿಗರನ್ನು ‘ಭಯೋತ್ಪಾದಕರೆಂದು’ ಕರೆದಿರುವುದಲ್ಲದೆ, ಕನ್ನಡಿಗರು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮಗಳ ಮುಂದೆ ಅಲವತ್ತುಕೊಳ್ಳುತ್ತಿದ್ದಾರೆ. ಸೋನು ನಿಗಮ್, ಹಿಂದಿಯ ವಿರುದ್ಧ ಧ್ವನಿಯೆತ್ತುತ್ತಿರುವ ಇಡೀ ದಕ್ಷಿಣ ಭಾರತದ ಕುರಿತಂತೆ ಆಳದಲ್ಲಿ ಅಸಹನೆಯನ್ನು ಹೊಂದಿದ್ದಾರೆ. ಉತ್ತರ ಭಾರತದ ಸರ್ವಾಧಿಕಾರಿ ಧೋರಣೆಯ ವಿರುದ್ಧ, ಭಾಷಾ ಹೇರಿಕೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿರುವ ದಕ್ಷಿಣ ಭಾರತೀಯರು ಆತನಿಗೆ ಭಯೋತ್ಪಾದಕರಂತೆ ಭಾಸವಾಗುತ್ತಿದ್ದಾರೆ. ಅದು ಬೆಂಗಳೂರಿನ ಸಮಾರಂಭದಲ್ಲಿ ಸ್ಫೋಟಗೊಂಡಿದೆ.
ಕನ್ನಡಿಗರನ್ನು ಭಯೋತ್ಪಾದಕರು ಎಂದು ಕರೆದ ಸೋನು ನಿಗಮ್ರನ್ನು ಕನ್ನಡ ಸಿನೆಮಾ ರಂಗ ಸಂಪೂರ್ಣ ಹೊರಗಿಡಬೇಕಾಗಿದೆ. ಮಾತ್ರವಲ್ಲ, ಅಪ್ಪಟ ಕನ್ನಡ ಪ್ರತಿಭಾವಂತ ಗಾಯಕರಿಗೆ ಪ್ರೋತ್ಸಾಹವನ್ನು ನೀಡಿ, ಬೆಳೆಸಬೇಕಾಗಿದೆ. ‘‘ಉತ್ತರದ ಕಾಶಿಯಲಿ ಕತ್ತೆ ಮಿಂದೈ ತರಲು, ದಕ್ಷಿಣದ ದೇಶಕದು ಕುದುರೆಯಹುದೆ?’’ (ಉತ್ತರ ಭಾರತದ ಕತ್ತೆ, ಕಾಶಿಯಲ್ಲಿ ಮಿಂದು ದಕ್ಷಿಣ ಭಾರತಕ್ಕೆ ಬಂದರೆ ಅದು ಕುದುರೆಯಾಗುತ್ತದೆಯೆ?) ಎಂದು ರಾಷ್ಟ್ರಕವಿ ಕುವೆಂಪು ಕೇಳಿದಂತೆ, ಹಿಂದಿ ಹಾಡುಗಾರರನ್ನು ತಂದು ಕನ್ನಡದಲ್ಲಿ ಹಾಡಿಸಿದರೆ ಅವರು ಕನ್ನಡತನವನ್ನು ತಮ್ಮ ಧ್ವನಿಯಲ್ಲಿ ಹೊರಹೊಮ್ಮಿಸಲಾರರು ಎನ್ನುವುದನ್ನು ಸೋನು ನಿಗಮ್ ಸಾಬೀತು ಪಡಿಸಿದ್ದಾರೆ. ಈ ಉತ್ತರದ ಕತ್ತೆಯನ್ನು ಮತ್ತೆ ಉತ್ತರಕ್ಕೆ ಓಡಿಸುವ ಕೆಲಸ, ಕನ್ನಡಿಗರಿಂದ ನಡೆಯಬೇಕಾಗಿದೆ.