ಸಚಿವರ ಈ ಮನಸ್ಥಿತಿಯನ್ನು ಶುಚಿಗೊಳಿಸುವವರು ಯಾರು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪೌರ ಕಾರ್ಮಿಕರ ಮುಂದೆ ಅನಾವರಣಗೊಂಡ ಸಚಿವ ಕೃಷ್ಣ ಬೈರೇಗೌಡರ ಫ್ಯೂಡಲ್ ಮನಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಚಿವರು ಪೌರ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡ ರೀತಿ, ಈ ಸಮಾಜ ಪೌರಕಾರ್ಮಿಕರ ಕುರಿತಂತೆ ಹೊಂದಿರುವ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ‘‘ಭಾರತ ಚಂದ್ರನನ್ನು ತಲುಪಿದೆ ಎಂದು ಹೆಮ್ಮೆ ಪಡುತ್ತಿದ್ದೇವೆ. ಆದರೆ ದೇಶದಲ್ಲಿ ಮಲ ಹೊರುವ ಪದ್ಧತಿ ಮಾತ್ರ ಇನ್ನೂ ಜೀವಂತವಿದೆ. ಜಾತಿ ವ್ಯವಸ್ಥೆಯ ಸಾಮಾಜಿಕ ಅನಿಷ್ಟದ ಭಾಗವಾಗಿ, ಕೆಲವು ನಾಗರಿಕರು ಇನ್ನೂ ಮಾನವ ಘನತೆಗೆ ವಿರುದ್ಧವಾದ ಕೆಲಸವನ್ನು ಮಾಡುವಂತಾಗಿದೆ’’ ಎಂದು ಎರಡು ದಿನಗಳ ಹಿಂದೆಯಷ್ಟೇ ಬಾಂಬೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಭಾರತ ಯಾಕೆ ಇನ್ನೂ ಮಲಹೊರುವ ವ್ಯವಸ್ಥೆಯನ್ನು ಉಳಿಸಿಕೊಂಡಿದೆ ಎನ್ನುವುದಕ್ಕೆ ಕೃಷ್ಣ ಬೈರೇಗೌಡರ ಮಾತಿನಲ್ಲೇ ಉತ್ತರಗಳಿವೆ.
ಪೌರ ಕಾರ್ಮಿಕರು ಕೆಲಸಕ್ಕೆ ಸರಿಯಾಗಿ ಬರದಿದ್ದರೆ, ಬಂದರೂ ತಮ್ಮ ಕೆಲಸ ಮಾಡದೇ ಇದ್ದರೆ ನಗರವನ್ನು ಸ್ವಚ್ಛವಾಗಿಡುವುದು ಹೇಗೆ ಎಂಬುದು ಸಚಿವರ ಪ್ರಶ್ನೆ. ನಿಯಮಿತವಾಗಿ ಕರ್ತವ್ಯಕ್ಕೆ ಹಾಜರಾಗದವರನ್ನು ವಜಾಗೊಳಿಸುವ ಬಗ್ಗೆಯೂ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಕೆಲಸಕ್ಕೆ ಬರದೇ ಇರುವುದರಿಂದ ನಗರ ಕೊಳಚೆಯಿಂದ ನಾರುತ್ತಿದೆ. ಕೆಲಸಕ್ಕೇ ಸರಿಯಾಗಿ ಬರದವರನ್ನು ಏಕೆ ಖಾಯಂಗೊಳಿಸಬೇಕು ಎಂದು ಕೇಳಿದ್ದಾರೆ. ಸಚಿವರ ತರಾಟೆಯಲ್ಲಿ ಸತ್ಯ ಇದ್ದಿರಲೂಬಹುದು. ಕನಿಷ್ಠ ಅನುಮತಿಯನ್ನೂ ಪಡೆಯದೆ ಶೇ.30ರಷ್ಟು ಪೌರ ಕಾರ್ಮಿಕರು ಕೆಲಸಕ್ಕೆ ಬರದೇ ಇರುವುದನ್ನು ಗಮನಿಸಿದ್ದಾರೆ. ಇದು ನಿತ್ಯವೂ ನಡೆಯುತ್ತಿರುವುದರ ಬಗ್ಗೆ, ಕೇಳಿದರೆ ಅಥವಾ ಸಂಬಳ ಕಡಿತಗೊಳಿಸಿದರೆ ಧರಣಿಯಂಥ ಒತ್ತಡ ತಂತ್ರಕ್ಕೆ ಮುಂದಾಗುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ವಸ್ತುಸ್ಥಿತಿ ಕಣ್ಣೆದುರಿಗಿದ್ದ ಹೊತ್ತಲ್ಲೇ ಕೆಲಸ ಖಾಯಮಾತಿಗಾಗಿ ಪೌರ ಕಾರ್ಮಿಕರು ಮನವಿ ಕೊಡಲು ಬಂದಿದ್ದಾರೆ ಮತ್ತು ಅವರು ಸಚಿವರ ಆಕ್ರೋಶಕ್ಕೆ ತುತ್ತಾದ ಪ್ರಸಂಗ ನಡೆದಿದೆ.
ಯಾವುದೇ ನಗರವೊಂದರ ಒಟ್ಟು ವ್ಯವಸ್ಥೆಯಲ್ಲಿ ಪೌರ ಕಾರ್ಮಿಕರು ಬಹಳ ಮುಖ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪೌರ ಕಾರ್ಮಿಕರಿಲ್ಲದೆ ನಗರ ಸ್ವಚ್ಛವಾಗಿ, ಸುಂದರವಾಗಿ ಮತ್ತು ಆರೋಗ್ಯಪೂರ್ಣವಾಗಿ ಇರಲು ಸಾಧ್ಯವಿಲ್ಲ. ಒಂದು ಮನೆಯೊಳಗೆ ಎಲ್ಲವೂ ಸುಸ್ಥಿತಿಯಲ್ಲಿದೆ ಎಂದರೆ, ಅದನ್ನೆಲ್ಲ ನೋಡಿಕೊಳ್ಳುವ ಒಂದು ಮನಸ್ಸು ಅಲ್ಲಿ ನಿರಂತರವಾಗಿ ಸಕ್ರಿಯವಾಗಿದೆ ಎಂದರ್ಥ. ಹಾಗೆಯೇ, ಬೆಂಗಳೂರಿನಂಥ ಒಂದು ನಗರ ಲಕ್ಷಣವಾಗಿರಲು ಅದರ ಹಿಂದೆ ದುಡಿಯುವ ಅದೆಷ್ಟೋ ಕೈಗಳಿವೆ. ಅಂಥ ಕೈಗಳಲ್ಲಿ, ಕರ್ನಾಟಕದಾದ್ಯಂತದ ಸುಮಾರು 42,000 ಪೌರ ಕಾರ್ಮಿಕರೂ ಸೇರುತ್ತಾರೆ. ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳೂ ಹಲವು. ತಾವು ಮಾಡಬೇಕಿರುವ ಕೆಲಸದ ಕಾರಣಕ್ಕಾಗಿಯೇ ಅವರು ತೀವ್ರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಕಸ, ಧೂಳು ಮತ್ತು ರಾಸಾಯನಿಕಗಳ ಮಧ್ಯೆ ಕೆಲಸ ಮಾಡುವುದರಿಂದ ಉಸಿರಾಟದ ತೊಂದರೆ, ಸಂಧಿವಾತ, ಚರ್ಮದ ಕಾಯಿಲೆಗಳು ಅವರನ್ನು ಕಾಡುತ್ತವೆ. ಅನೇಕ ಕಡೆಗಳಲ್ಲಿ ಇಂದಿಗೂ ಪೌರ ಕಾರ್ಮಿಕರಿಗೆ ಗುಣಮಟ್ಟದ ಕೈಗವಸು, ಮಾಸ್ಕ್ ಮತ್ತು ಬೂಟುಗಳನ್ನು ನಿಯಮಿತವಾಗಿ ವಿತರಿಸುತ್ತಿಲ್ಲ ಎಂಬ ದೂರುಗಳಿವೆ. ಖಾಯಂಗೊಂಡ ಪೌರ ಕಾರ್ಮಿಕರಿಗೆ ಉತ್ತಮ ಅನುಕೂಲಗಳಿದ್ದರೂ, ಗುತ್ತಿಗೆ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವವರು ಆರ್ಥಿಕ ಅಭದ್ರತೆಯನ್ನು ಎದುರಿಸುತ್ತಾರೆ. ಇನ್ನೊಂದೆಡೆ, ಸ್ವಚ್ಛತಾ ಕೆಲಸವನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿ ನೋಡುವ ಸಾಮಾಜಿಕ ವ್ಯವಸ್ಥೆಯಲ್ಲಿ ತಾರತಮ್ಯದ ದೃಷ್ಟಿಗೆ ತುತ್ತಾಗಿದ್ದೇವೆಂಬ ಸಂಕಟವೂ ಅವರಲ್ಲಿದೆ. ಇವತ್ತಿನ ಬದಲಾಗುತ್ತಿರುವ ದಿನಮಾನಗಳಲ್ಲಿ ಬಹಳಷ್ಟು ಸುಧಾರಣೆ ಕಂಡಿದ್ದರೂ, ಘನತೆಯ ಬದುಕಿನ ಹಂಬಲ ಹಾಗೆಯೇ ಉಳಿದಿದೆ. ಸರಕಾರ ಮತ್ತು ಸಂಘಟನೆಗಳು ಪೌರ ಕಾರ್ಮಿಕರ ಸ್ಥಿತಿ ಸುಧಾರಣೆಗೆ ಪ್ರಯತ್ನಿಸುತ್ತಲೇ ಇವೆ. ಕಳೆದ ವರ್ಷ ಕಾರ್ಮಿಕರ ದಿನದಂದೇ 12 ಸಾವಿರ ಪೌರಕಾರ್ಮಿಕರನ್ನು ಇದೇ ಕಾಂಗ್ರೆಸ್ ಸರಕಾರ ಖಾಯಂಗೊಳಿಸಿದೆ. ಇನ್ನೂ 9 ಸಾವಿರ ನೌಕರರ ಸೇವೆ ಖಾಯಂಗೊಳಿಸುವ ಭರವಸೆಯನ್ನೂ ನೀಡಿದೆ. ಮಧ್ಯವರ್ತಿಗಳ ಕಾಟ ತಪ್ಪಿಸಲು ನೇರ ವೇತನ ಪಾವತಿ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ಪೌರ ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಕಾನೂನು ರಕ್ಷೆಯೂ ಇದೆ.
ಎಲ್ಲ ವೃತ್ತಿಯಂತಲ್ಲ ಪೌರ ಕಾರ್ಮಿಕರ ಕೆಲಸ. ಆ ಕೆಲಸಕ್ಕೆ ಎಲ್ಲ ಜಾತಿ, ವರ್ಗದ ಜನರು ತಾಮುಂದು ಎಂದು ಬರುವುದಿಲ್ಲ. ಈ ಕೆಲಸದ ಜೊತೆಗೆ ಜಾತಿ ವ್ಯವಸ್ಥೆಯೂ ಸುತ್ತಿಕೊಂಡಿದೆ. ಈ ಕೆಲಸದ ಮೂಲಕವೇ ಅವರ ಸಾಮಾಜಿಕ ಸ್ಥಾನಮಾನವನ್ನು ಸಮಾಜ ನಿರ್ಧರಿಸುತ್ತದೆ. ಆದುದರಿಂದಲೇ ಪೌರ ಕಾರ್ಮಿಕರ ಜೊತೆಗೆ ಅತ್ಯಂತ ಮಾನವೀಯವಾಗಿ ವರ್ತಿಸುವುದು ಸಚಿವರು, ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಪೌರ ಕಾರ್ಮಿಕರ ಬಗ್ಗೆ ಅಧಿಕಾರಿಗಳು ಕಿವಿಯೂದಿದ್ದನ್ನು ಗಂಭೀರವಾಗಿ ತೆಗೆದುಕೊಂಡು ಸಾರ್ವಜನಿಕವಾಗಿ ಕಾರ್ಮಿಕರ ಜೊತೆಗೆ ಸಂವೇದನಾ ಹೀನ ಮಾತುಗಳನ್ನಾಡುವುದು ಸಚಿವರಾಗಿ ಕೃಷ್ಣ ಬೈರೇಗೌಡರಿಗೆ ಶೋಭೆ ತರುವುದಿಲ್ಲ. ಪೌರ ಕಾರ್ಮಿಕರು ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದಾದರೆ, ಅದಕ್ಕೆ ಕಾರಣಗಳೇನು ಎನ್ನುವುದನ್ನು ಅವರು ಕಂಡುಕೊಳ್ಳಬೇಕು. ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಕಾರ್ಮಿಕರ ಜೊತೆಗೆ ಚರ್ಚಿಸಬೇಕು. ಪ್ರತಿ ದಿನ ಕಸ, ಕೊಳಚೆಗಳ ನಡುವೆ ಬದುಕುವ ಈ ಕಾರ್ಮಿಕರ ಆರೋಗ್ಯ ಪದೇ ಪದೇ ಕೆಡುತ್ತದೆ. ಇವರ ಆರೋಗ್ಯದ ಮೇಲೆ ಕಾಳಜಿಯಿಂದ ಸರಕಾರ ಏನೇನು ಕ್ರಮ ತೆಗೆದುಕೊಂಡಿದೆ, ಏನೇನು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಎನ್ನುವುದರ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತನಾಡಬೇಕು. ಪೌರ ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಅವರಿಗೆ ಅತ್ಯಾಧುನಿಕ ಸಲಕರಣೆಗಳನ್ನು ಸರಕಾರ ಎಷ್ಟರ ಮಟ್ಟಿಗೆ ಒದಗಿಸುತ್ತಿದೆ ಎನ್ನುವುದರ ಬಗ್ಗೆ ವಿಚಾರಣೆ ನಡೆಸಲಿ. ಸರಕಾರ ದಾಖಲೆಗಳಲ್ಲಿ ಪೌರಕಾರ್ಮಿಕರಿಗೆ ನೀಡುತ್ತಿದ್ದೇವೆ ಎನ್ನುವ ಸವಲತ್ತುಗಳು ನಿಜಕ್ಕೂ ತಲುಪುತ್ತಿದೆಯೇ ಎನ್ನುವ ಬಗ್ಗೆ ಸಚಿವರು ಮೊದಲು ವಿಚಾರಣೆ ನಡೆಸಬೇಕು. ಆದರೆ ಸಚಿವರಿಗೆ ಪೌರಕಾರ್ಮಿಕರು ಆಲಸಿ, ಸೋಮಾರಿಗಳಾಗಿ ಭಾಸವಾಗಿದ್ದಾರೆ. ಇದು ಫ್ಯೂಡಲ್ ಮನಸ್ಥಿತಿಯೇ ಹೊರತು ಇನ್ನೇನೂ ಅಲ್ಲ. ಕೊಳಚೆಗಳನ್ನು ಎತ್ತುವುದು ನಿಮ್ಮ ಕರ್ತವ್ಯ ಎಂದು ಕಾರ್ಮಿಕರಿಗೆ ನೆನಪಿಸುವಂತಿದೆ ಸಚಿವರ ಮಾತುಗಳು.
ತಳಸ್ತರದ ಜನರ ಬದುಕಿನ ಕುರಿತಂತೆ ಸಚಿವ ಕೃಷ್ಣ ಬೈರೇಗೌಡರ ಸಂವೇದನಾ ಹೀನ ನಡವಳಿಕೆ ಹೊಸತೇನಲ್ಲ. ಬೀದಿ ಬದಿ ವ್ಯಾಪಾರಿಗಳ ವಿಷಯದಲ್ಲೂ ಇಷ್ಟೇ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ. ನಗರ ಹೊಲಸೆದ್ದು ಹೋಗಿದ್ದರೆ ಅದನ್ನು ಗುಡಿಸಲು ಪೌರಕಾರ್ಮಿಕರೇ ಸಚಿವರಿಗೆ ಯಾಕೆ ಬೇಕು? ನಗರದ ಮೇಲ್ಸ್ತರದ ತರುಣರಿಗೆ ವಾರಕ್ಕೊಂದು ದಿನ ನಗರವನ್ನು ಗುಡಿಸುವ ಹೊಣೆಗಾರಿಕೆಯನ್ನು ನೀಡಲಿ. ಹಾಗೆಯೇ ನಗರವನ್ನು ಪೌರಕಾರ್ಮಿಕರು ಸ್ವಚ್ಛವಾಗಿಟ್ಟಷ್ಟು ಅದನ್ನು ಹೊಲಸೆಬ್ಬಿಸುವ ಮೇಲ್ ಸ್ತರದ ಜನರನ್ನು ತರಾಟೆಗೆ ತೆಗೆದುಕೊಳ್ಳುವ ಎದೆಗಾರಿಕೆಯನ್ನು ಮೊದಲು ಸಚಿವರು ಪ್ರದರ್ಶಿಸಬೇಕು. ಪೌರಕಾರ್ಮಿಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದಕ್ಕಾಗಿ ಸಚಿವರು ಕ್ಷಮೆಯಾಚಿಸಬೇಕು ಮಾತ್ರವಲ್ಲ, ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವ ಭರವಸೆಯನ್ನು ನೀಡಬೇಕು.






